'ಕಾಡಿನಲ್ಲೆ ಹುಟ್ಟಿ ಕಾಡಿನಲ್ಲೇ ಬದುಕಿ ಸಾಯುತ್ತೇವೆ!'
ಮೈಸೂರು, ಜೂನ್ 15 : ಅನಾದಿ ಕಾಲದಿಂದಲೂ ಕಾಡಿನಲ್ಲೇ ಬದುಕು ಸಾಗಿಸುತ್ತಾ ಬಂದಿರುವ ಗಿರಿಜನರು ಮತ್ತು ಅರಣ್ಯ ಇಲಾಖೆ ನಡುವಿನ ಸಂಘರ್ಷ ಹಾಗೆಯೇ ಮುಂದುವರೆಯುತ್ತಿರುವುದರಿಂದ, ಗಿರಿಜನರು ನಮ್ಮನಿಮ್ಮ ನಡುವೆ ಇದ್ದರೂ ಸೌಲಭ್ಯ ವಂಚಿತರಾಗಿ, ಆದಿಮಾನವರಂತೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡು ಕಾಡು ಉತ್ಪನ್ನಗಳನ್ನು ಸಂಗ್ರಹಿಸಿ, ಮಾರಾಟ ಮಾಡಿ ಜೀವನ ಸಾಗಿಸಿಕೊಂಡು ಬಂದಿರುವ ಗಿರಿಜನರನ್ನು ಕಾಡಿನಿಂದ ಒಕ್ಕಲೆಬ್ಬಿಸಿ, ಊರೊಳಗೆ ಪುನರ್ವಸತಿ ಕಲ್ಪಿಸುವ ಉದ್ದೇಶ ಅರಣ್ಯ ಇಲಾಖೆಯದ್ದಾದರೂ, 'ಕಾಡಿನಲ್ಲೆ ಹುಟ್ಟಿ ಕಾಡಿನಲ್ಲೇ ಬದುಕಿ ಸಾಯುತ್ತೇವೆ. ನಾವು ಮಾತ್ರ ಊರಿಗೆ ಬರುವುದಿಲ್ಲ' ಎಂಬುದು ಹಾಡಿ ವಾಸಿಗಳ ಒಕ್ಕೊರಲ ಮಾತು.
ಅವರು ಕಾಡಿನಿಂದ ಹೊರಗೆ ಬರದ ಕಾರಣ ಅವರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಕನಸುಗಳಿಗೆ ತಣ್ಣೀರು ಬಿದ್ದಿದೆ. ಅದು ಎಷ್ಟೇ ಕಷ್ಟ ಅನುಭವಿಸಿದರೂ ತೊಂದರೆಯಿಲ್ಲ. ಕಾಡಿನಲ್ಲೇ ಬದುಕುತ್ತೇವೆ ಎನ್ನುವ ಅವರ ಹಠದಿಂದಾಗಿ ಸರ್ಕಾರದ ಯಾವುದೇ ಸೌಲಭ್ಯ ದೊರೆಯದೆ ನಿಕೃಷ್ಟ ಬದುಕನ್ನು ಸಾಗಿಸುವಂತಾಗಿದೆ. [ದುಬಾರೆ ಅರಣ್ಯ ಪ್ರವಾಸಿಗರಿಗೆ ಸ್ವರ್ಗ, ಗಿರಿಜನರಿಗೆ ನರಕ]

ಇಲ್ಲಗಳ ನಡುವೆ ಸಾಗುತ್ತಿರುವ ಬದಕು : ಹರಕು ಮುರುಕು ಗುಡಿಸಲು, ಶೌಚಾಲಯವಿಲ್ಲ. ಕುಡಿಯಲು ಕಾಡಿನಲ್ಲಿ ಹರಿಯುವ ತೋಡು ನೀರು, ರಸ್ತೆಯಿಲ್ಲ, ವಿದ್ಯುತ್ ಇಲ್ಲ.. ಹೀಗೆ ಇಲ್ಲಗಳ ನಡುವೆ ಬದುಕು ಸಾಗಿಸುತ್ತಿರುವ ಅವರಿಗೊಂದು ನಾಗರಿಕತೆಯ ಬದುಕು ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ.
ಹೆಚ್ಚಿನ ಹಾಡಿಯತ್ತ ನಮ್ಮ ಜನಪ್ರತಿನಿಧಿಗಳು ಸುಳಿಯುತ್ತಿಲ್ಲ. ಅದಕ್ಕೆ ಕಾರಣವಿದೆ. ಅವರದ್ದು ಎಂದು ಹೇಳಿಕೊಳ್ಳಲು ಜಮೀನಿಲ್ಲ. ಇನ್ನು ಸರ್ಕಾರ ಕೇಳುವ ದಾಖಲಾತಿಗಳಿಲ್ಲ. ಅದು ಇಲ್ಲ ಎಂದ ಮೇಲೆ ಮತ ಹಾಕುವಂತೆಯೂ ಇಲ್ಲ. ಗುರುತಿನ ಚೀಟಿ ನೀಡಬೇಕೆಂದರೆ ವಾಸದ ದೃಢೀಕರಣ ನೀಡಬೇಕು, ಜಮೀನಿನ ಹಕ್ಕುಪತ್ರ ಬೇಕು. ಅದು ಅರಣ್ಯ ಇಲಾಖೆ ನೀಡಲು ಸಿದ್ದವಿಲ್ಲ.
ಗಿರಿಜನ ಹಾಡಿಗೆ ವಿದ್ಯುತ್ ಸಂಪರ್ಕ ನೀಡಲು ಅರಣ್ಯ ಇಲಾಖೆಯ ತಕರಾರು. ಒಟ್ಟಾರೆ ಯಾವ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವಾಗದ ಸ್ಥಿತಿ. ಇದರಿಂದಾಗಿ ಮಳೆ, ಚಳಿ, ಬೇಸಿಗೆ ಎಲ್ಲ ಕಾಲದಲ್ಲೂ ಕಷ್ಟ ತಪ್ಪಿದಲ್ಲ. [ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ: ಕರಡಿಬೊಕ್ಕೆ ಗಿರಿಜನರ ಕಣ್ಣೀರು]

ಶೋಚನೀಯ ಸ್ಥಿತಿ : ಆಧುನಿಕತೆ ನಾಗಾಲೋಟದಲ್ಲಿರುವ ನಾವು ಒಮ್ಮೆ ಗಿರಿಜನರ ಹಾಡಿಗೆ ಹೋದರೆ ಅವರು ಅನುಭವಿಸುತ್ತಿರುವ ಕಷ್ಟ ನೋಡಿದರೆ ವ್ಯವಸ್ಥೆ ಬಗ್ಗೆಯೇ ಅಸಹ್ಯ ಮೂಡುತ್ತದೆ. ಕುಳಿತಲ್ಲಿಗೆ ಎಲ್ಲ ರೀತಿಯ ಸೌಲಭ್ಯ ಬೇಕೆಂದು ಬಯಸುವ ನಮಗೆ ಅವರ ಸ್ಥಿತಿ ನೋಡಿದರೆ ನೋವಾಗುತ್ತದೆ.
ಗಿರಿಜನರಿಗೆ ಪುನರ್ವಸತಿ ಕಲ್ಪಿಸಿ ಅವರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಬೇಕೆನ್ನುವುದು ಅರಣ್ಯ ಇಲಾಖೆಯ ಉದ್ದೇಶವಾದರೆ, ಪೂರ್ವಜರ ಕಾಲದಿಂದಲೇ ಇಲ್ಲಿಯೇ ಬದುಕಿ ಬಾಳಿ ಬಂದಿದ್ದೇವೆ. ನಾವು ಸಾಯುವುದಾದರೂ ಇಲ್ಲಿಯೇ ಎನ್ನುವುದು ಗಿರಿಜನರ ಹಠವಾಗಿದೆ.
ಹೀಗಾಗಿ ಏನೇ ಕಷ್ಟ ಅನುಭವಿಸಿದರೂ ಅವರು ಕಾಡು ಬಿಟ್ಟು ಹೋಗಲು ತಯಾರಿಲ್ಲ. ಇವತ್ತು ನಾವು ಪಿರಿಯಾಪಟ್ಟಣ ತಾಲೂಕಿನ ಮರಳುಕಟ್ಟೆ ಮತ್ತು ಕರಡಿಕುಪ್ಪೆಯ ಗಿರಿಜನ ಹಾಡಿಯಲ್ಲಿನ ಜನರ ನಿತ್ಯದ ನರಕದ ಬದುಕು ನೋಡಿದರೆ ಬದುಕಲು ಇಷ್ಟೊಂದು ಕಷ್ಟಪಡಬೇಕಾ ಎಂದೆನಿಸದೆ ಇರದು. [ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಕೆಂಚಪ್ಪನ ರೋಚಕ ಕಥೆ!]

ಜೀವನ ಹೇಗೆ ಸಾಗಿಸುತ್ತಾರೆ : ಎರಡು ಹಾಡಿಗಳಲ್ಲಿ 40 ಕುಟುಂಬಗಳಿದ್ದು, ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ 200 ಜನರಾಗಬಹುದು. ಅರಣ್ಯಕ್ಕೆ ಹೊಂದಿಕೊಂಡು ಇವರ ಹಾಡಿಯಿದೆ. ಮರಳುಕಟ್ಟೆ ಹಾಡಿಯಲ್ಲಿ ಗಿರಿಜನರು, ಆನೆಚೌಕೂರು ಅರಣ್ಯಕ್ಕೆ ಹೊಂದಿಕೊಂಡಂತೆ ಇದ್ದರೆ, ಕರಡಿಕುಪ್ಪೆ ಹಾಡಿಯ ಗಿರಿಜನರು ದೊಡ್ಡಹರವೆ ಅರಣ್ಯಕ್ಕೆ ಹೊಂದಿಕೊಂಡಂತೆ ಇದೆ. ತಲಾ 2 ಎಕರೆ ವಿಸ್ತೀರ್ಣ ಜಾಗದಲ್ಲಿ ಸಣ್ಣಪುಟ್ಟ ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಉಳಿದ ಖಾಲಿ ಜಾಗದಲ್ಲಿ ಶುಂಠಿ, ಮರಗೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ.
ಈ ಹಾಡಿಗೆ ನೀರು ಕೊಡಿಸುತ್ತೇನೆ ಎಂದವರು ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ ವಿದ್ಯುತ್ ಸೌಲಭ್ಯ ಕಲ್ಪಿಸಲು ನೂರೆಂಟು ತಾಪತ್ರಯಗಳಿಂದ ಅದು ನೆನೆಗುದಿಗೆ ಬಿದ್ದಿದೆ. ಹೀಗಾಗಿ ಗಿರಿಜನರೇ ನೆಲವನ್ನು ಅಗೆದು ಬಾವಿ ನಿರ್ಮಿಸಿ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದು ಶುದ್ಧ ನೀರಂತೂ ಅಲ್ಲವೇ ಅಲ್ಲ. ಆದರೂ ಕುಡಿಯಲೇಬೇಕಾದ ಅನಿವಾರ್ಯತೆ.
ಯಾವುದೇ ವಾಹನಗಳನ್ನು ಈ ಸ್ಥಳಕ್ಕೆ ಬಾರದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆಯುತ್ತಿರುವುದರಿಂದ ತಮ್ಮ ಬೇಸಾಯಕ್ಕಾಗಲೀ ಅಥವಾ ಮನೆಗೆ ಬೇಕಾದ ಪದಾರ್ಥಗಳನ್ನು ತಲೆ ಮೇಲೆ ಹೊತ್ತು ಸಾಗಿಸಬೇಕಾಗಿದೆ. ಒಟ್ಟಾರೆ ಕಷ್ಟದಲ್ಲೇ ಬದುಕು ಸಾಗಿಸುವ ಇವರ ಬದುಕು ಯಾವಾಗ ಹಸನಾಗುತ್ತದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. [ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications