ರಸ್ತೆ ಹೊಂಡದಲ್ಲಿ ಪೇಪರ್ ದೋಣಿ ತೇಲಿ ಬಿಟ್ಟ ಮಕ್ಕಳು!
ಮೈಸೂರು, ನವೆಂಬರ್ 14: ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ರಸ್ತೆಯಲ್ಲಿದ್ದ ಹೊಂಡದ ನೀರಿನಲ್ಲಿಯೇ ಮಕ್ಕಳು ದೋಣಿ ಬಿಟ್ಟು ಪ್ರತಿಭಟನೆ ಮಾಡಿ, ಮಕ್ಕಳ ದಿನಾಚರಣೆ ಆಚರಿಸಿದ ಘಟನೆ ನಗರದ ಮಹಾರಾಜ ಮೈದಾನದ ಬಳಿ ನಡೆದಿದೆ.
ಇದು ಒಂದು ಕಡೆ ಮಕ್ಕಳ ದಿನಾಚರಣೆ, ಮತ್ತೊಂದು ಕಡೆ ಪ್ರತಿಭಟನೆ ಎರಡನ್ನೂ ಒಂದೇ ಕಡೆ ನಡೆಸುವ ಮೂಲಕ ಸರಕಾರದ ಗಮನ ಸೆಳೆಯಲಾಯಿತು. ಈಗಾಗಲೇ ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವ ಬಗ್ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ನಗರದ ಮಹಾರಾಜ ಮೈದಾನದ ಪಕ್ಕದ ಅಂಡರ್ ಬ್ರಿಡ್ಜ್ ಪಕ್ಕದ ರಸ್ತೆಯಲ್ಲಿನ ಗುಂಡಿಗಳಿಗೆ ನೀರು ತುಂಬಿ ಮಕ್ಕಳಿಂದ ದೋಣಿ ಆಡಿಸುವ ಆಟ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಮಾಜ ಸೇವಕ ಜೋಗಿ ಮಂಜು, ಇವತ್ತು ಮಕ್ಕಳು ಹೋರಾಟದ ರೂಪದಲ್ಲಿ ಸರಕಾರದ ಗಮನ ಸೆಳೆಯಬೇಕು. ಏಕೆಂದರೆ ಮೈಸೂರು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಮೈಸೂರು ಗುಂಡಿಯ ನಗರವಾಗುತ್ತಿದೆ. ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತವಾಗುತ್ತಿರುವ ನಂಬರ್ ಒನ್ ರಾಜ್ಯ ಕರ್ನಾಟಕವಾಗಿದೆ ಎಂದರು.
ಹೊರ ರಾಜ್ಯದಿಂದ ಬರುವ ಪ್ರವಾಸಿಗರು ಎಚ್ಚರ ತಪ್ಪಿದರೆ ಅಪಘಾತ ತಪ್ಪಿದಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕು ಎಂದು ಆಗ್ರಹಿಸಿದ್ದರು. ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಜಗದೀಶ್ ಕಡಕೊಳ, ಕೆಎಂಪಿಕೆ ಚಾರಿಟಬಲ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ರಾಜೇಶ್, ಶ್ರೀಕಾಂತ್ ಕಶ್ಯಪ್, ಮೋಹನ್, ರಾಜಶೇಖರ, ಮಕ್ಕಳಾದ ಶೀತಲ್, ಸಂಜನಾ, ರಮ್ಯಾ, ರಾಜೇಶ್, ಗಗನ್ ಭಾಗವಹಿಸಿದ್ದರು.












Click it and Unblock the Notifications