ಮತ್ತೆ ಸಂಪುಟ ಸೇರುವ ಇಂಗಿತ ವ್ಯಕ್ತಪಡಿಸಿದ ಎನ್.ಮಹೇಶ್
ಮೈಸೂರು, ಡಿಸೆಂಬರ್ 15: ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಕೆಲ ತಿಂಗಳುಗಳ ಹಿಂದೆ ಸಚಿವ ಸ್ಥಾನ ರಾಜೀನಾಮೆ ನೀಡಿದ್ದರು. ಆದರೆ ಈಗ ಮತ್ತೆ ಸಂಪುಟ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಿಎಸ್ಪಿ ಶಾಸಕ ಎನ್.ಮಹೇಶ್ ಅವರು, ಪಕ್ಷ ಸಂಘಟನೆಯ ಕಾರಣ ನೀಡಿ ಕೆಲವು ತಿಂಗಳ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಎಸ್ಪಿ ಮತ್ತು ಕಾಂಗ್ರೆಸ್ ನಡುವೆ ರಾಷ್ಟ್ರಮಟ್ಟದಲ್ಲಿ ಸಂಬಂಧ ಬಿಗಡಾಯಿಸಿದ್ದರಿಂದ ಎನ್.ಮಹೇಶ್ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು.
ಆದರೆ ಈಗ ಮತ್ತೆ ಸಂಪುಟ ಸೇರುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದು, ಬಿಎಸ್ಪಿ ರಾಷ್ಟ್ರೀಯ ನಾಯಕಿ ಮಾಯಾವತಿ ಅವರು ಹಸಿರು ನಿಶಾನೆ ತೋರಿದರೆ ಮತ್ತೆ ಸಂಪುಟ ಸೇರುತ್ತೇನೆ ಎಂದು ಅವರು ಹೇಳಿದ್ದಾರೆ.

ಬಿಎಸ್ಪಿ-ಕಾಂಗ್ರೆಸ್ ನಡುವೆ ಮೈತ್ರಿ
ಈಗ ಬಿಎಸ್ಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೆ ಮೈತ್ರಿ ಏರ್ಪಟ್ಟಿದ್ದು, ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ಬಿಎಸ್ಪಿಯು ಕಾಂಗ್ರೆಸ್ಗೆ ಬೆಂಬಲ ನೀಡಿದೆ. ಹಾಗಾಗಿ ಇಲ್ಲಿ ಮತ್ತೆ ಎನ್.ಮಹೇಶ್ ಅವರು ಕಾಂಗ್ರೆಸ್ ಭಾಗವಾಗಿರುವ ಮೈತ್ರಿ ಸರ್ಕಾರದಲ್ಲಿ ಸಚಿವರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

'ಜೆಡಿಎಸ್ ಮುಖಂಡರು ಬೇಡ ಎನ್ನುವುದಿಲ್ಲ'
ನಾನು ಮತ್ತೆ ಸಂಪುಟಕ್ಕೆ ಸೇರುತ್ತೇನೆ ಎಂದು ಬೇಡಿಕೆ ಇಟ್ಟದ್ದೇ ಆದರೆ ಜೆಡಿಎಸ್ ಮುಖಂಡರು ಬೇಡ ಎನ್ನುವುದಿಲ್ಲ, ಬದಲಿಗೆ ಸಂತೋಶವಾಗಿ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಎನ್.ಮಹೇಶ್ ಭರವಸೆ ವ್ಯಕ್ತಪಡಿಸಿದ್ದಾರೆ.

ಹಠಾತ್ ರಾಜೀನಾಮೆ ನೀಡಿದ್ದರು
ಎನ್.ಮಹೇಶ್ ಅವರು ಶಿಕ್ಷಣ ಸಚಿವರಾಗಿ ಕೆಲವು ತಿಂಗಳು ಕಾರ್ಯ ನಿರ್ವಹಿಸಿದ್ದರು. ಆದರೆ ಏಕಾ-ಏಕಿ ಉಪಚುನಾವಣೆಗೆ ಮುಂಚೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂದಿನಿಂದ ಯಾರನ್ನೂ ಶಿಕ್ಷಣ ಸಚಿವರನ್ನಾಗಿ ನೇಮಿಸಲಾಗಿಲ್ಲ, ಆ ಖಾತೆಯು ಈಗ ಸಿಎಂ ಕುಮಾರಸ್ವಾಮಿ ಅವರ ಬಳಿಯೇ ಇದೆ.

ಬಸವರಾಜ ಹೊರಟ್ಟಿಗೆ ಸ್ಥಾನ
ಎನ್.ಮಹೇಶ್ ಅವರು ಬಿಟ್ಟಿರುವ ಶಿಕ್ಷಣ ಸಚಿವ ಸ್ಥಾನವನ್ನು ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರಿಗೆ ಕೊಡಲಾಗುತ್ತದೆ ಎಂಬ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ. ಜೆಡಿಎಸ್ ಬಳಿ ಒಟ್ಟು ಎರಡು ಸಚಿವ ಸ್ಥಾನಗಳಿದ್ದು, ಎನ್.ಮಹೇಶ್ ಮತ್ತೆ ಸಂಪುಟ ಸೇರುತ್ತೇನೆ ಎಂದದ್ದೇ ಆದರೆ ಅವರಿಗೆ ಒಂದುಸ ಸ್ಥಾನ ನೀಡಲೇ ಬೇಕಾಗುವ ಒತ್ತಡದಲ್ಲಿ ಜೆಡಿಎಸ್ ಸಿಲುಕುತ್ತದೆ.











Click it and Unblock the Notifications