ಚುಂಚನಕಟ್ಟೆ ಜಲಪಾತದಲ್ಲಿ ಕೊಚ್ಚಿಹೋದ ಸಿಎಫ್ ಟಿಆರ್ ಐ ವಿಜ್ಞಾನಿ
ಮೈಸೂರು, ಜೂನ್ 4 : ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಪ್ರವಾಸಿ ತಾಣಕ್ಕೆ ಕುಟುಂಬ ಸಮೇತ ಪವಾಸಕ್ಕೆ ಬಂದಿದ್ದ ಮೈಸೂರು ಸಿಎಫ್ ಟಿಆರ್ ಐನ ಹಿರಿಯ ವಿಜ್ಞಾನಿಯೊಬ್ಬರು ಕುಟುಂಬದವರ ಕಣ್ಣೆದುರೇ ಕಾವೇರಿ ನದಿಯಲ್ಲಿ ಕೊಚ್ಚಿಹೋದ ದುರಂತ ಸಂಭವಿಸಿದೆ.
ಸಿಎಫ್ ಟಿಆರ್ ಐನಲ್ಲಿ ಹಿರಿಯ ವಿಜ್ಞಾನಿಯಾಗಿದ್ದ, ಹರಿಯಾಣ ಮೂಲದ ಸೋಮಶೇಖರ್ (42) ಮೃತರು. ಭಾನುವಾರ ರಜಾ ದಿನವಾದ್ದರಿಂದ ಪತ್ನಿ ಪ್ರತಿಮಾ ಮತ್ತು ಇಬ್ಬರ ಮಕ್ಕಳೊಂದಿಗೆ ಚುಂಚನಕಟ್ಟೆಗೆ ವಾರಾಂತ್ಯ ವಿಹಾರಕ್ಕೆಂದು ತೆರಳಿದ್ದರು. ನೀರಿನ ಹರಿವು ಇರಲಿಲ್ಲವಾದ್ದರಿಂದ ಬಂಡೆಗಳ ಮೇಲೆ ನಡೆಯುತ್ತಾ ಮಧ್ಯೆ ಹೋಗಿದ್ದಾರೆ.
ಆ ಬಳಿಕ ದಂಡೆಯಲ್ಲೇ ಇರುವ ಗ್ರಾಫೈಟ್ ಆಫ್ ಇಂಡಿಯಾ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿ, ದಿಢೀರ್ ಎಂದು ನದಿಗೆ ನೀರು ಹರಿಬಿಟ್ಟಿದ್ದರಿಂದ ಕುಟುಂಬವು ನೀರಿನ ಸೆಳೆತಕ್ಕೆ ಸಿಲುಕಿದೆ. ಕೂಡಲೇ ದಂಡೆಯಲ್ಲಿದ್ದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಹಗ್ಗದ ಸಹಾಯದಿಂದ ಸೋಮಶೇಖರ್ ಅವರ ಪತ್ನಿ ಪ್ರತಿಮಾ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ.

ಅಷ್ಟರಲ್ಲಾಗಲೇ ನೀರಿನ ನೀರಿನ ರಭಸ ಹೆಚ್ಚಾಗಿದೆ. ನೀರಿನ ಸೆಳೆತಕ್ಕೆ ಸಿಲುಕಿದ್ದ ಸೋಮಶೇಖರ್ ಅವರನ್ನು ಕಾಪಾಡಲು ಸಾರ್ವಜನಿಕರು ಬಹಳವಾಗಿ ಪ್ರಯತ್ನಿಸಿದರಾದರೂ ಯಶಸ್ವಿಯಾಗಿಲ್ಲ. ನೀರಿನ ರಭಸಕ್ಕೆ ಸೋಮಶೇಖರ್ ಕೊಚ್ಚಿಹೋಗಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋಗಿದ್ದ ಸೋಮಶೇಖರ್ ಅವರ ಮೃತದೇಹಕ್ಕಾಗಿ ಸ್ಥಳೀಯ ಮೀನುಗಾರರು ಮತ್ತು ನುರಿತ ಈಜುಗಾರರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇಂಡಿಯಾ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಾಗ ಸೈರನ್ ಮೊಳಗಿಸಿ ನೀರನ್ನು ನದಿಗೆ ಹರಿಬಿಡುತ್ತಾರೆ. ಆದರೆ ಆ ಶಬ್ದ ಸರಿಯಾಗಿ ಕೇಳಿಸದೆ ಪ್ರವಾಸಿಗರು ಅವಘಡಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಜಿಲ್ಲಾಡಳಿತ ವತಿಯಿಂದ ಜಲಪಾತದ ಬಳಿ ದೊಡ್ಡ ಸೈರನ್ ಅಳವಡಿಸಬೇಕು ಎಂಬುದು ಸಾರ್ವಜನಿಕರು ಹಾಗೂ ಪ್ರವಾಸಿಗರ ಆಗ್ರಹ.












Click it and Unblock the Notifications