ಮೈಸೂರಿನಲ್ಲಿ ಮಾವೋವಾದಿಗಳಿಗೆ ಶೋಧ ಆರಂಭ
ಮೈಸೂರು, ನ. 15: ಮೈಸೂರಿನ ಎಚ್.ಡಿ. ಕೋಟೆ ಹತ್ತಿರದ ಕರ್ನಾಟಕ-ಕೇರಳ ಗಡಿಯಲ್ಲಿ ಪೊಲೀಸ್ ಪಹರೆ ಬಿಗಿಗೊಳಿಸಲಾಗಿತೆ. ನಾಲ್ವರು ಶಸ್ತ್ರ ಸಜ್ಜಿತ ಮಾವೋವಾದಿಗಳು ಕೇರಳ ಪೊಲೀಸರಿಂದ ತಪ್ಪಿಸಿಕೊಳ್ಳಲು ಕರ್ನಾಟಕದ ಅರಣ್ಯ ಪ್ರದೇಶಕ್ಕೆ ನುಸುಳಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಮೈಸೂರಿನಿಂದ 20 ಸದಸ್ಯರ ಕಮಾಂಡೋ ತಂಡ ಬಂದಿದ್ದು, ಎರಡು ದಿನಗಳ ಶೋಧ ಕಾರ್ಯ ಆರಂಭಿಸಿದ್ದಾರೆ. ಬಾವಳಿ ಚೆಕ್ ಪೋಸ್ಟ್ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಬಾವಳಿ, ಡಿ.ಬಿ. ಕುಪ್ಪೆ, ಮಚೂರ್, ಕಡೆಗಡ್ಡೆ ಸೇರಿದಂತೆ ಇತರ ಜನವಸತಿ ಪ್ರದೇಶಗಳಲ್ಲಿ ಮಾವೋವಾದಿಗಳು ಆಶ್ರಯ ಪಡೆಯದಂತೆ ಎಚ್ಚರ ವಹಿಸಲಾಗಿದೆ. [ನಕ್ಸಲ್ ವಿರುದ್ಧ ಕಾರ್ಯಾಚರಣೆಗೆ ಮಹಿಳಾ ಪಡೆ]
ಕರಪತ್ರ ಹಂಚಿದರು: ಕರ್ನಾಟಕದ ಬಾವಳಿ ಚೆಕ್ ಪೋಸ್ಟ್ನಿಂದ 30 ಕಿ.ಮೀ. ದೂರದ ತಿರುನೆಲ್ಲಿ ಪ್ರದೇಶದಲ್ಲಿರುವ ಖಾಸಗಿ ಪ್ರವಾಸಿ ರೆಸಾರ್ಟ್ ಪ್ರದೇಶದ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದರು. ಅಲ್ಲದೆ, ಸಿಪಿಐ (ಮಾವೋವಾದಿ) ಸ್ಥಾಪನೆಯ 10ನೇ ವರ್ಷಾಚರಣೆಯಲ್ಲಿ ಭಾಗವಹಿಸುವಂತೆ ಕರಪತ್ರಗಳನ್ನು ಹಂಚಿ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ನಕ್ಸಲೀಯರ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದೆ. [ತುಮಕೂರಿನತ್ತ ಹೆಜ್ಜೆ ಹಾಕಿದ ನಕ್ಸಲರು]
ಕೇರಳದ ವಯನಾಡು ಅರಣ್ಯ ಪ್ರದೇಶದದಿಂದ ಕರ್ನಾಟಕ ಅರಣ್ಯ ಪ್ರದೇಶಕ್ಕೆ ನಕ್ಸಲೀಯರು ಸುಲಭವಾಗಿ ಪಾರಾಗಬಹುದು. ಆದ್ದರಿಂದ ವಯನಾಡು ಪ್ರದೇಶದಲ್ಲಿ ವಿಶೇಷ ಥಂಡರ್ಬೋಲ್ಟ್ ಕಮಾಂಡೋಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಕರ್ನಾಟಕ ಹಾಗೂ ಕೇರಳ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.