ಕಾಂಗ್ರೆಸ್ ನಲ್ಲಿ ಆಂತರಿಕ ಮನಸ್ತಾಪದ ಸುಳಿವು ಕೊಟ್ಟ ಗೆದ್ದ ಕೈ ಶಾಸಕ
ಮೈಸೂರು, ಡಿಸೆಂಬರ್ 10: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದ ಬೆನ್ನಲ್ಲೇ, ಕೈ ಪಾಳಯದಲ್ಲಿ ಆಂತರಿಕ ಮನಸ್ತಾಪವಿರುವ ಸಣ್ಣ ಸುಳಿವನ್ನು ನೂತನ ಶಾಸಕ ಎಚ್.ಪಿ. ಮಂಜುನಾಥ್ ಬಿಟ್ಟುಕೊಟ್ಟಿದ್ದಾರೆ.
ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಮೈಸೂರಿನಲ್ಲಿ ಮಂಗಳವಾರ ಅರ್ಜುನ್ ಗುರೂಜಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ಜಂಬೂ ಸವಾರಿ ಇದ್ದ ಹಾಗೆ. ಒಬ್ಬೊಬ್ಬರು ಒಂದೊಂದು ರೀತಿಯ ಕೆಲಸ ಮಾಡಬೇಕು. ನಾನೇ ಅಂಬಾರಿ ಹೊರಬೇಕು ಅನ್ನೋದು ಸರಿಯಲ್ಲ. ಒಬ್ಬರು ಅಂಬಾರಿ ಹೊತ್ತ ನಂತರ ಮತ್ತೊಬ್ಬರಿಗೆ ಸಮಯ ಬರುವವರೆಗೂ ಕಾಯಬೇಕು" ಎಂದಿದ್ದಾರೆ.
ಹುಣಸೂರು ಉಪ ಸಮರದಲ್ಲಿ ಗೆಲುವು; ದೇವೇಗೌಡರ ನೆನೆದ ಕೈ ಅಭ್ಯರ್ಥಿ
ಹಿತ ಶತ್ರುಗಳಿಂದ ರಾಜೀನಾಮೆ ನೀಡಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ನಾನು ಎಲ್ಲಾ ಮುಖಂಡರ ಜೊತೆ ಮಾತಾಡಿದ್ದೇನೆ. ಕಾಂಗ್ರೆಸ್ ನಲ್ಲಿ ಟೀಂ ಇಲ್ಲ, ಟೀಂ ಇರಲು ಬಿಡಬಾರದು. ನಾನು ಕೂಡ ಎಲ್ಲಾ ಮುಖಂಡರನ್ನು ಹುಣಸೂರಿಗೆ ಕರೆಸಿ ಪ್ರಚಾರ ಮಾಡಿಸಿದ್ದೇನೆ. ನಾವುಗಳು ಟೀಂ ಆಗದಂತೆ ಮಾಡಬೇಕು" ಎಂದರು.
"ಕಾಂಗ್ರೆಸ್ನಲ್ಲಿ ಹಿತ ಶತ್ರುಗಳಿಲ್ಲ, ನಾವು ಸೆಕೆಂಡ್ ಬೆಂಚ್ ಲೀಡರ್ ಮೊದಲ ಸಾಲಿನವರಿಗೆ ಸೇತುವೆ ಆಗಬೇಕು. ಒಬ್ಬರಿಗೊಬ್ಬರಿಗೆ ಸೇತುವೆ ಆಗಬೇಕೆ ಹೊರತು ಗೋಡೆಯಾಗಬಾರದು. ಈ ಗೋಡೆಗಳು ಯಾರಾಗ್ತಿದ್ದಾರೆ ಅನ್ನೋದನ್ನು ನೋಡಿ ತಡೆಯಬೇಕು. ಕೆಲವು ಘಟನೆಗಳಿಂದ ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿರೋದು ಸತ್ಯ. ಅದನ್ನ ಕಾಂಗ್ರೆಸ್ ಮುಖಂಡರು ಇಂದು ಸರಿ ಮಾಡುತ್ತಾರೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.