ಮೈಸೂರು ದಸರಾ ಪೂಜಾ ವಿಧಿವಿಧಾನಗಳ ಸಂಪೂರ್ಣ ವಿವರಣೆ ಇಲ್ಲಿದೆ!
ಮೈಸೂರು, ಸೆ.24: ಐತಿಹಾಸಿಕ ಮೈಸೂರು ದಸರಾ ಈ ಬಾರಿ 11 ದಿನಗಳ ಕಾಲ ನಡೆಯಲಿದ್ದು, ದಸರಾ ಆಚರಣೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇನ್ನು ಅರಮನೆಯಲ್ಲಿ ನಡೆಯುವ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ವೇಳಾ ಪಟ್ಟಿ ಸಿದ್ಧಗೊಂಡಿದೆ. [ಮೈಸೂರು ದಸರಾಕ್ಕೆ ಗೋಲ್ಡನ್ ಚಾರಿಯಟ್ನಲ್ಲಿ ಬನ್ನಿ]
ಈ ಹಿಂದೆ 10 ದಿನಗಳ ಕಾಲ ನಡೆಯುತ್ತಿದ್ದ ದಸರಾ ಆಚರಣೆ ಇಪ್ಪತೈದು ವರ್ಷಗಳ ಬಳಿಕ 11 ದಿನಗಳವರೆಗೆ ನಡೆಯಲಿದೆ. ರಾಜ ಪರಂಪರೆಯಂತೆ ಅರಮನೆ ಒಳಗೆ ಸಿದ್ಧತೆ ಆರಂಭಗೊಂಡಿದ್ದು, ಸೆ.25 ರಂದು ಬೆಳಗ್ಗೆ 6 ಗಂಟೆಯಿಂದ ಪೂರ್ವಭಾವಿಯಾಗಿ ನವಗ್ರಹ, ಗಣಪತಿ ಹೋಮ ಮತ್ತು ಶಾಂತಿ ಪೂಜೆ ನಡೆಯಲಿವೆ. ಬೆಳಗ್ಗೆ 8.10 ರಿಂದ 9.40ರ ಒಳಗೆ ರತ್ನ ಖಚಿತ ಸಿಂಹಾಸನವನ್ನು ಹೊರ ತೆಗೆದು ಕನ್ನಡಿ ತೊಟ್ಟಿಯಲ್ಲಿ ಜೋಡಿಸಲಾಗುತ್ತದೆ. [ನಾಡಹಬ್ಬ ಮೈಸೂರು ದಸರಾ ಲಾಂಛನ, ವೆಬ್ ಸೈಟ್ ಅನಾವರಣ]
ಮೊದಲ ದಿನ ಅ.1 ಕ್ಕೆ ದಸರಾ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಅಂದಿನಿಂದ ಅ.11ರವರೆಗೆ ಜಂಬೂ ಸವಾರಿ ನಡೆಯುವರೆಗೆ ಅರಮನೆಯಲ್ಲಿ ಸಾಂಪ್ರದಾಯಕವಾಗಿ ಪೂಜೆ ಪುನಸ್ಕಾರಗಳು ಜರುಗಲಿವೆ.
ಇನ್ನು ದಸರಾ ಆರಂಭವಾಗಿನಿಂದ ಆಯುಧ ಪೂಜೆ ದಿನದವರೆಗೂ ಯದುವೀರ್ ನಿತ್ಯ ಸಂಜೆ ಖಾಸಗಿ ದರ್ಬಾರ್ ನಡೆಸಿ ನವರಾತ್ರಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವರು. 11 ದಿನಗಳಲ್ಲಿ ಪ್ರಮುಖ ದಿನ ಅರಮನೆಯಲ್ಲಿ ನಡೆಯುವ ವಿವಿಧ ಪೂಜೆ, ಹೋಮ, ಕಾರ್ಯಕ್ರಮಗಳು.
ಅ.1ದಸರಾ ಮೊದಲನೇ ದಿನ
ದಸರಾದ ಮೊದಲನೇ ದಿನ ಅ.1 ರಂದು ಶನಿವಾರ ಮುಂಜಾನೆ 5.55 ರಿಂದ 6.10ರ ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ರತ್ನ ಖಚಿತ ಸಿಂಹಗಳ ಮೆಟ್ಟಿಲು ಜೋಡಣೆ ಕಾರ್ಯ ನಡೆಯಲಿದೆ. ಬೆಳಗ್ಗೆ 7 ರಿಂದ 7.20 ರ ವೇಳೆಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಕಂಕಣ ಕಟ್ಟಲಾಗುತ್ತದೆ. ಬಳಿಕ 11.30ರ ವೇಳೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಸವಾರಿ ತೊಟ್ಟಿಗೆ ಬಂದು ಕಳಸ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ನೆರವೇರಿಸುವರು.
ಏಳನೇ ದಿನ
ಅ.7 ದಸರಾ ಏಳನೇ ದಿನದಂದು ಮಧ್ಯಾಹ್ನ 12.10 ರಿಂದ 1.10ರವರೆಗೆ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಪೂಜೆ ನೆರವೆರಲಿದೆ.
ಅ. 8ರ ರಾತ್ರಿ ವಿಶೇಷ ಪೂಜೆ.
8ರ ದಿನದಂದುವಿಧಿ-ವಿಧಾನಗಳಿಂದ ರಾತ್ರಿ ವಿಶೇಷ ಕಾಳರಾತ್ರಿ ಪೂಜೆ ಜರುಗಲಿದೆ.
ಅ.10 ಆಯುಧ ಪೂಜೆ ದಿನ
10 ರಂದು ಮುಂಜಾನೆ 6.15 ರಿಂದ 6.20 ರೊಳಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಆನೆ ಬಾಗಿಲ ಮೂಲಕ ಒಳ ಪ್ರವೇಶಿಸಿ ಪೂಜೆ ಸಲ್ಲಿಸಲಾಗುವುದು. ಬೆಳಗ್ಗೆ 8 ಗಂಟೆಗೆ ಚಂಡಿಕಾ ಹೋಮ, ಪೂರ್ಣಾಹುತಿ ಜರುಗಲಿದೆ. ನಂತರ 9.45 ಕ್ಕೆ ಆಯುಧ ಪೂಜೆಯಲ್ಲಿ ಹಸು, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಆನೆ, ಪಟ್ಟದ ಒಂಟೆ, ಹಾಗೂ ರತ್ನ ಖಚಿತ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಸಂಜೆ 7 ಗಂಟೆಗೆ ಅಂಬಾವಿಲಾಸ ದರ್ಬಾರ್ ಹಾಲ್ನಲ್ಲಿ ಕೊನೆ ದಿನದ ಖಾಸಗಿ ದರ್ಬಾರ್ ನೆರವೇರಿಸಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಸಿಂಹಗಳನ್ನು ವಿಸರ್ಜನೆ ಮಾಡುವರು.
11 ರಂದು ಜಂಬೂ ಸವಾರಿ ನಡೆಯಲಿದೆ
11 ರಂದು ವಿಜಯದಶಮಿ ದಿನ ಅರಮನೆ ಕಲ್ಯಾಣಿ ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ನಂತರ ಭುವನೇಶ್ವರಿ ದೇವಾಲಯದ ಆವರಣದಲ್ಲಿರುವ ಬನ್ನೀಮರಕ್ಕೆ ಯದುವೀರ್ ವಿಜಯಯಾತ್ರೆ ಹೊರಟು ಪೂಜೆ ಸಲ್ಲಿಸುವರು. ನಂತರ ಜಂಬೂ ಸವಾರಿ ನಡೆಯಲಿದೆ.