ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಹುರಿಯಾಳು ಗೋಪಾಲ್ ರಾವ್ ಸಂದರ್ಶನ

ಮೈಸೂರು, ಏಪ್ರಿಲ್ 27 : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರ ಎಂದೇ ಬಿಂಬಿತವಾಗಿರುವುದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ. ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಿಂದ ಜಿ.ಟಿ.ದೇವೇಗೌಡರಂಥ ಇಬ್ಬರು ಘಟಾನುಘಟಿಗಳು ಅಖಾಡದಲ್ಲಿರುವ ಕ್ಷೇತ್ರವಿದು.

ಮೇಲುನೋಟಕ್ಕೆ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಮಧ್ಯೆಯೇ ಪೈಪೋಟಿ ಎಂಬಂತೆ ಇದೆ. ಆದರೆ ಇವರಿಬ್ಬರ ಮಧ್ಯೆಯೇ ಅಂಥ ಸದ್ದಿಲ್ಲದಂತೆ ಸುದ್ದಿ ಮಾಡುತ್ತಿದ್ದಾರೆ ಬಿಜೆಪಿಯ ಅಭ್ಯರ್ಥಿ ಗೋಪಾಲ್ ರಾವ್. ಹಗಲು -ರಾತ್ರಿ ಎನ್ನದೇ, ಬಿರು ಬಿಸಿಲಿನಲ್ಲಿ ಸಿದ್ದರಾಮಯ್ಯ ಹಾಗೂ ಜಿ.ಟಿ. ದೇವೇಗೌಡರಿಗಿಂತ ಮಿಂಚಿನ ವೇಗದಲ್ಲಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ.

ಇಂಥ ಘಟಾನುಘಟಿ ನಾಯಕರ ಎದುರು ಗೋಪಾಲ್ ರಾವ್ ಏನು ಮಾಡಲು ಸಾಧ್ಯ ಎಂಬ ಪ್ರಶ್ನೆ ಮಾಡುವವರಿಗೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. ಅಂದಹಾಗೆ ಚುನಾವಣೆಗಾಗಿ ಅವರು ಹೇಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಕುತೂಹಲಕ್ಕೆ ಅವರೇ ಉತ್ತರಿಸಿದ್ದಾರೆ. ಒನ್ಇಂಡಿಯಾ ಕನ್ನಡದ ಜತೆಗಿನ ಅವರ ಸಂದರ್ಶನ ಇಲ್ಲಿದೆ.

ಪ್ರಶ್ನೆ 1. ನಿಮಗೆ ಬಿಜೆಪಿಯಿಂದ ಟಿಕೆಟ್ ಸಿಗುತ್ತದೆ ಎಂಬ ಅಂದಾಜಿತ್ತಾ? ಟಿಕೆಟ್ ಸಿಕ್ಕ ಮೇಲಿನ ನಿಮ್ಮ ಪ್ರತಿಕ್ರಿಯೆ ಹೇಗಿತ್ತು?

ಗೋಪಾಲ್ ರಾವ್: ಟಿಕೆಟ್ ಸಿಗುವ ಬಗ್ಗೆ ನನಗೆ ಖಂಡಿತಾ ಗೊತ್ತಿರಲಿಲ್ಲ. ಆದರೆ ಪಕ್ಷದಿಂದ ಟಿಕೆಟ್ ಸಿಕ್ಕಾಗ ನನ್ನ ಖುಷಿಗಿಂತ ಕಾರ್ಯಕರ್ತರು ಹೆಚ್ಚು ಖುಷಿಪಟ್ಟಿದ್ದು ಸಂತಸ ಎನಿಸಿತು.

ಪ್ರಶ್ನೆ 2. ಚುನಾವಣೆ ಪ್ರಚಾರ ಕಾರ್ಯದಲ್ಲಿ ಯಾವ ರೀತಿ ತೊಡಗಿಕೊಂಡಿದ್ದೀರಿ?

Chamundeshwari constituency BJP candidate Gopal Rao interview

ಗೋಪಾಲ್ ರಾವ್: ನಾಮಪತ್ರ ಸಲ್ಲಿಸಿ ಕೆಲ ದಿನಗಳಾಗಿವೆ. ಅದಕ್ಕಿಂತ ಮುಂಚಿತವಾಗಿ ನಾನು ಪಕ್ಷದ ಸ್ವಯಂ ಸೇವಕನಾಗಿ ಕೆಲಸ ಮಾಡಿದ್ದೇನೆ. ಇಲ್ಲಿನ ಜನರು ನನ್ನನ್ನು ಮನೆ ಮಗನಾಗಿ ನೋಡಿಕೊಂಡು, ತುತ್ತು ಊಟ ಹಾಕುತ್ತಿದ್ದಾರೆ. ಪ್ರಚಾರ ಕಾರ್ಯದಲ್ಲಿ ನನ್ನೊಟ್ಟಿಗೆ ಕಾರ್ಯಕರ್ತರು ಭಾಗಿಯಾಗುತ್ತಿದ್ದಾರೆ. ಅದೇ ಸಂತೋಷ. ಈಗಾಗಲೇ ಮಿಸ್ ಕಾಲ್ ಅಭಿಯಾನ ಮಾಡಿದ್ದೇನೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಾಗಲಿದೆ.

ಪ್ರಶ್ನೆ 3. ಮತದಾರರನ್ನು ಸೆಳೆಯಲು ಯಾವ ರೀತಿ ತಂತ್ರವನ್ನು ಉಪಯೋಗಿಸುತ್ತಿದ್ದೀರಿ ?

ಗೋಪಾಲ್ ರಾವ್: ತಂತ್ರದಿಂದ ಯಾವ ಮತದಾರನ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ. ನಾನು ತಂತ್ರ ಉಪಯೋಗಿಸುತ್ತಿಲ್ಲ. ನನ್ನ ಕೆಲಸ ಹಾಗೂ ಜನಪರ ಕಾಳಜಿ ನೋಡಿ ಮತ ಹಾಕಿ ಎನ್ನುತ್ತಿದ್ದೇನೆ. ಅದೇ ನನ್ನ ಗೆಲುವಿನ ಶಕ್ತಿಯಾಗಲಿದೆ.

ಪ್ರಶ್ನೆ 4. ನೀವು ಈ ಬಾರಿ ಬಿಜೆಪಿಗೆ ಹೊಸ ಮುಖ. ಜನ ನಿಮ್ಮನ್ನು ಹೇಗೆ ನಂಬಬೇಕು?

Chamundeshwari constituency BJP candidate Gopal Rao interview

ಗೋಪಾಲ್ ರಾವ್: ನಾನು ಖಂಡಿತಾ ಹೊಸ ಮುಖವಲ್ಲ. ಈಗ ಬಂದವರೇ ಹೊಸಬರು. ನನ್ನೆದುರಿಗೆ ಬೆಳೆದವರು. ಜನ ಅವರ ಮನೆ ಮಗ ಎಂದುಕೊಂಡು ಓಟು ಹಾಕುತ್ತಾರೆ ಎಂಬ ವಿಶ್ವಾಸವಿದೆ.

ಪ್ರಶ್ನೆ 5. ನೀವು ಕಂಡಂತೆ ಕ್ಷೇತ್ರದ ಸಮಸ್ಯೆಗಳೇನು? ಶಾಸಕರಾಗಿ ನೀವು ಆಯ್ಕೆಯಾದರೆ ತರುವ ಬದಲಾವಣೆಗಳೇನು ?

ಗೋಪಾಲ್ ರಾವ್: ಕುಡಿಯುವ ನೀರಿನ ಸಮಸ್ಯೆ ಕ್ಷೇತ್ರದಲ್ಲಿ ತಾಂಡವವಾಡುತ್ತಿದೆ. ಶಾಸಕನಾಗಿ ಆಯ್ಕೆ ಆದರೆ ಅದನ್ನು ಬಗೆಹರಿಸುವುದೇ ನನ್ನ ಮೊದಲ ಆದ್ಯತೆ. ರಾಜ್ಯಕ್ಕೆ ಊಟದ ಭಾಗ್ಯ ಕೊಡುವ ಮುಖ್ಯಮಂತ್ರಿ ಸ್ಫರ್ಧಿಸುತ್ತಿರುವ ಕ್ಷೇತ್ರದಲ್ಲೇ ಶಾಲೆಯ ಮಕ್ಕಳಿಗೆ ಊಟದ ತಟ್ಟೆಯಿಲ್ಲ. ಇನ್ನು ಅವರು ಯಾವ ಸೀಮೆ ಜನನಾಯಕ?

ಪ್ರಶ್ನೆ 6. ಘಟಾನುಘಟಿ ನಾಯಕರ ಎದುರು ನೀವು ಸ್ಪರ್ಧೆ ಕೊಡಬಲ್ಲಿರಾ ?

ಗೋಪಾಲ್ ರಾವ್: ಯಾರೀ ಘಟಾನುಘಟಿ ನಾಯಕರು? ನನ್ನಷ್ಟು ಅವರಿಗೆ ವಯಸ್ಸಾಗಿಲ್ಲ. ನಾನು ಒಂದು ಪಕ್ಷದಲ್ಲಿಯೇ 55 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಅವರು ಹಾರುವ ಕುದುರೆಗಳು. ನನ್ನೆದುರು ಬೆಳೆದವರು. ನನ್ನಷ್ಟು ರಾಜಕೀಯ ಜ್ಞಾನವಿಲ್ಲದವರು. ಅವರದು ಅಧಿಕಾರದ ದಾಹ. ನನ್ನದು ಜನ ಸೇವೆಯ ದಾಹ. ಮತದಾರರು ಆಮಿಷಕ್ಕೆ ಒಳಗಾಗುವಷ್ಟು ದಡ್ಡರಲ್ಲ.

Chamundeshwari constituency BJP candidate Gopal Rao interview

ಪ್ರಶ್ನೆ 7. ಪ್ರಚಾರಕ್ಕೆ ಹೋದಾಗ ನಿಮಗೆ ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ?

ಗೋಪಾಲ್ ರಾವ್: ಸಂತಸ ಪಡುತ್ತಾರೆ. ಓಹ್, ನಿಮ್ಮನ್ನು ನಾವು ಚೆನ್ನಾಗಿ ಬಲ್ಲೆವು ಕಣ್ರೀ ಎನ್ನುತ್ತಾರೆ. ಏಕೆಂದರೆ, ನಾನು ಎಲ್ಲಾ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುತ್ತೇನೆ. ಜನರ ಕಷ್ಟಕ್ಕೆ ಕಿವಿಯಾಗಿದ್ದೇನೆ. ಜಿ.ಟಿ.ದೇವೇಗೌಡ, ಸಿದ್ದರಾಮಯ್ಯರ ಹಾಗೆ ನಾನು ಸಮಯ ಸಾಧಕನಲ್ಲ.

ಪ್ರಶ್ನೆ 8. ಸಿದ್ದರಾಮಯ್ಯ - ಜಿ.ಟಿ.ದೇವೇಗೌಡರಿಗಿಂತ ನೀವು ಹೇಗೆ ಭಿನ್ನ? ಜನ ನಿಮ್ಮಲ್ಲಿರುವ ಯಾವ ಗುಣ ನೋಡಿ ಮತ ಹಾಕಬೇಕು?

ಗೋಪಾಲ್ ರಾವ್: ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನನಗೊಂದು ಅವಕಾಶ ಕೊಡಿ. ಇನ್ನಷ್ಟು ಕೆಲಸ ಮಾಡಿ ತೋರಿಸುತ್ತೇನೆ. ಸಿದ್ದರಾಮಯ್ಯಗೆ ಮತ ಹಾಕಿದರೆ ಚಿಪ್ಪೇ ಗತಿ. ಒಮ್ಮೆಯೂ ನಿಮ್ಮ ಬಳಿ ಬರಲ್ಲ. ಜಿಟಿ ದೇವೇಗೌಡರ ಕೆಲಸವೇನು? ಎಷ್ಟು ಜನರ ಬಳಿ ಬಂದಿದ್ದಾರೆ ಎಂಬುದು ಈ ಬಾರಿ ಆಯ್ಕೆ ಮಾಡಿದ್ದಕ್ಕೆ ಜನಕ್ಕೆ ಅರಿವಾಗಿದೆ. ಹಾಗಾಗಿ ಗೆಲ್ಲುವ ವಿಶ್ವಾಸ ನನಗಿದೆ.

ಪ್ರಶ್ನೆ 9. ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕೆ ಬಿಜೆಪಿಯು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಅನ್ನೋ ಮಾತು ಕೇಳಿ ಬರ್ತಾ ಇದೆ. ಈ ಬಗ್ಗೆ ಏನಂತೀರಾ?

ಗೋಪಾಲ್ ರಾವ್: ಇಂತಹ ಸುಳ್ಳು ಸುದ್ದಿ- ವದಂತಿಗಳು ಚುನಾವಣೆ ವೇಳೆ ಸಾಮಾನ್ಯ. ಅವರ ಹಾಗೆ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ನನ್ನ ತಾಯಿ, ತಂಗಿಯನ್ನು ಮಾರಿಕೊಳ್ಳುವ ನೀಚ ಮನುಷ್ಯ ನಾನಲ್ಲ. ನಮ್ಮ ಪಕ್ಷ ತಾಯಿ ಇದ್ದ ಹಾಗೆ. ಅವರಿಗೆ ಏನೋ ನನಗೆ ಗೊತ್ತಿಲ್ಲ.

10. ಚಾಮುಂಡೇಶ್ವರಿಯಲ್ಲಿ ಒಕ್ಕಲಿಗ ಮತದಾರರೇ ಜಾಸ್ತಿ. ಇದು ಗೊತ್ತಿದ್ದರೂ ಬ್ರಾಹ್ಮಣ ಅಭ್ಯರ್ಥಿಯನ್ನು ಬಿಜೆಪಿ ಆಯ್ಕೆ ಮಾಡಿತು?

ಗೋಪಾಲ್ ರಾವ್: ಹೌದು, ಇಲ್ಲಿ ಒಕ್ಕಲಿಗರೇ ನಿರ್ಣಾಯಕರು. ಅದೇ ಪಕ್ಷದವರು ಅವರ ನಾಯಕರನ್ನು ಇದೇ ಕ್ಷೇತ್ರದಲ್ಲಿ ಮಣ್ಣು ಮುಕ್ಕಿಸಿದ್ದಾರೆ. ಅದನ್ನು ಮರೆಯುವಂತಿಲ್ಲ. ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಇಬ್ಬರೂ ನಾಯಕರು ಹಣದ ಹೊಳೆ ಹರಿಸಿ ಈಗಾಗಲೇ ಜನರನ್ನು ಕೊಂಡುಕೊಳ್ಳುತ್ತಿದ್ದಾರೆ. ನಾನು ಬ್ರಾಹ್ಮಣ ಎಂಬ ಜಾತಿ ನೋಡಿ ಮತ ಹಾಕುವುದಿಲ್ಲ. ಈಗಾಗಲೇ ಲಿಂಗಾಯತ- ವೀರಶೈವ ವಿಭಜನೆಯಿಂದ ಸಿದ್ದರಾಮಯ್ಯ ಮರ್ಯಾದೆ ಮಣ್ಣು ಪಾಲಾಗಿದೆ. ಹಾಗಾಗಿ ಈ ಬಾರಿ ಚಾಮುಂಡೇಶ್ವರಿಯಲ್ಲಿ ಬಹು ಮತಗಳ ಅಂತರದಿಂದ ಬಿಜೆಪಿ ಜಯಭೇರಿ ಬಾರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+