ಚಾಮುಂಡಿ ಬೆಟ್ಟದಲ್ಲಿ ಜೆಸಿಬಿ ಘರ್ಜನೆಗೆ ಅಂಗಡಿ ಮಳಿಗೆಗಳು ನೆಲಸಮ
ಮೈಸೂರು, ಸೆಪ್ಟೆಂಬರ್ 12: ನಾಡದೇವತೆ ಚಾಮುಂಡೇಶ್ವರಿ ನೆಲೆ ನಿಂತಿರುವ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಖಾಕಿ ಕಾವಲಿನಲ್ಲಿ ಜೆಸಿಬಿಗಳು ಕಾರ್ಯಾಚರಣೆ ಆರಂಭಿಸಿವೆ. ಮಹಿಷಾಸುರನ ಪ್ರತಿಮೆಯಿಂದ ಚಾಮುಂಡೇಶ್ವರಿ ದೇವಾಲಯದವರೆಗಿನ ರಸ್ತೆಯಲ್ಲಿ ಅಕ್ರಮವಾಗಿ ಹಲವು ವರ್ಷಗಳಿಂದ ತಲೆ ಎತ್ತಿ ನಿಂತಿದ್ದ ಮಳಿಗೆಗಳು ನೆಲಸಮವಾಗಿವೆ.
ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಡಿಸಿಪಿ (ಕಾನೂನು ಸುವ್ಯವಸ್ಥೆ) ಮುತ್ತುರಾಜು ಅವರ ಮೇಲ್ವಿಚಾರಣೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೂರು ಜೆಸಿಬಿಗಳ ಸಹಾಯದಿಂದ ಸುಮಾರು 140ಕ್ಕೂ ಹೆಚ್ಚು ಅಕ್ರಮ ಮಳಿಗೆಗಳನ್ನು ತೆರವುಗೊಳಿಸಲಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಅಕ್ರಮವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪಗಳಿದ್ದವು. ಆದರೆ ಇದುವರೆಗೆ ಯಾರೂ ಈ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿರಲಿಲ್ಲ. ಇಲ್ಲಿ 40 ಮಳಿಗೆಗಳು ಮಾತ್ರ ಅಧಿಕೃತವಾಗಿದ್ದವಾದರೂ ಉಳಿದಂತೆ ಹೆಚ್ಚಿನವು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಮಳಿಗೆಗಳಾಗಿದ್ದವು.

ಇಲ್ಲಿರುವ ವ್ಯಾಪಾರಸ್ಥರ ಪೈಕಿ ಕೆಲವರ ಹೆಸರಿನಲ್ಲಿ ಒಂಬತ್ತು, ಮೂರು, ನಾಲ್ಕು ಹೀಗೆ ಅಂಗಡಿ ಮಳಿಗೆಗಳಿದ್ದವು. ಅಕ್ರಮ ಅಂಗಡಿ ಮಳಿಗೆಗಳಿಂದ ತೊಂದರೆಯಾಗುತ್ತಿದೆ ಎಂಬ ವಿಚಾರ ಗೊತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಂಡ ವಿ.ಸೋಮಣ್ಣ ಅವರು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ವೇಳೆ ಅಕ್ರಮ ಮಳಿಗೆಗಳ ನಿರ್ಮಾಣ ಮತ್ತು ಅಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿದು ಬಂದಿದ್ದರಿಂದ ತಕ್ಷಣವೇ ಅಕ್ರಮ ಮಳಿಗೆಗಳ ತೆರವು ಮಾಡುವ ನಿರ್ಧಾರಗಳನ್ನು ಕೈಗೊಂಡರು.
ಈ ಸಂಬಂಧ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾಧಕ ಬಾಧಕಗಳ ಚರ್ಚೆ ನಡೆಸುವ ಮೂಲಕ ಅವರು ಸಂಪೂರ್ಣ ಮಾಹಿತಿಗಳನ್ನು ಕಲೆ ಹಾಕಿದರಲ್ಲದೆ, ಈಗ ವ್ಯಾಪಾರ ಮಾಡಿಕೊಂಡಿರುವ ಕುಟುಂಬಗಳಿಗೆ ತಲಾ ಒಂದರಂತೆ ಮಳಿಗೆಗಳನ್ನು ನೀಡುವ ತೀರ್ಮಾನ ಮಾಡಿ ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನಿರ್ದೇಶನ ನೀಡಿದ್ದರು.
ಈಗಾಗಲೇ ಚಾಮುಂಡಿಬೆಟ್ಟದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಚಾಮುಂಡೇಶ್ವರಿ ದೇವಾಲಯಕ್ಕೆ ಅನತಿ ದೂರದಲ್ಲಿ ವ್ಯಾಪಾರಸ್ಥರಿಗಾಗಿಯೇ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ಸೆ.19ರಂದು ನಡೆಯಲಿದೆ. ಇದೀಗ ತೆರವುಗೊಳಿಸಲಾದವರಿಗೆ ಇಲ್ಲಿ ಅಂಗಡಿ ಮಳಿಗೆಗಳನ್ನು ನೀಡಲಾಗುತ್ತದೆ ಎನ್ನಲಾಗಿದೆ.
ಈ ಹಿಂದೆಯೇ ಅಂಗಡಿ ಮಾಲೀಕರಿಗೆ ನೋಟೀಸ್ ನೀಡಿದ್ದರಿಂದ ಬಹಳಷ್ಟು ಮಂದಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಕೊಂಡೊಯ್ದು ಖಾಲಿ ಮಾಡಿದ್ದರೆ, ಮತ್ತೆ ಕೆಲವರಿಗೆ ತೆರವು ಕಾರ್ಯಾಚರಣೆ ಆರಂಭವಾದ ಬಳಿಕ ತಿಳಿದಿದ್ದರಿಂದ ಸ್ಥಳಕ್ಕೆ ಬಂದು ವಸ್ತುಗಳನ್ನು ಕೊಂಡೊಯ್ಯುವ ಕೆಲಸದಲ್ಲಿ ನಿರತರಾಗಿದ್ದ ದೃಶ್ಯ ಕಂಡು ಬಂದಿತು. ಆದರೆ ಯಾವುದೇ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು ಕಂಡು ಬರಲಿಲ್ಲವಾದರೂ ಕೆಲವು ಅಂಗಡಿ ಮಾಲೀಕರು ಕಣ್ಣೀರಿಡುತ್ತಿದ್ದ ದೃಶ್ಯ ಕಂಡು ಬಂತು.











Click it and Unblock the Notifications