ಮೈಸೂರಿನಲ್ಲಿ ಹೋಂ ಕ್ವಾರೆಂಟೈನ್ ಉಲ್ಲಂಘಿಸಿದ ವ್ಯಕ್ತಿ ಮೇಲೆ ಪ್ರಕರಣ
ಮೈಸೂರು, ಮಾರ್ಚ್ 24: ಕೊರೊನಾ (ಕೋವಿಡ್-19) ಸಂಬಂಧ ಹೋಂ ಕ್ವಾರೆಂಟೈನ್ ಆದೇಶ ಉಲ್ಲಂಘಿಸಿದ ವ್ಯಕ್ತಿ ವಿರುದ್ಧ ವಿ.ವಿ.ಪುರಂ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ವ್ಯಕ್ತಿಯನ್ನು ಗೃಹಬಂಧನದಲ್ಲಿ ಇರಿಸಿ ಮನೆಯಿಂದ ಹೊರ ಬರದಂತೆ ನಿಗಾ ವಹಿಸಲಾಗಿದೆ.
ಆಸ್ಟ್ರೇಲಿಯಾದಲ್ಲಿ ವಾಸವಿರುವ ನಗರದ ವ್ಯಕ್ತಿ ಮಾ.22ರಂದು ವಿಮಾನದಲ್ಲಿ ಬೆಂಗಳೂರು ಮೂಲಕ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿದ ಅಧಿಕಾರಿಗಳು ವ್ಯಕ್ತಿಯ ಮುಂಗೈಗೆ ಸೀಲ್ ಹಾಕಿ ವೈರಾಣು ಬಾಧಿತ ದೇಶದಿಂದ ಬಂದವರು. ಹಾಗಾಗಿ 14 ದಿನ ಹೋಂ ಕ್ವಾರೆಂಟೈನ್ (ಮನೆಯಲ್ಲಿ ಇದ್ದು ನಿಗಾ ವಹಿಸುವುದು) ಸೂಚನೆ ನೀಡಿದ್ದರು. ಹೀಗಾಗಿ ವ್ಯಕ್ತಿ ಏಪ್ರಿಲ್ 6ರವರೆಗೂ ವ್ಯಕ್ತಿ ಮನೆಯ ಒಳಗೆಯೇ ಪ್ರತ್ಯೇಕವಾಗಿ ಇರಬೇಕಾಗಿತ್ತು.
ಮೈಸೂರಲ್ಲಿ ಮೆಡಿಕಲ್ ಶಾಪ್ ಗೆ 5,000 ರೂ. ದಂಡ
ಆದರೆ ಈ ಆದೇಶವನ್ನು ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡಿದ್ದಾರೆ. ಇದನ್ನು ಕಂಡ ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಒಂದೊಮ್ಮೆ ವೈರಾಣು ಇದ್ದರೂ ಸಾರ್ವಜನಿಕ ಸ್ಥಳದಲ್ಲಿ ಓಡಾಡಿ ಆರೋಗ್ಯ ಇಲಾಖೆಯ ಆದೇಶವನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆಯುಕ್ತರಿಂದ ಎಚ್ಚರಿಕೆ: ಕೋವಿಡ್-19 ಸಂಬಂಧ ಹೋಂ ಕ್ವಾರೆಂಟೈನ್ ವಿಧಿಸಿರುವ ವ್ಯಕ್ತಿಗಳು ಆದೇಶವನ್ನು ಪಾಲಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನಿನ ರೀತ್ಯ ಪ್ರಕರಣ ದಾಖಲಿಸಲಾಗುವುದು ಎಂದು ಮೈಸೂರು ನಗರದ ಪೊಲೀಸ್ ಕಮೀಷನರ್ ಡಾ. ಚಂದ್ರಗುಪ್ತ ಎಚ್ಚರಿಸಿದ್ದಾರೆ.