ಚಾಮರಾಜನಗರದಲ್ಲಿ ಮಾ.26ರಂದು ನಾಮಪತ್ರ ಸಲ್ಲಿಸಲಿರುವ ಶ್ರೀನಿವಾಸ್ ಪ್ರಸಾದ್
ಮೈಸೂರು, ಮಾರ್ಚ್ 21:ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಹೇಳುತ್ತಲೇ ಬಂದು ಕೊನೆ ಕ್ಷಣದಲ್ಲಿ ಕಣಕ್ಕಿಳಿಯಲು ಶ್ರೀನಿವಾಸ್ ಪ್ರಸಾದ್ ಒಪ್ಪಿಕೊಂಡಿರುವುದು ಚಾಮರಾಜನಗರ ಕ್ಷೇತ್ರದ ಚುನಾವಣೆಯ ಚಿತ್ರಣವನ್ನೇ ಬದಲಿಸಿದೆ.
ಸದ್ಯ ಕಾರ್ಯಕರ್ತರ ಒತ್ತಾಯದ ಮೇರೆಗೆ ಚಾಮರಾಜನಗರ (ಮೀಸಲು) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾ.26ರಂದು ನಾಮಪತ್ರ ಸಲ್ಲಿಸಲು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ನಿರ್ಧರಿಸಿದ್ದಾರೆ.
ಮೈಸೂರಿನಲ್ಲಿ ಪಕ್ಷದ ಪ್ರಮುಖರೊಂದಿಗೆ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಂಡಿರುವ ಅವರು, ಮಾ.26ರಂದು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ.

ಮಾ.22ರಂದು ಬೆಳಿಗ್ಗೆ 11ಕ್ಕೆ ಚಾಮರಾಜನಗರ, ಮಧ್ಯಾಹ್ನ 3ಕ್ಕೆ ಕೊಳ್ಳೇಗಾಲ, ಮಾ.23ರಂದು ಬೆಳಿಗ್ಗೆ 11ಕ್ಕೆ ಹನೂರು, ಮಧ್ಯಾಹ್ನ 3ಕ್ಕೆ ತಿ.ನರಸೀಪುರ, 24ರಂದು ಬೆಳಿಗ್ಗೆ 11ಕ್ಕೆ ಹೆಚ್.ಡಿ.ಕೋಟೆ, ಮಧ್ಯಾಹ್ನ 3 ಗಂಟೆಗೆ ವರುಣಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಶ್ರೀನಿವಾಸಪ್ರಸಾದ್ ಪಾಲ್ಗೊಳ್ಳಲಿದ್ದಾರೆ.
ಇನ್ನು ಕಾಂಗ್ರೆಸ್ನ ಧ್ರುವನಾರಾಯಣ ಮತ್ತು ಶ್ರೀನಿವಾಸ ಪ್ರಸಾದ್ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಬೇಕಾದರೆ ಧ್ರುವನಾರಾಯಣ ಅವರು ಇನ್ನಷ್ಟು ಹೆಚ್ಚು ಶ್ರಮ ಹಾಕಲೇಬೇಕು ಎಂದು ಸಹ ಹೇಳಲಾಗುತ್ತಿದೆ.
ಒಟ್ಟಾರೆ ರಾಜಕೀಯ ವಲಯದಲ್ಲಿ ಗುರು-ಶಿಷ್ಯರು ಎಂದೇ ಗುರುತಿಸಿಕೊಂಡಿದ್ದ ಶ್ರೀನಿವಾಸ ಪ್ರಸಾದ್ ಮತ್ತು ಕಾಂಗ್ರೆಸ್ನ ಆರ್.ಧ್ರುವನಾರಾಯಣ ಅವರ ನಡುವಿನ ಆಖಾಡ ಸಿದ್ಧವಾದಂತಾಗಿದೆ.
ಬಿಜೆಪಿ ಸೇರ್ಪಡೆಗೊಂಡು ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋತ ನಂತರ ಚುನಾವಣಾ ರಾಜಕೀಯದಿಂದ ದೂರವಾಗಿದ್ದ ಶ್ರೀನಿವಾಸ ಪ್ರಸಾದ್, ಕಾರ್ಯಕರ್ತರ ಒತ್ತಡದ ಮೇರೆಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳುತ್ತಿರುವುದು ಸದ್ಯ ಧ್ರುವನಾರಾಯಣಗೆ ತಲೆನೋವು ತಂದಂತಾಗಿದೆ.












Click it and Unblock the Notifications