ಮೈಸೂರಿನಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿದ ಜನ!
ಮೈಸೂರು, ಮೇ 31: ಮೈಸೂರು ನಗರದಲ್ಲಿ ವಾರದಲ್ಲಿ ಎರಡು ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲಾಗುತ್ತಿದ್ದು, ವಾರದ ಮೊದಲ ದಿನವಾದ ಸೋಮವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ನಗರದಾದ್ಯಂತ ಕೋವಿಡ್ ನಿಯಮ ಮಾಯವಾಗಿ ಎಲ್ಲಿ ನೋಡಿದರಲ್ಲಿ ಜನಜಂಗುಳಿ ಕಂಡು ಬಂದಿತು.
ವಾರದಲ್ಲಿ ಸೋಮವಾರ ಮತ್ತು ಗುರುವಾರ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. ಉಳಿದಂತೆ ಜೂನ್ 7ನೇ ತಾರೀಕಿನ ತನಕ ಸಂಪೂರ್ಣ ಲಾಕ್ಡೌನ್ಗೆ ಮೈಸೂರು ಜಿಲ್ಲಾಡಳಿತ ಆದೇಶ ನೀಡಿದೆ. ಆದರೆ ಇಂದು ನಗರದಾದ್ಯಂತ ಜನ ಜಂಗುಳಿ ನೋಡಿದರೆ ಸಂಪೂರ್ಣ ಲಾಕ್ಡೌನ್ ಮಾಡಿದ ಉದ್ದೇಶವನ್ನೇ ಅಣಕಿಸುವಂತಿತ್ತು.
ಸಂಪೂರ್ಣ ಲಾಕ್ ಡೌನ್ ಮಾಡಿಯೇನು ಫಲ?
ವಾರದಲ್ಲಿ ಐದು ದಿನ ಮನೆಯಲ್ಲಿದ್ದ ಜನ ಎರಡು ದಿನ ಮನೆಯಿಂದ ಹೊರಗೆ ಬಂದು ಗುಂಪುಗುಂಪಾಗಿ ಖರೀದಿ ಇನ್ನಿತರ ಚಟುವಟಿಕೆಗಳಲ್ಲಿ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ, ಮೈಮರೆತು ಓಡಾಡಿದರೆ ಸಂಪೂರ್ಣ ಲಾಕ್ಡೌನ್ ಮಾಡಿದಕ್ಕೆ ಫಲವೇನು ಸಿಕ್ಕಿತು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ನಗರದಾದ್ಯಂತ ಎಲ್ಲಿ ನೋಡಿದರಲ್ಲಿ ಜನ ಜಾತ್ರೆ ನೆರೆದಿತ್ತು. ಕೋವಿಡ್ ಭೀತಿಯನ್ನು ಮರೆತು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂದಿತು. ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ ಹೀಗೆ ಎಲ್ಲಿ ನೋಡಿದರೂ ಜನರೇ ಕಂಡು ಬರುತ್ತಿದ್ದರು. ಜತೆಗೆ ಕೆಲಸವಿಲ್ಲದಿದ್ದರೂ ವಾಹನಗಳಲ್ಲಿ ಅಡ್ಡಾಡುವವರಿಗೂ ಕೊರತೆ ಇರಲಿಲ್ಲ. ಜತೆಗೆ ಯಾರೂ ಕೂಡ ಕೋವಿಡ್ ನಿಯಮವನ್ನು ಪಾಲಿಸಿದ್ದು ಕಂಡು ಬರಲಿಲ್ಲ.
ಕೆಲವರಿಂದ ಅವಕಾಶ ದುರುಪಯೋಗ
ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದ ಕಾರಣ ಜಿಲ್ಲಾಡಳಿತ ಮೇ 29 ರಿಂದ ಜೂನ್ 7 ರವರೆಗೆ 10 ದಿನಗಳ ಸಂಪೂರ್ಣ ಲಾಕ್ಡೌನ್ನ್ನು ಜಿಲ್ಲಾದ್ಯಂತ ಘೋಷಣೆ ಮಾಡಿದ್ದು, ಅದರಂತೆ ವಾರದಲ್ಲಿ ಸೋಮವಾರ, ಗುರುವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಇದನ್ನು ದುರುಪಯೋಗ ಮಾಡಿಕೊಂಡ ಬಹುತೇಕ ಜನ ಎಲ್ಲೆಂದರಲ್ಲಿ ಓಡಾಡುತ್ತಾ ಖರೀದಿಗೆ ಮುಗಿ ಬಿದ್ದಿದ್ದು ಮಾತ್ರ ಭಯ ಹುಟ್ಟಿಸುವಂತಿತ್ತು.
ಇವತ್ತಿನ ಪರಿಸ್ಥಿತಿಯನ್ನು ನೋಡಿದರೆ ಕೊರೊನಾ ಸೋಂಕು ನಿಯಂತ್ರಣಕ್ಕಿಂತ ಹರಡುವುದೇ ಹೆಚ್ಚು ಎಂಬಂತೆ ಭಾಸವಾಗುತ್ತಿದೆ. ನಗರಕ್ಕೊಂದು ಸುತ್ತು ಹೊಡೆದರೆ ನಗರದ ದೇವರಾಜ ಮಾರುಕಟ್ಟೆ, ಶಿವರಾಂ ಪೇಟೆ, ಸಂತೇಪೇಟೆ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ನಂಜುಮಳಿಗೆ ಸೇರಿದಂತೆ ಹಲವು ಕಡೆಗಳಲ್ಲಿ ಹಬ್ಬದ ದಿನಗಳಲ್ಲಿ ಖರೀದಿಯ ಭರಾಟೆಯನ್ನೇ ಹೋಲುವಂತಿತ್ತು.
ಮುಗಿಬಿದ್ದಿದ್ದು ಬೇಸರದ ಸಂಗತಿ
ಅಗತ್ಯ ಖರೀದಿಗೆ ಕಳೆದ ಶುಕ್ರವಾರದ ತನಕ ಅವಕಾಶ ಮಾಡಿಕೊಡಲಾಗಿತ್ತು. ಆ ನಂತರ ಶನಿವಾರ ಮತ್ತು ಭಾನುವಾರವಷ್ಟೆ ಸಂಪೂರ್ಣ ಲಾಕ್ಡೌನ್ ಇತ್ತು. ಇಂದು(ಸೋಮವಾರ) ಜಿಲ್ಲಾಡಳಿತ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದು, ಇನ್ನು ಎರಡು ದಿನಗಳ ಬಳಿಕ ಮತ್ತೆ ಗುರುವಾರ ಖರೀದಿ ಮಾಡಬಹುದಾಗಿದೆ. ಆದರೆ ಜನ ಮಾತ್ರ ತಿಂಗಳುಗಟ್ಟಲೆ ಲಾಕ್ಡೌನ್ ಮಾಡಿದ್ದಾರೆಯೇನೋ ಎಂಬಂತೆ ಖರೀದಿಗೆ ಮುಗಿಬಿದ್ದಿದ್ದು ಮಾತ್ರ ಬೇಸರದ ಸಂಗತಿಯಾಗಿದೆ.
ಅಗತ್ಯ ಸೇವೆ ಇರುವುದನ್ನು ಮರೆತ ಜನ
ಕೊರೊನಾ ಹರಡುವುದನ್ನು ತಡೆಯಬೇಕಾದರೆ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಬಳಕೆಯಷ್ಟೆ ರಾಮಬಾಣವಾಗಿದ್ದು, ಹೀಗಾಗಿಯೇ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಜತೆಗೆ ಲಾಕ್ಡೌನ್ ಸಮಯದಲ್ಲಿ ಹಾಲಿನ ಬೂತ್, ವೈದ್ಯಕೀಯ ಸೇವೆ, ಹಾಪ್ ಕಾಮ್ಸ್ಗೆ ಒಳಪಡುವ ಹಣ್ಣು-ತರಕಾರಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳಿಗೆ ಅವಕಾಶವಿದೆ.
ಆದರೆ, ಇದೆಲ್ಲವನ್ನು ಮರೆತು ವಾರದಲ್ಲಿ ಐದು ದಿನ ಮನೆಯಲ್ಲಿದ್ದು, ಅಗತ್ಯ ಖರೀದಿಗೆ ನೀಡಿದ ಸಮಯದಲ್ಲಿ ಕೋವಿಡ್ ನಿಯಮ ಮರೆತು ಮಾರುಕಟ್ಟೆ ಸೇರಿದಂತೆ ಎಲ್ಲೆಂದರಲ್ಲಿ ಅಡ್ಡಾಡಿ ಕೊರೊನಾ ಸೋಂಕು ಹೊತ್ತು ಮನೆಗೆ ತೆರಳಿದರೆ ಸೋಂಕು ತಡೆಯುವುದಾದರೂ ಹೇಗೆ? ಇನ್ನಾದರೂ ಜನ ಯೋಚಿಸಿ ತಮ್ಮ ತಮ್ಮನ್ನು ನಂಬಿರುವವರಿಗಾಗಿ ಆದರೂ ಕೊರೊನಾ ವಿಚಾರದಲ್ಲಿ ಜಾಗ್ರತೆ ವಹಿಸಲಿ ಎಂಬುದೇ ಕಳಕಳಿಯಾಗಿದೆ.