ಮೈಸೂರಿನ ದೇವರಾಜ ಮಾರುಕಟ್ಟೆ ಕುಸಿತ
ಮೈಸೂರು, ಆಗಸ್ಟ್ 29 : ಶಿಥಿಲಗೊಂಡಿರುವ ದೇವರಾಜ ಮಾರುಕಟ್ಟೆಯ ಕಟ್ಟಡದ ನವೀಕರಣ ಕಾಮಗಾರಿ ನಡೆಯುತ್ತಿರುವಾಗಲೇ ಪಾಲಿಕೆ ಕಚೇರಿಯ ಕಟ್ಟಡದ ಭಾಗ ಕುಸಿದು ಬಿದ್ದಿದೆ. ಆದರೆ, ಈ ಘಟನೆಯಿಂದ ಯಾವುದೇ ಅನಾಹುತವಾಗದಿರುವುದು ಸಮಾಧಾನ.
ಮೈಸೂರನ್ನೇ ಬೆಚ್ಚಿ ಬೀಳಿಸಿದ್ದ ಲ್ಯಾನ್ಸ್ಡೌನ್ ಕಟ್ಟಡ ಕುಸಿತ ಪ್ರಕರಣ ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವಾಗವೇ ಈ ರೀತಿಯ ಘಟನೆ ಜರುಗಿರುವುದು ಭಯ ಹುಟ್ಟಿಸಿದೆ. ಏಕೆಂದರೆ ಲ್ಯಾನ್ಸ್ ಡೌನ್ ಕಟ್ಟಡ ಕುಸಿದಾಗ ದೊಡ್ಡ ಅನಾಹುತವೇ ಸಂಭವಿಸಿತ್ತು. ಕಳೆದ ಮೂರು ವರ್ಷಗಳಿಂದ ಅದು ಹಾಗೆಯೇ ಪಾಳು ಬಿದ್ದಿದೆ.[ಅವ್ಯವಸ್ಥೆಯ ಗೂಡು ಹುಬ್ಬಳ್ಳಿ ರೈಲು ನಿಲ್ದಾಣ]

ಭಾನುವಾರ ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ಧನ್ವಂತ್ರಿ ರಸ್ತೆ ಬದಿಯಲ್ಲಿನ ಮಾರುಕಟ್ಟೆ ಕಟ್ಟಡದ ಒಂದು ಭಾಗ ದಿಢೀರ್ ಕುಸಿದಿದೆ. ಕಟ್ಟಡದ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬವೂ ಮುರಿದು ಬಿದ್ದಿದ್ದು ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.[ಇಂಥಾ ಇಕ್ಕಟ್ಟಿನ ಪ್ರದೇಶದಲ್ಲಿ ಕಟ್ಟಿದ ಅಂಥಾ ಬಿಲ್ಡಿಂಗ್!]
ಈ ಭಾಗದಲ್ಲಿ ಪಾಲಿಕೆ ಮಾರುಕಟ್ಟೆಗೆ ಸಂಬಂಧಿಸಿದ ದಾಖಲೆ ಪತ್ರ ನಿರ್ವಹಿಸುವ ಕಚೇರಿ ಹೊಂದಿದ್ದು, ರಜಾ ದಿನವಾದ ಕಾರಣ ಕಟ್ಟಡ ಭಾಗ ಕುಸಿದಾಗ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಳೆ ಇಲ್ಲದಿರುವಾಗಲೇ ಕಟ್ಟಡದ ಒಂದು ಭಾಗ ಕುಸಿದಿರುವುದು ಅಚ್ಚರಿ ತಂದಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಶಾಸಕ ವಾಸು, ಮೇಯರ್ ಬಿ.ಎಲ್.ಭೈರಪ್ಪ, ಡಿಸಿಪಿ ಶೇಖರ್, ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಈ ಘಟನೆ ಬಳಿಕ ಕಟ್ಟಡ ನವೀಕರಣ ಮಾಡಬೇಕೆ? ಅಥವಾ ಮರು ನಿರ್ಮಾಣ ಮಾಡುವುದೇ ಸೂಕ್ತವೇ? ಎಂಬ ಬಗ್ಗೆ ಸೋಮವಾರ ಸಭೆ ಕರೆದು ನಿರ್ಧರಿಸುವುದಾಗಿ ಮೇಯರ್ ಭೈರಪ್ಪ ಹೇಳಿದರು.












Click it and Unblock the Notifications