ಚಾಮುಂಡೇಶ್ವರಿಯಲ್ಲಿ ಒಕ್ಕಲಿಗರ ಒಲಿಸಿಕೊಳ್ಳುವರೇ ಸಿದ್ದರಾಮಯ್ಯ?
ಮೈಸೂರು, ಏಪ್ರಿಲ್ 16: ಮೈಸೂರು ತಾಲ್ಲೂಕಿನ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಕುರಿತ ಮಾತಿಗೆ ಮುನ್ನ ಇದೊಂದು ಆಸಕ್ತಿಕರ ವೈಶಿಷ್ಟ್ಯವನ್ನು ಗಮನಿಸೋಣ. ಮೈಸೂರು ನಗರ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಯದುವಂಶದ ಮೂವರು ಪ್ರಮುಖ ದೊರೆಗಳಾದ ನರಸಿಂಹರಾಜ, ಕೃಷ್ಣರಾಜ ಮತ್ತು ಚಾಮರಾಜರ ಹೆಸರುಗಳನ್ನು ಇರಿಸಲಾಗಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಮತ್ತೆರಡು ಕ್ಷೇತ್ರಗಳ ಪೈಕಿ ಒಂದಕ್ಕೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಹೆಸರಿದ್ದರೆ ಮತ್ತೊಂದಕ್ಕೆ ಜಿಲ್ಲೆಯ ರೈತರ ಜೀವನಾಡಿಯಾದ ಕಾಲುವೆ(ನಾಲೆ) ವರುಣಾ ಹೆಸರಿಡಲಾಗಿದೆ. ಇದು ದೇಶದ ಬೇರೆ ಯಾವ ಭಾಗದಲ್ಲೂ ಕಾಣಸಿಗದ ಅಪರೂಪದ ವಿಶೇಷತೆ.
ಆಗಿದ್ದು ಆಗಲಿ ಎಂದು ದೇವೇಗೌಡ್ರಿಗೆ ತೊಡೆತಟ್ಟಿದರೇ ಸಿದ್ದರಾಮಯ್ಯ?
ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ ಇಡೀ ರಾಜ್ಯದ ಗಮನಸೆಳೆದಿದೆ.ದಿನಕಳೆದಂತೆ ಇಲ್ಲಿನ ಚುನಾವಣಾ ಕಣ ರಂಗೇರತೊಡಗಿದೆ. ಈ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹತ್ತು ವರ್ಷಗಳ ಬಳಿಕ ತಮ್ಮ ಸ್ವಕ್ಷೇತ್ರಕ್ಕೆ ಮರಳಿದ್ದಾರೆ. ಅವರ ಒಂದು ಕಾಲದ ಒಡನಾಡಿ, ಗೆಳೆಯ ಜೆ.ಡಿ.ಎಸ್.ನಿಂದ ಉಮೇದುವಾರರಾಗಿರುವ ಜಿ.ಟಿ.ದೇವೇಗೌಡರು ಅವರಿಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಜಿದ್ದಾಜಿದ್ದಿ ಸ್ಪರ್ಧೆಗೆ ರಣಕಣ ಸಜ್ಜಾಗಿದ್ದು ಸಿಎಂ ಮತ್ತು ಅವರ ಮತ್ತು ಬೆಂಬಲಿಗರ ನಿದ್ದೆಗೆಡಿಸಿದೆ.
ಕಾಂಗ್ರೆಸ್ ಪಟ್ಟಿ: ಒಂದೇ ಕ್ಷೇತ್ರ ಸಿಕ್ಕರೇನು, ಸಿದ್ದುವೇ ಬಿಗ್ ಬಾಸ್!
ಸರಕಾರದ ಸಾಧನೆಗಳು ಮತ್ತು ಆಡಳಿತ ಪಕ್ಷದ ವೈಫಲ್ಯಗಳನ್ನು ಜನರಿಗೆ ತಲುಪಿಸಿ ಪ್ರಚಾರ ಮಾಡಬೇಕಿದ್ದ ಆಡಳಿತ ಮತ್ತು ವಿಪಕ್ಷಗಳು ಜಾತಿ ವಿಭಜನೆ ಮತ್ತು ಕ್ರೂಢೀಕರಣದಂತಹ ಕೆಲಸಗಳ ಮೂಲಕ ಪರಸ್ಪರರ ಮೇಲೆ ಕೆಸರೆರಚಾಟದಲ್ಲಿ ತೊಡಗಿರುವುದು ಪ್ರಜಾಪ್ರಭುತ್ವದ ಅಣಕವೇ ಸರಿ.
ಚುನಾವಣೆ ಬಂದಿದೆ, ಒಂದಿಷ್ಟು ಹಾಸ್ಯ, ಒಂದಿಷ್ಟು ರಂಜನೆ!
ಈ ಎಲ್ಲಾ ಬೆಳವಣಿಗೆಗಳ ನಡುವೆ ಒಕ್ಕಲಿಗ ಮತದಾರರ ಮತ ಸೆಳೆಯುವಲ್ಲಿ ಸಿಎಂ ಸಿದ್ದರಾಮಯ್ಯನವರು ಯಶಸ್ವಿಯಾಗುವರೇ ಎಂಬ ಕುತೂಹಲ ಮೇ ೧೫ರ ಮತ ಎಣಿಕೆಯ ಬಳಿಕವಷ್ಟೇ ಬಯಲಾಗಲಿದೆ. ತೀವ್ರ ಪೈಪೋಟಿ, ಪರಸ್ಪರ ವಾಕ್ಸಮರ, ತಂತ್ರ-ಪ್ರತಿತಂತ್ರ, ಎರಡೂ ಬಣಗಳಿಂದ ನಿರಂತರ ಪಕ್ಷಾಂತರ, ಏಟು-ಎದಿರೇಟು, ಪ್ರತಿಏಟು, ಒಳೇಟು, ಅಡ್ಡೇಟು, ಮತದಾರರ ಓಲೈಕೆಗೆ ವಿವಿಧ ಆಮಿಷಗಳು, ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ, ಚಕಮಕಿ ಈ ಎಲ್ಲವುಗಳ ಕಾರಣದಿಂದ ಈ ಕ್ಷೇತ್ರ ಅಕ್ಷರಶಃ ರಣಾಂಗಣವಾಗಿ ಬದಲಾಗಿದೆ ಮತ್ತು ಉಪಚುನಾವಣೆಯ ದಿನಗಳನ್ನು ನೆನಪಿಗೆ ತರುತ್ತಿದೆ.
ದಶಕದ ಬಳಿಕ ಮತ್ತೆ ಒಲಿವಳೇ ಅಧಿದೇವತೆ?
ಅತ್ಯಂತ ಬಿರುಸು ಮತ್ತು ಅಬ್ಬರದಿಂದ ಎರಡೂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದು, ಸಿದ್ದರಾಮಯ್ಯನವರ ಗೆಲುವಿಗೆ ತೊಡಕಾಗಬಲ್ಲ ಹಲವು ಅಂಶಗಳು ಕಂಡುಬರುತ್ತಿವೆ. ಪ್ರಮುಖವಾಗಿ ಕಳೆದ ಹಲವು ವರ್ಷಗಳಿಂದ ಸಿದ್ದರಾಮಯ್ಯನವರ ಜೊತೆಗಿದ್ದ ಹಿರಿಯ ರಾಜಕೀಯ ಮುಖಂಡರಾದ ಎಚ್.ವಿಶ್ವನಾಥ್ ಮತ್ತು ವಿ.ಶ್ರೀನಿವಾಸ ಪ್ರಸಾದ್ ಸಿದ್ದರಾಮಯ್ಯನವರ ವಿರುದ್ಧ ಮುನಿದು ಈಗ ಕಾಂಗ್ರೆಸ್ ತ್ಯಜಿಸಿದ್ದು,ಈ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಮಣಿಸಿಯೇ ತೀರಿಸಲು ತಮ್ಮ ದೀರ್ಘಕಾಲದ ರಾಜಕೀಯ ಅನುಭವವನ್ನು ಪಣಕಿಟ್ಟಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಎದುರಿಗೆ 7 ಸವಾಲುಗಳು
ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿದ್ದ ಜಿ.ಟಿ. ದೇವೇಗೌಡರು
ಹಾಲಿ ಶಾಸಕರಾದ ಜೆ.ಡಿ.ಎಸ್. ಪಕ್ಷದ ಜಿ.ಟಿ.ದೇವೇಗೌಡರು ಕ್ಷೇತ್ರದ ಬಹುಸಂಖ್ಯಾತ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ಸಿದ್ದರಾಮಯ್ಯನವರ ಒಂದು ಕಾಲದ ಆಪ್ತ ಬಳಗದಲ್ಲಿದ್ದವರು. ಹಾಗಾಗಿ ಸಿದ್ದರಾಮಯ್ಯನವರ ರಾಜಕೀಯ ಪಟ್ಟುಗಳು ಇವರಿಗೂ ಕರಗತವಾಗಿದ್ದು ಈ ಚುನಾವಣೆಯಲ್ಲಿ ಅದನ್ನೆಲ್ಲ ಪ್ರಯೋಗಿಸಿ ತನ್ಮೂಲಕ ಈ ಚುನಾವಣೆಯನ್ನು ಗೆದ್ದೇತೀರಬೇಕು ಎಂದು ಪಣತೊಟ್ಟಿದ್ದಾರೆ.
ಜೆ.ಡಿ.ಎಸ್. ನಾಯಕರಾದ ಶ್ರೀ ಎಚ್.ಡಿ.ದೇವೇಗೌಡ ಮತ್ತು ಕುಮಾರ ಸ್ವಾಮಿಯವರು ಈ ಕ್ಷೇತ್ರವನ್ನು ತಮ್ಮ ಪ್ರತಿಷ್ಟೆಯ ಕಣವನ್ನಾಗಿ ಸ್ವೀಕರಿಸಿದ್ದಾರೆ. ಜೆಡಿಎಸ್ ಪಕ್ಷ ತನ್ನ ಪ್ರಚಾರ ಅಭಿಯಾನ "ಕುಮಾರ ಪರ್ವ" ಕ್ಕೆ ಚಾಲನೆ ನೀಡಲು ಆರಿಸಿಕೊಂಡಿದ್ದು ಇದೇ ಕ್ಷೇತ್ರವನ್ನು ಎಂಬುದರಿಂದಲೇ ಈ ಕ್ಷೇತ್ರಕ್ಕೆ ಆ ಪಕ್ಷ ಕೊಟ್ಟಿರುವ ಪ್ರಾಮುಖ್ಯತೆ ಅರಿವಾಗುತ್ತದೆ. ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರವನ್ನು ಮುಗಿಸಿರುವ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಈ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಭೇರಿ ಹೊಡೆಯಲು ಅಗತ್ಯವಿರುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!
ಜೆ.ಡಿ.ಎಸ್. ಮತ್ತು ಬಿ.ಜೆ.ಪಿ ಒಳ ಒಪ್ಪಂದದ ಸಾಧ್ಯತೆ
ಸಿದ್ದರಾಮಯ್ಯನವರ ಸಮಾನ ವೈರಿಗಳಾಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ವರುಣಾ ಕ್ಷೇತ್ರದಲ್ಲಿ ಅವರ ಪುತ್ರ ಯತೀಂದ್ರ ಅವರನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ. ಪಕ್ಕದ ವರುಣಾ ಕ್ಷೇತ್ರದಲ್ಲಿ ಬಿ.ಎಸ್.ವೈ. ಅವರ ಪುತ್ರ ವಿಜಯೇಂದ್ರ ಬಿ.ಜೆ.ಪಿ ಯಿಂದ ಸ್ಪರ್ಧಿಸುತ್ತಿರುವ ಕಾರಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆ.ಡಿ.ಎಸ್.ಗೆ ಮತ್ತು ವರುಣಾದಲ್ಲಿ ಬಿ.ಜೆ.ಪಿ.ಗೆ ಅನುಕೂಲಕರವಾಗುವ ಅಭ್ಯರ್ಥಿಗಳನ್ನು ನಿಲ್ಲಿಸಲು ಎರಡೂ ಪಕ್ಷಗಳು ತೀರ್ಮಾನಿಸಿರುವ ಕುರಿತ ಗುಸುಗುಸುಗಳು ಕ್ಷೇತ್ರದಾದ್ಯಂತ ಸಂಚರಿಸುತ್ತಿವೆ.
ಕೆಎಎಸ್ ನಿಂದ ಐಎಎಸ್ ಗೆ ಪದೋನ್ನತಿ ವಿಳಂಬ ಆರೋಪ
ಹಾಗೆಯೇ ಒಕ್ಕಲಿಗ ಅಧಿಕಾರಿಗಳಿಗೆ ಕೆ.ಎ.ಎಸ್.ನಿಂದ ಐ.ಎ.ಎಸ್. ಹುದ್ದೆಗೆ ಪದೋನ್ನತಿ ನೀಡುವ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಯಿತು ಎಂಬ ಆರೋಪವನ್ನೂ ಹೊರೆಸಲಾಗುತ್ತಿದೆ. ಇದಿಷ್ಟು ಮಾತ್ರವಲ್ಲದೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಹಕಾರಿ ಸಂಘ ಸಂಸ್ಥೆ, ಎ.ಪಿ.ಎಂ.ಸಿ., ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ... ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಒಕ್ಕಲಿಗ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದರೂ ಮೀಸಲಾತಿ ಅಸ್ತ್ರದ ಮೂಲಕ ಬಹುಪಾಲು ಕಡೆಗಳಲ್ಲಿ ಅವರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ದೊರಕದಂತೆ ವ್ಯವಸ್ಥಿತ ಷಡ್ಯಂತ್ರ ಹೆಣೆಯಲಾಯ್ತು ಎನ್ನುವುದು ಮತ್ತೊಂದು ಗಂಭೀರ ಆರೋಪ.
ಕಬ್ಬಿಣದ ಕಡಲೆಯಂತಾದ ಆರೋಪಗಳು
ಇದು ಸಿದ್ದರಾಮಯ್ಯನವರ ಪಾಲಿಗೆ ಕಬ್ಬಿಣದ ಕಡಲೆಯಂತೆ, ಕಾದ ಸೀಸದಂತೆ ಭಾಸವಾಗುತ್ತಿದೆ, ಅವರ ಗೆಲುವಿನ ಹಾದಿಯನ್ನು ಕಠಿಣಗೊಳಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರಿಂದ ಧೃತಿಗೆಟ್ಟಂತೆ ಕಂಡುಬರುತ್ತಿರುವ ಸಿದ್ದರಾಮಯ್ಯ ಕ್ಷೇತ್ರದ ಒಕ್ಕಲಿಗ ಮುಖಂಡರ ಮನವೊಲಿಕೆಯ ಕಸರತ್ತಿಗೆ ಕೈಹಾಕಿದ್ದಾರೆ, ಇದು ನನ್ನ ಕಡೆಯ ಚುನಾವಣೆ, ನೀವು ಕೇವಲ ಒಬ್ಬ ಶಾಸಕನನ್ನು ಆಯ್ಕೆ ಮಾಡುತ್ತಿಲ್ಲ ಬದಲಿಗೆ ಮುಖ್ಯಮಂತ್ರಿಯನ್ನು ಗೆಲ್ಲಿಸುತ್ತೀರ ಎಂಬ ಭಾವನಾತ್ಮಕ ಅಸ್ತ್ರದ ಮೂಲಕ ಜನರ ಬಳಿ ತೆರಳಿ ಪ್ರಚಾರ ಮಾಡುತ್ತಿದ್ದಾರೆ, 2006 ರ ಉಪಚುನಾವಣೆಯನ್ನು ಪ್ರಸ್ತಾಪಿಸಿ ಇದು ನನಗೆ ರಾಜಕೀಯ ಮರುಜನ್ಮ ನೀಡುವ ಮೂಲಕ ನನಗೆ ಮರಳಿ ಶಕ್ತಿ ತುಂಬಿದ ಕ್ಷೇತ್ರ ಎಂದು ಭಾವೋದ್ವೇಗಕ್ಕೆ ಒಳಗಾಗಿ ಭಾಷಣ ಮಾಡುತ್ತಿದ್ದಾರೆ.
ಜೆಡಿಎಸ್ ಒಕ್ಕಲಿಗರ ವಿರೋದಿ ಎನ್ನುತ್ತಿದೆ ಕಾಂಗ್ರೆಸ್?
ತಾವು ಒಕ್ಕಲಿಗ ವಿರೋಧಿ ಎನ್ನುವುದನ್ನು ಅಲ್ಲಗಳೆಯುವುದಕ್ಕೆ ಸಾಕ್ಷಿಯಾಗಿ ಕೆಂಪೇಗೌಡ ಜಯಂತಿಯನ್ನು ಸರಕಾರದ ವತಿಯಿಂದ ನಡೆಸಲು ನಿರ್ಧರಿಸಿ ಕ್ರಮ ಕೈಗೊಂಡಿದ್ದು ತಮ್ಮ ನೇತೃತ್ವದ ಸರಕಾರ ಎಂದು ಪ್ರಚಾರ ಮಾಡುತ್ತಿದ್ದಾರೆ. ಬಿರುಬೇಸಿಗೆಯ ನಡುವೆಯೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರಾದ್ಯಂತ ಸಂಚರಿಸಿ ಮತ ಯಾಚನೆಯಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯನವರ ಪರ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ಜೆ.ಡಿ.ಎಸ್. ಪಕ್ಷವೇ ಅಸಲು ಒಕ್ಕಲಿಗ ವಿರೋಧಿ ಎಂಬ ಗಟ್ಟಿ ಆರೋಪದಲ್ಲಿ ತೊಡಗಿದೆ.
ಕಾಂಗ್ರೆಸ್ ನಿಂದ ಸ್ವಜಾತಿ ರಾಜಕಾರಣ ಜೆಡಿಎಸ್ ಆರೋಪ
ಇದರ ಜೊತೆಗೆ ಸಿದ್ದರಾಮಯ್ಯರ ಗೆಲುವಿಗೆ ತಡೆಯಾಗಿರುವ ಮತ್ತೊಂದು ಅತ್ಯಂತ ಪ್ರಬಲವಾದ ಅಂಶವೆಂದರೆ ಈ ಕ್ಷೇತ್ರದ ಜಾತಿ ಸಮೀಕರಣ. ಜಾತಿಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರ ಮತಗಳು ಇಲ್ಲಿ ನಿರ್ಣಾಯಕವಾಗಲಿವೆ. ಸಿಎಂ ಅವಕಾಶವಾದಾಗಲೆಲ್ಲಾ ದೇವೇಗೌಡ ಮತ್ತವರ ಕುಟುಂಬದ ವಿರುದ್ಧ ಅಗತ್ಯಕ್ಕೂ ಮೀರಿ ಕಟು ಟೀಕಾಪ್ರಹಾರ ಮಾಡುವುದರ ಮೂಲಕ ಒಕ್ಕಲಿಗರ ಆಕ್ರೋಶಕ್ಕೆ ಕಾರಣವರಾಗಿದ್ದಾರೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.
ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ ತಮ್ಮ ಜಾತಿಯ ಅಧಿಕಾರಿಗಳನ್ನು ಉದ್ದೇಶಪೂರ್ವಕಾಗಿ ಹಣಿಯಲಾಗಿದೆ ಎಂದು ಈ ವರ್ಗ ಕುಪಿತಗೊಂಡಿರುವುದಾಗಿ ಹೇಳಲಾಗುತ್ತಿದೆ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಒಕ್ಕಲಿಗ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳನ್ನು ಬೇಕಂತಲೇ ತಪ್ಪಿಸಿ ಸಿಎಂ ತಮ್ಮ ಸ್ವಜಾತಿ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದರು ಎಂಬ ಗಂಭೀರ ಆರೋಪವನ್ನು ಮಾಡುವ ಮೂಲಕ ಒಕ್ಕಲಿಗ ಮತಗಳ ಕ್ರೂಢೀಕರಣಕ್ಕೆ ಜೆ.ಡಿ.ಎಸ್ ಮುಂದಾಗಿದೆ.
ಒಕ್ಕಲಿಗರಲ್ಲಿ ಬೇರೆ ನಾಯಕರು ಬೆಳೆಯಬಾರದೆ?
ದೇವೇಗೌಡರ ಕುಟುಂಬ ಇತರೆ ಒಕ್ಕಲಿಗ ಮುಖಂಡರ ಬೆಳವಣಿಗೆಯನ್ನು ಸಹಿಸದೇ ಅವರನ್ನು ನಿಕೃಷ್ಟವಾಗಿ ನಡೆಸಿಕೊಂಡಿದೆ ಎಂಬ ಸುದ್ದಿ ಬಿತ್ತರ ಮಾಡುತ್ತಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಹಿರಿಯ ರಾಜಕೀಯ ಮುಖಂಡರಾದ ಕೆ.ಎನ್.ನಾಗೇಗೌಡ, ವರದೇಗೌಡ, ಎಚ್.ಎನ್.ನಂಜೇಗೌಡ, ಬಚ್ಚೇಗೌಡ, ವೈ.ಕೆ.ರಾಮಯ್ಯ, ಜೀವರಾಜ್ ಆಳ್ವ, ಭೈರೇಗೌಡ ಮೊದಲಾದ ದಿಗ್ಗಜ ಮುಖಂಡರು ಜನತಾಪರಿವಾರ ತೊರೆಯಲು ದೇವೇಗೌಡ ಕುಟುಂಬದ ಕಿರುಕುಳವೇ ಕಾರಣ ಎಂದು ದೂಷಿಸುತ್ತಿದೆ.
ಜನತಾದಳ ವಿಭಜನೆಯ ವೇಳೆ ಬಹುತೇಕ ಒಕ್ಕಲಿಗ ನಾಯಕರು ದೇವೇಗೌಡರ ಜೊತೆ ಗುರುತಿಸಿಕೊಳ್ಳದೆ ಜೆ.ಎಚ್.ಪಟೇಲರ ಜೆ.ಡಿ.(ಯು) ಬಣದೊಂದಿಗೆ ಹೆಜ್ಜೆಹಾಕಲು ಕಾರಣ ಏನೆಂದು ಪ್ರಶ್ನಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆಲ್ಲುವ ಕುದುರೆಯಾಗಿದ್ದ ಬಚ್ಚೇಗೌಡರನ್ನು ಸೋಲಿಸುವ ಸಲುವಾಗಿಯೇ ಎಚ್.ಡಿ.ಕೆ. ಅಲ್ಲಿಂದ ಸ್ಪರ್ಧಿಸಿ ಕಾಂಗ್ರೆಸ್ ನ ವೀರಪ್ಪ ಮೊಯ್ಲಿಯವರ ಗೆಲುವಿಗೆ ಕಾರಣವಾದರು ಎನ್ನುವ ಆರೋಪವನ್ನು ಹೊರಿಸುತ್ತಿದೆ.
ವರ್ಚಸ್ವಿ ನಾಯಕರಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಒಕ್ಕಲಿಗ ಮುಖಂಡ ಸಿ.ಪಿ.ಯೋಗೇಶ್ವರ್ ಅವರ ರಾಜಕೀಯ ಬೆಳವಣಿಗೆಯನ್ನು ಹತ್ತಿಕ್ಕುವ ಉದ್ದೇಶದಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಸ್ಪರ್ಧಿಸುತ್ತಿದ್ದಾರೆ ಎಂಬ ಗಹನವಾದ ಆರೋಪವನ್ನೂ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ.