ಮನೆಗೊಬ್ಬ ಯೋಧನನ್ನು ಕೊಟ್ಟ ನೆಲದಲ್ಲಿ ಬಿಜೆಪಿ ಪುಂಡರನ್ನು ಹುಟ್ಟುಹಾಕುತ್ತಿದೆ: ಆರ್ ಧ್ರುವನಾರಾಯಣ್
ಮೈಸೂರು, ಆಗಸ್ಟ್ 19: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಖಂಡಿಸಿ ಆಗಸ್ಟ್ 26ರಂದು ಮಡಿಕೇರಿಯಲ್ಲಿ ಕಾಂಗ್ರೆಸ್ ಚಲೋ ನಡೆಸಲಾಗುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಧಣಿಗಳು ಸಿದ್ದರಾಮಯ್ಯರಿಗೆ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿದಾಗ, ಅಲ್ಲಿಗೆ ಪಾದಯಾತ್ರೆ ಮೂಲಕ ಹೋಗಿ ಸರಿಯಾಗಿ ಉತ್ತರ ಕೊಟ್ಟಿದ್ಧಾರೆ. ಅಂತಯೇ ಆಗಸ್ಟ್ 26ರಂದು ನಡೆಯಲಿರುವ ಮಡಿಕೇರಿ ಚಲೋ ಪ್ರತಿಭಟನೆಗೆ ಹೆದರುವುದಿಲ್ಲ. ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ಹೇಳಿದರು.
ಕೊಡಗಿನಲ್ಲಿ ಸಿದ್ದರಾಮಯ್ಯ ಅವರೊಬ್ಬರ ಮೇಲೆ ನಡೆದ ದಾಳಿಯಲ್ಲ. ಇದು ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಯಾಗಿದೆ. ಕೊಡಗು ವೀರರ ನಾಡು. ಆದರೆ ಬಿಜೆಪಿಯ ಪುಂಡರು ಕೊಡಗಿನ ಹೆಸರನ್ನು ಕೆಡಸುತ್ತಿದ್ದಾರೆ. ಕೊಡಗು ಮನೆಗೊಬ್ಬ ಯೋಧನ ಕೊಟ್ಟಿದೆ. ಆದರೆ, ಬಿಜೆಪಿ ಮನೆಗೊಬ್ಬ ಪುಂಡರನ್ನು ಹುಟ್ಟುಹಾಕುತ್ತಿದೆ. ಕೊಡಗು ವೀರರ ನಾಡು. ವೀರ ಸಂಸ್ಕೃತಿಗೆ ತಲೆ ತಗ್ಗಿಸುವ ಕೆಲಸವನ್ನು ಬಿಜೆಪಿ ಪುಂಡರು ಮಾಡಿದ್ದಾರೆ ಎಂದು ಕಿಡಿಕಾರಿದರು.

ಕೊಡಗಿನಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆತ ಘಟನೆಯ ಬಗ್ಗೆ ರಾಜ್ಯಪಾಲರು ನ್ಯಾಯಾಂಗ ತನಿಖೆಗೆ ವಹಿಸಬೇಕು. ವಿರೋಧ ಪಕ್ಷದ ನಾಯಕರಿಗೆ ಸರಿಯಾಗಿ ರಕ್ಷಣೆ ಕೊಡದ ಸರಕಾರ, ಜನಸಾಮಾನ್ಯರಿಗೆ ರಕ್ಷಣೆ ಕೊಡುತ್ತದಯೇ ಎಂದು ಪ್ರಶ್ನಿಸಿದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿದ್ದು, ಹೇಡಿಗಳ ಕೃತ್ಯ, ಸೈದ್ಧಾಂತಿಕವಾಗಿ ಗಟ್ಟಿತನ ಇಲ್ಲ. ಬಿಜೆಪಿಗರು ಹಿಂಸಾಚಾರಕ್ಕೆ ಇಳಿದಿದ್ದಾರೆ. ಸೈದ್ಧಾಂತಿಕವಾಗಿ ಗಟ್ಟಿತನ ಇಲ್ಲದೇ ಇಂತಹ ದುಷ್ಕೃತ್ಯಗಳನ್ನು ಮಾಡುತ್ತಿದ್ಧಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ಇಲ್ಲವೆಂದರೆ, ಜನ ಸಾಮಾನ್ಯರಿಗೆ ಹೇಗೆ ರಕ್ಷಣೆ ಸಿಗಲು ಸಾಧ್ಯ. ಹೋರಾಟಗಾರರ ಹಾಗೂ ಹಿಂದುಳಿದ ವರ್ಗದ ಧ್ವನಿಯಾಗಿರುವ ಸಿದ್ದರಾಮಯ್ಯ ಇಂತಹ ಘಟನೆಗಳಿಗೆ ಹೆದರುವುದಿಲ್ಲ. ಸರಕಾರ ತನ್ನ ವೈಫಲ್ಯಗಳನ್ನು ಮರೆ ಮಾಚಲು ಇಂತಹ ಕೆಲಸಕ್ಕೆ ಇಳಿದಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆತ ಹಾಗೂ ದಾಳಿ ಯತ್ನ ಖಂಡಿಸಿ, ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಗಾಂಧಿ ವೃತ್ತದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ಸಡೆಸಲಾಯಿತು. ಗಾಂಧಿ ವೃತ್ತದ ಬಳಿ ರಾಜ್ಯ ಸರಕಾರದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಾವರ್ಕರ್ ಭಾವಚಿತ್ರಗಳಿಗೆ ಹಾಗೂ ಟೈಯರ್ಗೆ ಬೆಂಕಿ ಹಚ್ಚಿ,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಪುಂಡರು ಮೊಟ್ಟೆ ಎಸೆದು, ಕಪ್ಪುಬಾವುಟ ಪ್ರದರ್ಶನ ಮಾಡಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರತಿಭಟನೆಯ ಮುನ್ಸೂಚನೆ ಇದ್ದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಸರಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದೆನಿಸುತ್ತದೆ ಎಂದು ದೂರಿದರು.












Click it and Unblock the Notifications