ಸೆ.9ರಂದು ಚುಂಚನಕಟ್ಟೆಯಲ್ಲಿ ಕಾವೇರಿ ಜಲಪಾತೋತ್ಸವ
ಮೈಸೂರು, ಸೆಪ್ಟೆಂಬರ್ 3: ಕೊಡಗಿನಲ್ಲಿ ಮಳೆ ಸುರಿದು ಕಾವೇರಿ ಉಕ್ಕಿ ಹರಿದಾಗಲೆಲ್ಲ ಅಲ್ಲಲ್ಲಿ ಸುಂದರ ನಿಸರ್ಗ ರಮಣೀಯ ದೃಶ್ಯ ಕಣ್ಮನ ಸೆಳೆಯುತ್ತದೆ. ಈ ಪೈಕಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಧನುಷ್ಕೋಟಿಯೂ ಒಂದಾಗಿದೆ. ಇಲ್ಲಿ ಈ ಬಾರಿ ಸೆಪ್ಟೆಂಬರ್ 9 ಮತ್ತು 10ರಂದು ಕಾವೇರಿ ಜಲಪಾತೋತ್ಸವವನ್ನು ಆಚರಿಸಲಾಗುತ್ತಿದೆ.
ಜಿಲ್ಲಾಡಳಿತ, ವಾರ್ತಾ ಮತ್ತು ಪ್ರಸಾರ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಚುಂಚನಕಟ್ಟೆ ಶ್ರೀರಾಮ ದೇವಾಲಯದ ಆವರಣದಲ್ಲಿ ಜಲಪಾತೋತ್ಸವ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಶ್ರೀರಾಮ ದೇವಾಲಯ ಮತ್ತು ಕಾವೇರಿ ಜಲಪಾತಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗುತ್ತದೆ. ಜತೆಗೆ ಕುಡಿಯುವ ನೀರು ಶೌಚಾಲಯ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಧನುಷ್ಕೋಟಿಯಲ್ಲಿ ಜಲ ನರ್ತನ
ಮಳೆ ಸುರಿದಾಗ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಚುಂಚನಕಟ್ಟೆಯ ಧನುಷ್ಕೋಟಿಯಲ್ಲಿ ಸುಂದರ ದೃಶ್ಯ ನಿರ್ಮಾಣವಾಗಿದೆ. ಇಲ್ಲಿನ ಜಲನೃತ್ಯ ನೋಡಲು ವೀಕೆಂಡ್ಗಳಲ್ಲಿ ಜನ ಮುಗಿ ಬೀಳುವುದು ಸಾಮಾನ್ಯವಾಗಿದೆ.
ಕಾವೇರಿ ಭೋರ್ಗರೆದು ಹರಿಯುವಾಗ ಸೃಷ್ಠಿಯಾಗುವ ಧನುಷ್ಕೋಟಿ ಜಲಧಾರೆಯ ದೃಶ್ಯ ವೈಭವವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

40 ಅಡಿಯಿಂದ ಧುಮ್ಮಿಕ್ಕುವ ಜಲಧಾರೆ
ಧನುಷ್ಕೋಟಿ ಜಲಪಾತವು ಸುಮಾರು 40ಕ್ಕೂ ಹೆಚ್ಚು ಅಡಿ ಎತ್ತರದಿಂದ ಧುಮುಕುತ್ತದೆ. ಬೇಸಿಗೆಯ ದಿನಗಳಲ್ಲಿ ಯಾವುದೇ ಅಬ್ಬರವಿಲ್ಲದೆ ಧುಮುಕುವ ಜಲಧಾರೆ ಮಳೆಗಾಲದಲ್ಲಿ ಮಾತ್ರ ತನ್ನ ರೌದ್ರತೆಯನ್ನು ತಾಳುತ್ತದೆ. ಹೆಬ್ಬಂಡೆಗಳ ಮೇಲೆ ಅಗಲವಾಗಿ ಕೆಂಬಣ್ಣದಿಂದ ಕೂಡಿ ಧುಮುಕುವ ನೀರು ನೋಡುಗರಿಗೆ ಮುದನೀಡುತ್ತದೆ.
ಇನ್ನು ಚುಂಚನಕಟ್ಟೆಗೆ ಬಂದ ಪ್ರವಾಸಿಗರು ಇಲ್ಲಿಗೆ ಸಮೀಪವಿರುವ ರಾಮಸಮುದ್ರ ಅಣ್ಣೆಕಟ್ಟೆ ಮತ್ತು ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಅಣ್ಣೆಕಟ್ಟೆಗೂ ತೆರಳಿ ನಿಸರ್ಗದ ಸೌಂದರ್ಯವನ್ನು ಸವಿಯಹುದಾಗಿದೆ

ಅದ್ಧೂರಿ ಜಲಪಾತೋತ್ಸವಕ್ಕೆ ತೀರ್ಮಾನ
ಈ ಬಾರಿ ಎರಡು ದಿನ ಜಲಪಾತೋತ್ಸವ ನಡೆಯಲಿದ್ದು, 30 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ಸಾಲಿಗಿಂತ ಈ ಬಾರಿ ಹೆಚ್ಚು ವೈಭವೋಪೇತವಾಗಿ ಕಾರ್ಯಕ್ರಮ ನಡೆಸಿ ಆ ಮೂಲಕ ಚುಂಚನಕಟ್ಟೆಯನ್ನು ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತರುವುದು ಶಾಸಕ ಸಾ.ರಾ.ಮಹೇಶ್ ಅವರ ಆಲೋಚನೆಯಾಗಿದೆ.

ಸೆಪ್ಟಂಬರ್ 9ಕ್ಕೆ ಚಾಲನೆ
ಸೆ.9ರಂದು ಸಂಜೆ ಆರು ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಜಲಪಾತೋತ್ಸವಕ್ಕೆ ಚಾಲನೆ ನೀಡಲಿದ್ದು ನಂತರ ಸುಧಾ ಬರಗೂರು ಅವರಿಂದ ಹಾಸ್ಯ ಸಂಜೆ ಹಾಗೂ ಆಪ್ತಮಿತ್ರ ಖ್ಯಾತಿಯ ನೃತ್ಯಪಟು ಶ್ರೀಧರನ್ ಅವರಿಂದ ನೃತ್ಯ ವೈಭವ ಮತ್ತು ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆ.10 ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಖ್ಯಾತ ಚಿತ್ರನಟ ಯಶ್ ಹಾಗೂ ರಾಧಿಕಾ ದಂಪತಿಗಳು ಪಾಲ್ಗೊಳ್ಳಲ್ಲಿದ್ದಾರೆ. ಇವರ ಜತೆಗೆ ಹಾಸ್ಯ ನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲಾ ಹಾಗೂ ತಂಡದಿಂದ ಸಂಗೀತ ರಸ ಸಂಜೆ ನಡೆಯಲಿದೆ.












Click it and Unblock the Notifications