ಸಂಸದ ಪ್ರತಾಪ್ ಸಿಂಹ – ಸಚಿವ ಸಾ ರಾ ಮಹೇಶ್ ನಡುವೆ ವಾಕ್ಸಮರ
ಮೈಸೂರು, ಮೇ 29: ಸಂಸದ ಪ್ರತಾಪ್ ಸಿಂಹ ಹಾಗೂ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅದು ವ್ಯಕ್ತವಾಗಿರುವುದು ರೈಲು ನಿಲ್ದಾಣ ಕಾಮಗಾರಿ ಪರಿಶೀಲನೆ ವೇಳೆಯಲ್ಲಿ.
ರೈಲು ನಿಲ್ದಾಣ ಕಾಮಗಾರಿ ಪರಿಶೀಲನೆ ವೇಳೆ, ಪಾರಂಪರಿಕತೆಗೆ ಧಕ್ಕೆ ತರುವ ಕೆಲಸ ಯಾವುದೂ ನಡೆದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರೆ, ಪಾರಂಪರಿಕತೆಗೆ ಧಕ್ಕೆ ತರಬೇಡಿ ಎಂದು ಸಚಿವ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ. ಇವರಿಬ್ಬರ ನಡುವೆ ರೈಲ್ವೆ ಅಧಿಕಾರಿಗಳು ಯಾರ ಮಾತು ಕೇಳಬೇಕೆಂಬ ಪೇಚಿಗೆ ಸಿಲುಕಿದ್ದಾರೆ.
ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಕಟ್ಟಡದ ಮೂಲ ಸ್ವರೂಪ ಬದಲಾಗಬಾರದೆಂಬ ಎಚ್ಚರ ವಹಿಸಬೇಕು. ಮೈಸೂರು ನಗರದಲ್ಲಿ ನೂರಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ಈಗಾಗಲೇ ಸರ್ಕಾರ ಗುರುತಿಸಿದೆ. ಈ ಕುರಿತು ಕಾಯ್ದೆಗಳನ್ನು ಕೂಡ ಜಾರಿಗೆ ತಂದಿದೆ. ಇದನ್ನು ಎಲ್ಲರೂ ಪಾಲಿಸಬೇಕು. ಕಟ್ಟಡಗಳನ್ನು ನವೀಕರಣಗೊಳಿಸುವ ಜಿಲ್ಲಾಧಿಕಾರಿಗಳ ನೇತೃತ್ವದ ಸದಸ್ಯರುಗಳ ಅಭಿಪ್ರಾಯ, ಅನುಮತಿ ಪಡೆದ ನಂತರ ಕಾಮಗಾರಿ ಪ್ರಾರಂಭಿಸಬೇಕಾಗಿದೆ. ನನ್ನ ಗಮನಕ್ಕೆ ಬಂದಂತೆ ಕಟ್ಟಡದ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದಾಗ ಅಧಿಕಾರಿಗಳು ತಡೆದಿದ್ದರು ಎಂದಿದ್ದಾರೆ ಸಾ ರಾ ಮಹೇಶ್.

ಅಭಿವೃದ್ಧಿ ಕೆಲಸಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಕಟ್ಟಡಗಳನ್ನು ನವೀಕರಣ ಮಾಡುವಾಗ ಅದರದ್ದೇ ಆದ ರೀತಿ ನೀತಿಗಳಿವೆ. ಸಂಸದರು ಕೊಂಚ ಕಾನೂನು, ಕಾಯ್ದೆ ಓದಿಕೊಳ್ಳಲಿ. ಮೈಸೂರಿನಲ್ಲಿ ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನ ಕಟ್ಟಡಗಳಿವೆ. ಮನಸೋ ಇಚ್ಛೆ ಹೀಗೆ ಕಾಮಗಾರಿ ನಡೆಸಿದರೆ, ಮುಂದೆ ಪಾರಂಪರಿಕತೆಯನ್ನು ಹುಡುಕಬೇಕಾದ ಪರಿಸ್ಥಿತಿ ಬರುತ್ತದೆ. ಈ ಕುರಿತು ಸಂಸದರು ಚಿಂತಿಸಬೇಕು ಎಂದು ಕುಟುಕಿದರು. ಕಾಮಗಾರಿ ಕುರಿತು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಸಭೆ ಸೇರಿಸಿ ಚರ್ಚಿಸಿ ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಚಿವ ಸಾ ರಾ ಮಹೇಶ್ ಭೇಟಿಗೂ ಮುನ್ನ ಅಪರ್ಣಾ ಗಾರ್ಗ್ ಅವರೊಂದಿಗೆ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ ಸಿಂಹ, 16.5 ಕೋಟಿ ವೆಚ್ಚದಲ್ಲಿ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ನಡೆಯುತ್ತಿದೆ. ಮೈಸೂರು ರೈಲು ನಿಲ್ದಾಣದಲ್ಲಿ ಪಾರಂಪರಿಕತೆಗೆ ಧಕ್ಕೆಯಾಗುವ ಯಾವುದೇ ಕಾಮಗಾರಿ ನಡೆದಿಲ್ಲ. ಹಲವು ವರ್ಷಗಳಿಂದ ರೈಲ್ವೆ ನಿಲ್ದಾಣದ ಕೆಲವು ಭಾಗಗಳಲ್ಲಿ ದುರಸ್ತಿ ಕಾರ್ಯ ಬಾಕಿ ಉಳಿದಿತ್ತು. ಶಿಥಿಲಗೊಂಡ ಭಾಗಗಳನ್ನು ದುರಸ್ತಿ ಮಾಡಬೇಕಿತ್ತು. ಅಲ್ಲದೇ, ನಿಲ್ದಾಣದ ಮುಂಭಾಗ ಧ್ವಜಕಂಬ ನಿರ್ಮಾಣ, ಪಾರ್ಕಿಂಗ್ ಸೌಲಭ್ಯ ವಿಸ್ತರಣೆ, ಗೋದಾಮು ಸ್ಥಳಾಂತರ ಮಾಡಲಾಗುತ್ತಿದೆ ಎಂದು ವಿವರಿಸಿದರು.
ನಿಲ್ದಾಣದ ಪಾರಂಪರಿಕತೆಗೆ ಧಕ್ಕೆಯಾಗಿದೆ ಎಂದು ಕೆಲವರು ತಕರಾರು ತೆಗೆದಿದ್ದರು. ಈ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಯಾವುದೇ ಲೋಪವಾಗಿಲ್ಲ ಎಂದು ಹೇಳಲಾಗಿದೆ. ಯಾವುದೇ ಗೊಂದಲಕ್ಕೂ ಆಸ್ಪದವಿಲ್ಲ. ರೈಲು ನಿಲ್ದಾಣ ಕಾಮಗಾರಿಯಂತಹ ಸಣ್ಣ ವಿಚಾರಗಳನ್ನು ನಾವು ನೋಡಿಕೊಳ್ಳುತ್ತೇವೆ. ಕೇಂದ್ರ ಸರ್ಕಾರ ಈ ಕುರಿತು ಗಮನ ಹರಿಸುತ್ತದೆ. ಹೀಗೆ ಮಾಡಿದರೆ ರಾಜ್ಯಕ್ಕೂ ಒಳ್ಳೆಯದು, ಈ ಭಾಗಕ್ಕೂ ಒಳ್ಳೆಯದು. ಮೈಸೂರು ಭಾಗದಲ್ಲಿ ಸಚಿವರಿಗೆ ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಮೈಸೂರಿಗೆ ಬರಲು ಹೊರರಾಜ್ಯದ ಪ್ರವಾಸಿಗರಿಗೆ ವಿಧಿಸುವ ತೆರಿಗೆ ರದ್ದುಪಡಿಸಲಿ. ಇದರಿಂದ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದು ಖಚಿತ ಎಂದು ಅವರಿಗೆ ಸಲಹೆ ನೀಡಿದರು.











Click it and Unblock the Notifications