ಡಬ್ಬಲ್ ಡೆಕ್ಕರ್ ಬಸ್ನಲ್ಲಿ ದೀಪಾಲಂಕಾರ ಕಣ್ತುಂಬಿಕೊಂಡ ಜನರು!
ಮೈಸೂರು, ಅಕ್ಟೋಬರ್ 13; ಕೋವಿಡ್ನಿಂದ ಎರಡು ವರ್ಷ ಪ್ರವಾಸಿಗರಿಲ್ಲದೆ ಸೊರಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಗಮಗಿಸುತ್ತಿದೆ. ಅಲ್ಲದೆ, ಲಂಡನ್ ಮಾದರಿಯ ಡಬ್ಬಲ್ ಡೆಕ್ಕರ್ ಬಸ್ಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಡಬ್ಬಲ್ ಡೆಕ್ಕರ್ ಎಂದರೆ ಒಳಗೆ ಹಾಗೂ ಅದರ ಮೇಲೆ ತೆರೆದ ಆಸನಗಳನ್ನು ಒಳಗೊಂಡಿರುವ ಬಸ್. ಮಳೆ ಬಂದರೆ ಒಳಗಿನ ಆಸನದಲ್ಲಿ ಕುಳಿತು ರಕ್ಷಣೆ ಪಡೆಯಬಹುದು. ಮೇಲೆ ತೆರೆದ ಆಸನದ ವ್ಯವಸ್ಥೆ ಇರುವುದರಿಂದ ಪ್ರವಾಸಿಗರು ಕುಳಿತುಕೊಂಡೇ ಇಡೀ ನಗರ ದರ್ಶನ ಮಾಡಬಹುದು.
ಸದ್ಯ ದಸರಾ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮೈಸೂರಿನ ಸೊಬಗನ್ನು ಡಬ್ಬಲ್ ಡೆಕ್ಕರ್ ಬಸ್ನಲ್ಲಿ ಕುಳಿತು ಕಣ್ತುಂಬಿಕೊಳ್ಳಲು ಜನರು ಇಷ್ಟಪಡುತ್ತಿದ್ದಾರೆ. 'ಅಂಬಾರಿ' ಬಸ್ನಲ್ಲಿ ಮೈಸೂರು ನಗರ ವೀಕ್ಷಣೆಗೆ ಪ್ರತಿ ಪ್ರವಾಸಿಗರಿಗೆ 250 ರೂ. ದರ ನಿಗದಿಪಡಿಸಲಾಗಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವ ದೊರೆಯುತ್ತಿದೆ.
ಕೆಲ ದಿನಗಳ ಹಿಂದೆ ಖಾಲಿ ಹೊಡೆಯುತ್ತಿದ್ದ 'ಅಂಬಾರಿ' ಡಬಲ್ ಡೆಕ್ಕರ್ ಬಸ್ಗಳು ಸದ್ಯ ಪ್ರವಾಸಿಗರಿಂದ ಹೌಸ್ಫುಲ್ ಆಗುತ್ತಿವೆ. ಅದಷ್ಟೋ ಜನ ಟೆಕೆಟ್ ಸಿಗದೇ ನಿರಾಶರಾಗಿ ಹಿಂತಿರುಗುತ್ತಿದ್ದಾರೆ. ದಸರಾ ಪ್ರಯುಕ್ತ ಎರಡು 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್ ಅನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.

ದೀಪಾಲಂಕಾರದಿಂದ ಬೇಡಿಕೆ
ಮೈಸೂರಿನ 121 ರಸ್ತೆಗಳು, 96 ವೃತ್ತಗಳು, 106 ಕಿಮೀ ವ್ತಾಪ್ತಿಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ದೀಪಾಲಂಕಾರದ ವ್ಯವಸ್ಥೆ ಮಾಡಿದೆ. ಹಾಗಾಗಿ ಕೋವಿಡ್ ಕಾರಣದಿಂದ ಎಲ್ಲೂ ಹೊರಗಡೆ ಹೋಗದ ಸಾರ್ವಜನಿಕರು ಇದೀಗ ದೀಪಾಲಂಕಾರ ಸೊಬಗಿಗೆ ಮನ ಸೋತಿದ್ದಾರೆ. ಪ್ರಸ್ತುತ ನಗರದಲ್ಲಿ 4 ಡಬ್ಬಲ್ ಡೆಕ್ಕರ್ ಬಸ್ ಸಂಚಾರಿಸುತ್ತಿದ್ದು ಇವುಗಳಲ್ಲಿ ನಿತ್ಯ 280ಕ್ಕೂ ಹೆಚ್ಚು ಮಂದಿ ಸಾಂಸ್ಕೃತಿಕ ನಗರಿಯ ದೀಪಾಲಂಕಾರದ ಸೊಬಗು ಸವಿಯುತ್ತಿದ್ದಾರೆ.

ಇನ್ನೂ ಎರಡು ಬಸ್ಗಳಿಗೆ ಪ್ರಸ್ತಾವನೆ
"ಮತ್ತರೆಡು ಅಂಬಾರಿ ಬಸ್ಗಳಿಗೆ ಪ್ರಸ್ತಾವನೆ ಸಲ್ಲಿಸಲು ಚಿಂತಿಸಲಾಗಿದೆ. ದಸರಾ ನಂತರವು ಇದೇ ರೀತಿ ಜನರ ಪ್ರತಿಕ್ರಿಯೆ ಮುಂದುವರೆದರೆ ಪ್ರಸ್ತಾವನೆ ಸಲ್ಲಿಸಲಾಗುವುದು" ಎಂದು ಪ್ರವಾಸೋದ್ಯಮ ಇಲಾಖೆ ಸಹಾಯ ನಿರ್ದೇಶಕ ಎಚ್.ಬಿ.ರಾಘವೇಂದ್ರ ತಿಳಿಸಿದ್ದಾರೆ.
ಮೈಸೂರು ನಗರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಸೇವೆಗೆ ಚಾಲನೆ ನೀಡಲಾಗಿತ್ತು. ಈಗ ದಸರಾ ಸಂದರ್ಭದಲ್ಲಿ ಬಸ್ಗಳಿಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ದಸರಾ ದೀಪಾಲಂಕಾರವನ್ನು ಬಸ್ನಲ್ಲಿ ಕುಳಿತು ಕುಣ್ತುಂಬಿಕೊಳ್ಳಲು ಜನರು ಹೆಚ್ಚು ಇಷ್ಟ ಪಡುತ್ತಿದ್ದಾರೆ.

ಸಂಜೆ ರೈಡಿಗೆ ಡಿಮ್ಯಾಂಡ್
'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್ ಮೇಲ್ಭಾಗದಲ್ಲಿ 21 ಆಸನಗಳಿದ್ದು, ಸಂಜೆ ವೇಳೆ ಅಷ್ಟು ಆಸನಗಳು ಭರ್ತಿಯಾಗುತ್ತಿದೆ. ಬೆಳಗಿನ ಸಮಯ ಪ್ರವಾಸಿಗರು ಬೆರಳೆಣಿಕೆ ಅಷ್ಟು ಮಾತ್ರ ಬರುತ್ತಾರೆ. ಹೀಗಾಗಿ ನಿಗದಿತ ಸೀಟು ಭರ್ತಿಯಾದರೆ ಮಾತ್ರ ಅಂಬಾರಿ ಸಂಚಾರ ಇರುತ್ತದೆ. ಸಂಜೆ ಆಗುತ್ತಿದ್ದಂತೆ ಅಂಬಾರಿಯಲ್ಲಿ ಸಂಚಾರಿಸಲು ಬಸ್ ಹೊರಡುವ ಮಯೂರ ಹೊಯ್ಸಳ ಹೋಟೆಲ್ ಬಳಿ ಜನ ಸಮೂಹ ನೆರೆದಿರುತ್ತದೆ. ನಾಲ್ಕು ಬಸ್ಗಳು ಸಂಜೆ 6.15, 8.15, ಮತ್ತು 9.30ಕ್ಕೆ ಮೂರು ರೈಡ್ ಹೋಗುತ್ತವೆ. ಹಾಗಾಗಿ ಹೆಚ್ಚುವರಿ ಡಬ್ಬಲ್ ಡೆಕ್ಕರ್ ಬಸ್ ನಿಯೋಜಿಸಬೇಕು. ಸಂಚಾರಕ್ಕೆ ಟಿಕೆಟ್ ಬುಕ್ ಮಾಡಲು ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಬೇಕೆಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

ಅಂಬಾರಿ ಬಸ್ ಸಂಚಾರ ನಡೆಸುವ ಮಾರ್ಗ
ಈಗಾಗಲೇ ಗುರುತಿಸಿರುವಂತೆ ಹೋಟೆಲ್ ಮಯೂರ ಹೊಯ್ಸಳ ಜಿಲ್ಲಾಧಿಕಾರಿಗಳ ಕಚೇರಿ, ಕ್ರಾರ್ಡ್ ಹಾಲ್-ಕುಕ್ಕರಹಳ್ಳಿಕೆರೆ-ಮೈಸೂರು ವಿಶ್ವವಿದ್ಯಾನಿಲಯ-ಜಾನಪದ ವಸ್ತುಪ್ರದರ್ಶನ-ರಾಮಸ್ವಾಮಿ ವೃತ್ತ-ಅರಮನೆ ಕರಿಕಲ್ಲು ತೊಟ್ಟಿ-ಅರಮನೆ (ದಕ್ಷಿಣ ದ್ವಾರ) -ಜೈಮಾರ್ತಾಂಡ - ಮೃಗಾಲಯ - ಕಾರಂಜಿ ಕೆರೆ - ಸಂಗೊಳ್ಳಿ ರಾಯಣ್ಣ ವೃತ್ತ, ಸ್ನೋ ಸಿಟಿ - ಚಾಮುಂಡಿ ವಿಹಾರ್ ಸ್ಟೇಡಿಯಂ - ಸೆಂಟ್ ಫಿಲೋಮಿನ ಚರ್ಚ್ - ಬನ್ನಿಮಂಟಪ - ರೈಲ್ವೆ ಸ್ಟೇಷನ್ದ ಮೂಲಕ ಸಾಗುವ ಬಸ್ ಮತ್ತೆ ಹೋಟೆಲ್ ಮಯೂರ ಹೊಯ್ಸಳದಲ್ಲಿ ನಿಲುಗಡೆಗೊಳ್ಳಲಿದೆ.











Click it and Unblock the Notifications