ಮೈಸೂರು: ಗೋಹತ್ಯೆ ನಿಷೇಧ ಸ್ವಾಗತಿಸಿ ಸಿಎಂ ನಿವಾಸದೆದುರು ಗೋಪೂಜೆ
ಮೈಸೂರು, ಜೂನ್ 6 : ಕೇಂದ್ರ ಸರಕಾರದ ಗೋಹತ್ಯೆ ನಿಷೇಧ ಆದೇಶವನ್ನು ಸ್ವಾಗತಿಸಿ, ಮತ್ತು ರಾಜ್ಯದಲ್ಲೂ ಗೋಹತ್ಯೆ ನಿಷೇಧ ಜಾರಿಗೊಳಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದೆದುರು ಅಖಂಡ ಭಾರತ ಸೇವಾ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಜಮಾಯಿಸಿದ ಕಾರ್ಯಕರ್ತರು ರಸ್ತೆ ಬದಿ ಮೇಯುತ್ತಿದ್ದ ಹಸುವನ್ನು ಕರೆತಂದು ಅದಕ್ಕೆ ಪೂಜೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲು ಮುಂದಾದರು.[ಹಸು ಸಾಯಿಸಿದ್ದಕ್ಕೆ ಕೇರಳದ ಎಂಟು ಯುವ ಕಾಂಗ್ರೆಸ್ಸಿಗರ ಬಂಧನ]
ಪ್ರತಿಭಟನೆ ಕುರಿತು ಮಾಹಿತಿಯಿದ್ದ ಕಾರಣ, ಪೊಲೀಸರು ಸ್ಥಳದಲ್ಲಿ ಬೆಳಗ್ಗಿನಿಂದಲೇ ನಾಕಾಬಂಧಿ ರಚಿಸಿದ್ದರು. ಆದರೂ ಹಸು ಸಮೇತ ಸ್ಥಳಕ್ಕೆ ನುಗ್ಗಿದ ಅಖಂಡ ಭಾರತ ಸೇವಾ ಸೇನಾ ಕಾರ್ಯಕರ್ತರಾದ ಚೇತನ್, ಮಂಜುನಾಥ್ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿ ಡಿಆರ್ ಮೈದಾನಕ್ಕೆ ಕರೆದೊಯ್ದಿದ್ದಾರೆ.
ಸರಸ್ವತಿಪುರಂ ಠಾಣೆಯ ಇನ್ಸಪೆಕ್ಟರ್ ಪೂವಯ್ಯ ಮತ್ತು ಸಿಬ್ಬಂದಿ ಹಸುವನ್ನು ಅದರ ಮಾಲೀಕರಿಗೊಪ್ಪಿಸಿ ಎಂಟು ಮಂದಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.[ಗೋಹತ್ಯೆ ನಿಷೇಧ ಕಾಯ್ದೆ =ಮತಾಂತರ:ಮಹಾದೇವಪ್ಪ ಹೊಸ ಲೆಕ್ಕ!]
ಇತ್ತೀಚೆಗಷ್ಟೇ, ಕೇಂದ್ರ ಸರ್ಕಾರದ ವಿವಾದಿತ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿ ಕೇರಳದ ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ನ 8 ಕಾರ್ಯಕರ್ತರು ಹಸುವೊಂದನ್ನು ಸಾಯಿಸಿದ್ದರು. ಈ ನಡೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ವಿರೋಧಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.