ಮೈಸೂರು: ‘ಚರ್ಮಗಂಟು’ ಸಂಕಟ: ಜಾನುವಾರು ಸಾಗಾಟಕ್ಕೆ ನಿರ್ಬಂಧ
ಮೈಸೂರು, ಅಕ್ಟೋಬರ್ 13: ಮೈಸೂರು ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಜಾನುವಾರು ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾಸುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ತಾಲೂಕಿನಲ್ಲಿ ತುಸು ಆತಂಕ ಮೂಡಿಸಿದೆ. ರೋಗಕ್ಕೆ ಇದುವರೆಗೆ ಒಂದು ರಾಸು ಬಲಿಯಾಗಿದ್ದು, 26ಕ್ಕೂ ಹೆಚ್ಚು ರಾಸುಗಳು ಬಳಲುತ್ತಿವೆ.
ಮೊದಲಿಗೆ ರಾಜ್ಯದ ರಾಯಚೂರು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಪತ್ತೆಯಾದ ಈ ರೋಗ ಮೈಸೂರು ಜಿಲ್ಲೆಯ ತಿ.ನರಸೀಪುರ, ಕೃಷ್ಣರಾಜನಗರ, ಎಚ್.ಡಿ.ಕೋಟೆ, ಸರಗೂರು ಸೇರಿದಂತೆ ಇತರ ತಾಲೂಕುಗಳಲ್ಲಿ ಕಾಣಿಸಿಕೊಂಡಿದ್ದು, ರೈತರು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಮೈಸೂರು ತಾಲೂಕು ಸೇರಿದಂತೆ ನಾಲ್ಕು ತಾಲೂಕುಗಳಲ್ಲಿ ಈ ಚರ್ಮ ಗಂಟು ರೋಗ ಹಸು ಮತ್ತು ಎಮ್ಮೆಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡಿದ್ದು, ಹೆಚ್ಚು ಹರಡುವ ಸಾಧ್ಯತೆ ಇರುವುದರಿಂದ ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಪಶುಪಾಲನಾ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ 90 ಜಾನುವಾರುಗಳಿಗೆ ಈ ರೋಗ ಕಾಣಿಸಕೊಂಡಿದ್ದು, ಲಸಿಕೆ ನೀಡುವ ಕಾರ್ಯವನ್ನು ನಡೆಸಲಾಗುತ್ತಿದೆ. ಚೆಕ್ ಪೋಸ್ಟ್ ಸೋಂಕು ಪೀಡಿತ ಜಾನುವಾರು ಸೇರಿದಂತೆ ಯಾವುದೇ ಜಾನುವಾರುಗಳನ್ನು ಇನ್ನೂ ಎರಡು ತಿಂಗಳ ಸಾಗಾಟ ಮಾಡದಂತೆ ನಿಗಾವಹಿಸಲಾಗಿದೆ. ಜತೆಗೆ ಜಾನುವಾರು ಸಂತೆಗಳನ್ನು ಸಹ ನಿಷೇಧಿಸಲಾಗಿದೆ.
ಕೆ.ಆರ್.ನಗರ ತಾಲೂಕಿನ ಭೇರ್ಯ, ಹರಂಬಳ್ಳಿ, ಸುಗ್ಗನಹಳ್ಳಿ, ಸಂಬರವಳ್ಳಿ, ಅಂಕನಹಳ್ಳಿ, ಬೊಮ್ಮೇನಹಳ್ಳಿ ಸೇರಿದಂತೆ ಒಟ್ಟು 26ಕ್ಕೂ ಹೆಚ್ಚು ರಾಸುಗಳಿಗೆ ಈ ರೋಗ ಕಾಣಿಸಿಕೊಂಡಿದ್ದು, ಭೇರ್ಯ ಗ್ರಾಮದಲ್ಲಿ ಒಂದು ರಾಸು ಮೃತಪಟ್ಟಿದೆ. ಇನ್ನುಳಿದ ಎಲ್ಲಾ ರಾಸುಗಳಿಗೆ ಸೂಕ್ತ ಚಿಕಿತ್ಸೆ ನೀಡಿದ ಕಾರಣ ಚೇತರಿಸಿಕೊಳ್ಳುತ್ತಿವೆ.
ಏನಿದು ಚರ್ಮಗಂಟು..?
ರಾಸುಗಳಲ್ಲಿ ತೀವ್ರ ಜ್ವರ, ಮೇವು ತಿನ್ನದೆ ಇರುವುದು, ಕಡಿಮೆ ಹಾಲು ನೀಡುವುದು, ಮೂಗಲ್ಲಿ ನೀರು ಸೋರುವುದು, ಬಾಯಲ್ಲಿ ಜೊಲ್ಲು ಸುರಿಸುವುದು, ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳಾಗಿದೆ. ರಾಸುಗಳ ಆರೋಗ್ಯದ ದೃಷ್ಟಿಯಿಂದ ಇಂತಹ ಯಾವುದೇ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ರಾಸಿಗೆ ಚಿಕಿತ್ಸೆ ಕೊಡಿಸಬೇಕು. ಗಂಟು ಬಂದಿರುವ ಕಡೆ ಮತ್ತು ಮೈಗೆ ಬೇವಿನ ಎಣ್ಣೆ ಹಚ್ಚುವುದು ಹಾಗೂ ಬೇವಿನ ಸೊಪ್ಪಿನ ಎಲೆಯಿಂದ ಹೊಗೆ ಕೊಡಬೇಕು ಎಂದು ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪಶು ಇಲಾಖೆ ಮಾಹಿತಿ ನೀಡಿದೆ.
ಈ ರೋಗವು ರಾಸುಗಳಿಂದ ರಾಸುಗಳಿಗೆ ಸುಲಭವಾಗಿ ಹರಡುವ ಕಾಯಿಲೆಯಾಗಿದ್ದು, ರೈತರು ಎಚ್ಚರಿಕೆಯಿಂದ ರಾಸುಗಳನ್ನು ನೋಡಿಕೊಳ್ಳಬೇಕು. ಅಲ್ಲದೆ, ಒಂದು ರಾಸಿಗೆ ಏನಾದರೂ ಈ ರೋಗ ಬಂದಲ್ಲಿ ಅದನ್ನು ಬೇರೆ ರಾಸುಗಳಿಂದ ಬೇರ್ಪಡಿಸಿ ದೂರ ಇಡಬೇಕು. ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ರೋಗ ಉಲ್ಬಣವಾದಂತೆ ಎಚ್ಚರಿಕೆ ವಹಿಸಿರುವುದಾಗಿ ಕೃಷ್ಣರಾಜನಗರದ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಮಂಜುನಾಥ್ ತಿಳಿಸಿದ್ದಾರೆ.