ಅಂತೂ ಮಾತನಾಡಿದರು ಬಿಜೆಪಿಯ 'ಸಡನ್ ಸ್ಟಾರ್' ವಿಜಯೇಂದ್ರ
ಮೈಸೂರು, ಏಪ್ರಿಲ್ 24 : ವರುಣಾ ಕ್ಷೇತ್ರದಲ್ಲಿ ಸೋಮವಾರ ನಡೆದ ಬೆಳವಣಿಗೆ ಬಳಿಕ ಕಣ್ಮರೆಯಾಗಿದ್ದ ಬಿ.ವೈ.ವಿಜಯೇಂದ್ರ ಮಂಗಳವಾರ ರಾತ್ರಿ 7ರ ಸುಮಾರಿಗೆ ದಿಢೀರ್ ಎಂದು ಕಂಡುಬಂದರು. ಸುದ್ದಿಗೋಷ್ಠಿ ನಡೆಸಿ, ಈಚಿನ ಬೆಳವಣಿಗೆ ಕುರಿತಾಗಿ ಕ್ಷಮೆ ಯಾಚಿಸಿದರು.
"ನಾನು ಎಲ್ಲಿಯೂ ಅಭ್ಯರ್ಥಿ ಅಂತ ಹೇಳಿಕೊಂಡಿರಲಿಲ್ಲ. ಕಾರ್ಯಕರ್ತರು ಮಾತ್ರ ನನ್ನನ್ನು ಅಭ್ಯರ್ಥಿ ಎಂದು ಹೇಳಿದ್ದರು. ನನ್ನಿಂದ ತಪ್ಪು ನಡೆದಿಲ್ಲ" ಎಂದು ಸಮರ್ಥಿಸಿಕೊಂಡರು.
"ನನ್ನ ಸಲುವಾಗಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಆಗಿದೆ. ಮತದಾರರಿಗೆ ನೋವಾಗಿದೆ. ಅದಕ್ಕೆಲ್ಲ ಕ್ಷಮೆ ಯಾಚಿಸುತ್ತೇನೆ. ನಾನು ಮನೆ ಮಾಡಿರುವುದು ವರುಣಾ ಕ್ಷೇತ್ರದ ಮತದಾರರಿಗಾಗಿ. ಎಲ್ಲರೂ ಒಗ್ಗಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ಗುರಿ. ನನ್ನ ಮನಸ್ಸಿನಲ್ಲಿ ಯಾವುದೇ ದುಗುಡ ಇಲ್ಲ" ಎಂದರು.

"ನನಗೆ ಟಿಕೆಟ್ ತಪ್ಪುವುದಕ್ಕೆ ಯಾವ ನಾಯಕರೂ ಕಾರಣ ಅಲ್ಲ. ವರುಣಾಗೆ ಸೀಮಿತವಾಗಿದ್ದ ನನ್ನನ್ನು ಮೈಸೂರು, ಚಾಮರಾಜನಗರ ಜಿಲ್ಲೆಯಾದ್ಯಂತ ಓಡಾಡುವಂತೆ ಮಾಡಿದ್ದಾರೆ. ನನ್ನ ಸ್ಪೀಡ್ ಜಾಸ್ತಿ ಆಗುತ್ತದೆ ಹೊರತು ಕಡಿಮೆ ಆಗುವುದಿಲ್ಲ" ಎಂದರು.
"25 ದಿನಗಳ ಹಿಂದೆ ವರುಣಾ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿತ್ತು. ರಾಷ್ಟ್ರೀಯ ಅಧ್ಯಕ್ಷರ ಬಳಿ ಸಮರ್ಥ ಅಭ್ಯರ್ಥಿಗೆ ಮನವಿ ಮಾಡಿದ್ದರು. ನಾನು ಮಹದೇಶ್ವರ ಬೆಟ್ಟ, ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಲು ಕ್ಷೇತ್ರಕ್ಕೆ ಬಂದಿದ್ದೆ. ಪಕ್ಷದ ಹೈಕಮಾಂಡ್ ಈಗ ಬೇರೆ ಅಭ್ಯರ್ಥಿ ಹಾಕಿದೆ. ಅವರ ಗೆಲುವಿಗೆ ನಾನು ಬದ್ಧನಾಗಿದ್ದೇನೆ" ಎಂದು ಹೇಳಿದರು.
"ತೋಟದ ಬಸವರಾಜು ಜೊತೆ ಮುಂದಿನ ದಿನಗಳಲ್ಲಿ ಪ್ರಚಾರ ಮಾಡುತ್ತೇನೆ. ನಿಮ್ಮ ಬಳಿಯೇ ಬಂದು ಸುದ್ದಿಗೋಷ್ಠಿ ನಡೆಸುತ್ತೇನೆ. ನಾನು ವರುಣಾ ಕ್ಷೇತ್ರದ ಮತದಾರರ ಸಮಸ್ಯೆ ಅರಿತುಕೊಳ್ಳುವ ಪ್ರಯತ್ನ ಮಾಡಿದ್ದೆ. ಪ್ರಚಾರಕ್ಕೆ ಹೋದಾಗ ಮತದಾರರಲ್ಲಿ ಭಾರತೀಯ ಜನತಾ ಪಾರ್ಟಿ ಪರವಾಗಿ ಮತಯಾಚನೆ ಮಾಡಿದ್ದೆ. ವರುಣಾ ಕ್ಷೇತ್ರದ ಮತದಾರರು ಹಾಗೂ ಮಾಧ್ಯಮದವರಿಗೆ ನಾನು ಚಿರ ಋಣಿ" ಎಂದರು.
"ನಾನೇನೂ ಇಲ್ಲಿ ವರ್ಷಗಟ್ಟಲೆ ಪಕ್ಷ ಸಂಘಟನೆ ಮಾಡಿಲ್ಲ. ನಮ್ಮ ಪಕ್ಷದ ಎಲ್ಲ ಮುಖಂಡರು ವಿಜಯೇಂದ್ರ ಅಭ್ಯರ್ಥಿಯಾಗಬೇಕು ಎಂದು ಅಪೇಕ್ಷೆ ಪಟ್ಟಿದ್ದು ನಿಜ. ಕಾರ್ಯಕರ್ತರ ಒತ್ತಾಯದ ಮೇರೆಗೆ ನಾನು ಅಭ್ಯರ್ಥಿಯಾಗಲು ಮುಂದಾಗಿದ್ದೆ. ನನಗೆ ರಾಜಕೀಯ ಅನಿವಾರ್ಯ ಅಲ್ಲ. ಜನ ಸೇವೆಗೆ ಸಾಕಷ್ಟು ದಾರಿ ಇವೆ. ಇನ್ನು ಮುಂದೆ ಅದಕ್ಕಾಗಿ ಸಮಯ ಮೀಸಲಿಡುತ್ತೇನೆ" ಎಂದರು.












Click it and Unblock the Notifications