ಯಶೋಧರಪುರ ಬಳಿ ರಸ್ತೆ ಅಪಘಾತ: ಬಾಲಿವುಡ್ ಸ್ಟಂಟ್ ಮಾಸ್ಟರ್ ಸ್ಥಳದಲ್ಲೇ ಸಾವು
ಮೈಸೂರು, ಅಕ್ಟೋಬರ್. 17 : ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟರೊಬ್ಬರು ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಯಶೋಧರಪುರ ಗ್ರಾಮದ ಬಳಿ ಜರುಗಿದೆ.
ಹಿಂದಿ ಚಿತ್ರದ ಸ್ಟಂಟ್ ಮಾಸ್ಟರ್ ಮುನ್ನಾಭಾಯಿ (42) ಮೃತಪಟ್ಟವರು. ಇವರ ಇಬ್ಬರು ಸ್ನೇಹಿತರಾದ ಅರುಣ್ ಕುಮಾರ್ ಮತ್ತು ಚಾಲಕ ಉಮೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಉದ್ಘರ್ಷ ಎಂಬ ಕನ್ನಡ ಚಲನಚಿತ್ರದ ಚಿತ್ರೀಕರಣದ ನಿಮಿತ್ತ ಇವರು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಹುಣಸೂರು ತಾಲೂಕಿನ ಯಶೋಧರಪುರ ಗ್ರಾಮದ ಬಳಿಯಿರುವ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಮುನ್ನಾಭಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಮ್ಮದ್ ಅಸ್ಲಾಂ ಅವರ ಪುತ್ರರಾದ ಮುನ್ನಾಭಾಯಿ ಮುಂಬೈ ನಗರದ ನಿವಾಸಿಯಾಗಿದ್ದು, ಹಲವಾರು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಚಿತ್ರೀಕರಣಕ್ಕೆ ಒಪ್ಪಿಕೊಂಡಿದ್ದರು.
ಪಿತೃ ಪಕ್ಷಕ್ಕೆಂದು ಬಂದವರು ಅಪಘಾತದಲ್ಲಿ ಮೃತ
ಇತ್ತ ಇನ್ನೊಂದು ಅಪಘಾತದ ಪ್ರಕರಣದಲ್ಲಿ ದೊಡ್ಡ ಕೆರೆ ಕೋಡಿಗೆ ಕಾರು ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನಲ್ಲಿ ನಡೆದಿದೆ.
ಭೇರ್ಯ ಎಂಬಲ್ಲಿ ಈ ಘಟನೆ ನಡೆದಿದ್ದು, ದಶರಥ(27), ಶಿವಣ್ಣ ( 28) ಎಂಬುವವರು ಮೃತಪಟ್ಟ ದುರ್ದೈವಿಗಳು. ಮೃತರು ಪಿರಿಯಾಪಟ್ಟಣದ ದೇವೇಗೌಡನಕೊಪ್ಪಲು ಬಡಾವಣೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಮೃತರು ಪಿತೃ ಪಕ್ಷಕ್ಕಾಗಿ ಭೇರ್ಯ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.
ಕಾರಿನಲ್ಲಿ ಒಟ್ಟು 5 ಜನರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳದಿಂದ ಸ್ವಲ್ಪ ದೂರದ ಜಮೀನಿನಲ್ಲಿ ಶಿವಣ್ಣ ಶವ ಹಾಗೂ ಕಾರಿನಲ್ಲಿ ದಶರಥ ಅವರ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕೆ.ಆರ್ ನಗರ ಇನ್ಸ್ ಪೆಕ್ಟರ್ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications