ಶಾಸಕರ 'ಮಹಾರಾಣಿ' ಹೇಳಿಕೆಗೆ ಡಿಸಿ ರೋಹಿಣಿ ಸಿಂಧೂರಿ ತಿರುಗೇಟು
ಮೈಸೂರು, ನವೆಂಬರ್ 26: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ನೀಡಿದ್ದ ಹೇಳಿಕೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ.
ಹುಣಸೂರು ಶಾಸಕರಿಗೆ ಮೂರು ಪುಟಗಳ ಪತ್ರ ಬರೆದಿರುವ ಡಿಸಿ ರೋಹಿಣಿ ಸಿಂಧೂರಿ ಅವರು, ""ಕೆಡಿಪಿ ಸಭೆಯಲ್ಲಿ ನೀಡಿರುವ ಹೇಳಿಕೆಗಳು ಯಾರಿಗೂ ಶೋಭೆ ತರುವಂತದ್ದಾಗಿರುವುದಿಲ್ಲ. ನೀವು ನೀಡಿರುವ ಹೇಳಿಕೆಗಳು ವಾಸ್ತವಾಂಶದಿಂದ ಕೂಡಿರದ ಹಾಗೂ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳದೆ ನೀಡಿದ ಹೇಳಿಕೆಗಳಾಗಿದೆ.''
ಮೈಸೂರಿಗೆ ಮೂರನೇ ಮಹಾರಾಣಿ ಅವಶ್ಯಕತೆಯಿಲ್ಲ: ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಕಿಡಿ
ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಜಿಲ್ಲಾಡಳಿತದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವುದರಿಂದ ಹೇಳಿಕೆಗಳನ್ನು ನೀಡುವ ಸಂದರ್ಭದಲ್ಲಿ ವಾಸ್ತವಾಂಶ ಗಮನದಲ್ಲಿರಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಜನಪ್ರತಿನಿಧಿಗಳನ್ನು ಆಹ್ವಾನಿಸದಿರಲು ತೀರ್ಮಾನ
""ದಸರಾ ಮಹೋತ್ಸವ ಸಂದರ್ಭದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ಹಾಗೂ ವೀರನಹೊಸಹಳ್ಳಿಯಲ್ಲಿ ನಡೆಯುತ್ತಿದ್ದ ಗಜಪಯಣ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ನಿರ್ದೇಶಿಸಲಾಗಿತ್ತು.''
ಉನ್ನತಮಟ್ಟದ ಸಭೆಯು ಸೂಚಿಸಿರುವಂತೆ ಕೇವಲ ಅಧಿಕಾರಿಗಳನ್ನೊಳಗೊಂಡ ತಂಡವು ನಡೆಸಲು ಹಾಗೂ ಯಾವುದೇ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರಲು ತೀರ್ಮಾನ ಮಾಡಲಾಗಿತ್ತು ಎಂದಿದ್ದಾರೆ.
ಯಾವುದೇ ಪತ್ರಗಳು ಸ್ವೀಕೃತವಾಗಿಲ್ಲ
ಅದರಂತೆ ಕೇವಲ ಆನೆಗಳಿಗೆ ಸೀಮಿತ ಸಂಖ್ಯೆಯಲ್ಲಿ ಅಧಿಕಾರಿಗಳು ಭಾಗವಹಿಸಿ ಆನೆಗಳಿಗೆ ಪೂಜೆ ಮಾಡಿ ಸಂಪ್ರದಾಯ ಪಾಲನೆ ಮಾಡಲಾಗಿದೆ ಹೊರತು ತಾವು ಆರೋಪಿಸಿದಂತೆ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿರುವುದಿಲ್ಲ.
""ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಮೇಲೆ ತಮ್ಮಿಂದ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಪತ್ರಗಳು ಸ್ವೀಕೃತವಾಗಿರುವುದಿಲ್ಲ. ಆದರೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವೈಯುಕ್ತಿಕ ಹೆಸರಿನಲ್ಲಿರುವ ಮೈಸೂರು ತಾಲ್ಲೂಕು ಜಯಪುರ ಹೋಬಳಿ ಕೇರ್ಗಳ್ಳಿ ಗ್ರಾಮದ ಹಲವು ಸರ್ವೆ ನಂಬರ್ ಗಳಿಗೆ ಭೂ ಪರಿವರ್ತನೆ ಕೋರಿ ಸಲ್ಲಿಸಿದ ಸಂಬಂಧಕ್ಕೆ ಸೇರಿದೆ.
ನಿಯಮಾನುಸಾರ ಇತ್ಯರ್ಥ
ಇದು ಉಚ್ಛ ನ್ಯಾಯಾಲಯದಲ್ಲಿರುವ ಕಾರಣ ಭೂ ಪರಿವರ್ತನೆ ಮಂಜೂರಾತಿಗೆ ಸಂಬಂಧಪಟ್ಟ ಕಡತ ಬಾಕಿ ಇದ್ದು, ಕಾನೂನಿನ ಅಂಶಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಪರಿಶೀಲನೆಯ ನಂತರ ಕಡತಗಳನ್ನು ನಿಯಮಾನುಸಾರ ಇತ್ಯರ್ಥಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Recommended Video
ರೋಹಿಣಿ ಸಿಂಧೂರಿ ವಿರುದ್ಧ ಕಿಡಿ
ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಅವರು, ಮೈಸೂರಿನಲ್ಲಿ ಈಗಾಗಲೇ ಇಬ್ಬರು ಮಹಾರಾಣಿಯರಿದ್ದಾರೆ. ಮೂರನೇ ಮಹಾರಾಣಿಯ ಅವಶ್ಯಕತೆ ಮೈಸೂರಿಗೆ ಇಲ್ಲ. ನೀವು ಮೂರನೇ ಮಹಾರಾಣಿ ರೀತಿ ವರ್ತಿಸಬೇಡಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದರು. ಕ್ಷೇತ್ರದ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಅವರಿಗೆ ಅನೇಕ ಬಾರಿ ಪತ್ರ ಬರೆದು ಗಮನ ಸೆಳೆದಿದ್ದೇನೆ. ಆದರೆ ಒಂದು ಪತ್ರಕ್ಕೂ ಅವರಿಂದ ಪ್ರತಿಕ್ರಿಯೆ ದೊರೆತ್ತಿಲ್ಲ ಎಂದು ಆರೋಪಿಸಿದರು.