ಮೈಸೂರಿನಲ್ಲಿ ಟೀ ವಿತರಿಸಿ ಗಿಡ ನೆಟ್ಟು ಮೋದಿ ಹುಟ್ಟುಹಬ್ಬದಾಚರಣೆ
ಮೈಸೂರು, ಸೆಪ್ಟೆಂಬರ್ 17: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಅದರಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೋದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿದರು.
ಪರಿಸರ ಸ್ನೇಹಿ ತಂಡದ ವತಿಯಿಂದ ನಗರದ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಿ ಚಾಯ್ ವಾಲಾನ ನೆನಪಿನಲ್ಲಿ ಸಾರ್ವಜನಿಕರಿಗೆ ಟೀ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ಸಂದೇಶ್ ಸ್ವಾಮಿ, "ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷದವರು ಚಾಯ್ ವಾಲಾ ಎಂದು ಟೀಕಿಸುತ್ತಿದ್ದರು. ಆದರೆ ಸಾಮಾನ್ಯ ಪ್ರಜೆ ಟೀ ಮಾರುವವನು ಕೂಡ ದೇಶದ ಪ್ರಧಾನಮಂತ್ರಿ ಆಗಬಹುದೆಂದು ತೋರಿಸಿದವರು ನಮ್ಮ ನರೇಂದ್ರ ಮೋದಿ ಜೀ. ಇಡೀ ಪ್ರಪಂಚ ನರೇಂದ್ರ ಮೋದಿ ಅವರ ಕಡೆ ತಿರುಗಿ ನೋಡುವಂತಹ ಕೆಲಸವನ್ನು ಮಾಡಿದ್ದಾರೆ" ಎಂದರು.

ಬಿಜೆಪಿಯ ಯಶಸ್ವಿನಿ ಸೋಮಶೇಖರ್, ಪಣೇಶ್, ಪಾರ್ಥ ಸಾರಥಿ, ಪರಿಸರ ಸ್ನೇಹಿ ತಂಡದವರು ಭಾಗವಹಿಸಿದ್ದರು. ಇನ್ನೊಂದೆಡೆ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಜಲದರ್ಶಿನಿ ಅತಿಥಿ ಗೃಹದಲ್ಲಿ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ನರೇಂದ್ರ ಮೋದಿ ಹುಟ್ಟು ಹಬ್ಬ ಆಚರಿಸಲಾಯಿತು.
ಗಿಡನೆಡುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಚಾಲನೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧಕ್ಷ ಡಾ.ಮಂಜುನಾಥ್, ಮೋದಿ ಅಭಿಮಾನಿ ಬಳಗದ ಅಧ್ಯಕ್ಷರು, ಇನ್ನೂ ಇತರರು ಇದ್ದರು.












Click it and Unblock the Notifications