ಮೈಸೂರಿನಲ್ಲಿ ಹಕ್ಕಿಜ್ವರ; ಎಷ್ಟು ಹಕ್ಕಿ, ಕೋಳಿಗಳನ್ನು ಕೊಲ್ಲಲಾಗುತ್ತಿದೆ?
ಮೈಸೂರು, ಮಾರ್ಚ್ 18: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ವೈರಸ್ ಜತೆಗೆ ಹಕ್ಕಿ ಜ್ವರ ಭೀತಿ ಎದುರಾಗಿದೆ. ಹಕ್ಕಿ ಜ್ವರ ಇರುವುದು ನಿನ್ನೆ ಖಾತ್ರಿಯಾದ ಹಿನ್ನೆಲೆ, ಮೈಸೂರು ಜಿಲ್ಲಾಡಳಿತ ಪಕ್ಷಿ ಸರ್ವೇ ನಡೆಸಿ ಪಕ್ಷಿಗಳನ್ನು ಗುರುತಿಸಿದ್ದಾರೆ.
ಜಿಲ್ಲಾಡಳಿತದಿಂದ ಪಕ್ಷಿ ಸರ್ವೇ ಕಾರ್ಯ ಮುಕ್ತಾಯವಾಗಿದ್ದು, ಅಧಿಕಾರಿಗಳು ಒಟ್ಟು 6436 ಪಕ್ಷಿಗಳನ್ನು ಗುರುತಿಸಿದ್ದಾರೆ. ಮೇಟಗಳ್ಳಿ ನಿವಾಸಿ ರಾಮಣ್ಣ ಎಂಬುವವರ ಮನೆಯಲ್ಲಿ 10 ಕೋಳಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದವು. ಈ ಸಂಬಂಧ ಮೇಟಗಳ್ಳಿ ರಾಮಣ್ಣ ನಿವಾಸದ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ. ಸರ್ವೆ ನಂತರ ಸಾಮೂಹಿಕವಾಗಿ ಪಕ್ಷಿಗಳನ್ನು ಕೊಲ್ಲುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ.

ಸರ್ವೇಯಲ್ಲಿ ಕಂಡುಬಂದಿರುವ ಪಕ್ಷಿಗಳು
ಮೈಸೂರಿನಲ್ಲಿ ಹಕ್ಕಿಜ್ವರವಿರುವುದು ಖಾತ್ರಿಯಾಗುತ್ತಿದ್ದಂತೆ ತಕ್ಷಣವೇ ಪಕ್ಷಿಗಳ ಸರ್ವೇ ಕಾರ್ಯ ಮಾಡಿ ಮೂರ್ನಾಲ್ಕು ದಿನದೊಳಗೆ ಸಾಮೂಹಿಕವಾಗಿ ಸೋಂಕಿತ ಪಕ್ಷಿಗಳನ್ನು ಕೊಲ್ಲುವ ನಿರ್ಧಾರಕ್ಕೆ ನಿನ್ನೆ ಬರಲಾಗಿತ್ತು. ಹೀಗಾಗಿ ಮೈಸೂರು ಜಿಲ್ಲಾಡಳಿತ ಪಕ್ಷಿ ಸರ್ವೇ ನಡೆಸಿ ಪಕ್ಷಿಗಳನ್ನು ಗುರುತಿಸಿದೆ. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಈ ಸರ್ವೇ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ವಿವರ ಮುಂದಿದೆ...
ಸೂಕ್ಷ್ಮ ವಲಯದ ಮನೆಗಳು 17820
ಪಕ್ಷಿ ಇರುವ ಮನೆಗಳು 144
ನೈಸರ್ಗಿಕ ಪಕ್ಷಿಗಳು 1252
ವಾಣಿಜ್ಯಿಕ ಉದ್ದೇಶದ ಪಕ್ಷಿಗಳು 5100
ಸಾಕು ಪಕ್ಷಿಗಳು 254
ಕ್ವೈಲ್ಸ್ 12
ಟರ್ಕಿ 18
ಒಟ್ಟು 6,436 ಪಕ್ಷಿಗಳು

ಎಷ್ಟು ಪಕ್ಷಿಗಳನ್ನು ಕೊಲ್ಲಲಾಗುವುದು?
ಮೈಸೂರಿನ ಕುಂಬಾರಕೊಪ್ಪಲು ಮನೆಯೊಂದರಲ್ಲಿ ಸತ್ತಿದ್ದ ಕೋಳಿ, ಸ್ಮಶಾನದಲ್ಲಿ ಸಾವನ್ನಪ್ಪಿದ್ದ ಪಕ್ಷಿಯ ಮೃತದೇಹದ ಮಾದರಿಗಳನ್ನು ಭೂಪಾಲ್ನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಹೈಸೆಕ್ಯೂರಿಟಿ ಅನಿಮಲ್ ಡೀಸಿಸ್ ಗೆ ಕಳುಹಿಸಲಾಗಿತ್ತು. ಮೈಸೂರಿನಿಂದ ಕಳುಹಿಸಿದ್ದ ಏಳು ಮಾದರಿಗಳಲ್ಲಿ ಎರಡು ಮಾದರಿಗಳು ಪಾಸಿಟಿವ್ ಬಂದಿದ್ದವು. ಹೀಗಾಗಿ ನಗರಪಾಲಿಕೆ, ಪಶುಪಾಲನಾ ಇಲಾಖೆ ಅಧಿಕಾರಿಗಳ ಸಭೆ ನಡೆದಿದ್ದು, ಹಕ್ಕಿಜ್ವರ ಹರಡದಂತೆ ಮುಂಜಾಗ್ರತಾ ಕ್ರಮ ಆರಂಭಿಸಲಾಗಿದೆ. ಸರ್ವೇಯಲ್ಲಿ ಗುರುತಿಸಿದ ಅಷ್ಟೂ ಪಕ್ಷಿಗಳನ್ನೂ ನಾಶಪಡಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಒಟ್ಟು 6,436 ಪಕ್ಷಿಗಳನ್ನು ಸಾಮೂಹಿಕವಾಗಿ ಕೊಲ್ಲಲಾಗುತ್ತದೆ.

ರಾಪಿಡ್ ರೆಸ್ಕೋ ಟೀಂನಿಂದ ಕಾರ್ಯಾಚರಣೆ
ಸರ್ವೇ ಕಾರ್ಯ ನಿನ್ನೆಯಷ್ಟೇ ಮುಗಿದಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ರಾಪಿಡ್ ರೆಸ್ಕೋ ಟೀಂ ಎಂಬ ವಿಶೇಷ ತಂಡ ಈ ಪಕ್ಷಿ, ಕೋಳಿಗಳನ್ನು ಸಾಮೂಹಿಕವಾಗಿ ಕೊಲ್ಲುವ ಕೆಲಸ ಮಾಡುತ್ತದೆ. ಈ ಎಲ್ಲಾ ಕೆಲಸಗಳ ಹೊಣೆಯನ್ನು ರಾಪಿಡ್ ರೆಸ್ಕೋ ಟೀಂ (ಆರ್ಆರ್ಟಿ) ವಹಿಸಿಕೊಳ್ಳಲಿದೆ. ಕಾರ್ಯಾಚರಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಈ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಸಿಬ್ಬಂದಿ ವಾರದ ಕಾಲ ಪ್ರತ್ಯೇಕವಾಗಿ ಇರುತ್ತಾರೆ. ಇವರಿಗೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ನೀಡಲಿದೆ.

ಕೋಳಿ ಮಾರಾಟದ ಮೇಲೆ ಎಫೆಕ್ಟ್?
ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಕೋಳಿಗಳನ್ನು ಮಾರಾಟ ಮಾಡದಂತೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಹಕ್ಕಿಜ್ವರದಿಂದ ಮನುಷ್ಯನಿಗೆ ಯಾವುದೇ ತೊಂದರೆ ಇಲ್ಲ. ಇದು ಹರಡುವುದಿಲ್ಲವೆಂದು ವರದಿಯಲ್ಲಿ ಬಂದಿದೆ. ಆದರೆ, ಪಕ್ಷಿಯಿಂದ ಪಕ್ಷಿಗೆ ಹರಡುವುದನ್ನು ತಪ್ಪಿಸಲು ಸಾಕು ಪಕ್ಷಿಗಳನ್ನು ಕೊಲ್ಲುವವರಿಗೆ, ಕೋಳಿ ಮಾಂಸ ಮಾರಾಟ ಬಂದ್ ಮಾಡಲು ಸೂಚಿಸಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆ, ನಗರಪಾಲಿಕೆ ಅಧಿಕಾರಿಗಳು ಈ ವ್ಯಾಪ್ತಿಯ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಕೋಳಿ ಮಾಂಸ ಸೇವನೆ ಮಾಡಿದರೆ ಹಕ್ಕಿಜ್ವರ ಬರುವುದಿಲ್ಲ. ಆದರೆ ಪಕ್ಷಿಯಿಂದ ಪಕ್ಷಿಗೆ ಹರಡುವುದನ್ನು ತಡೆಯಲು ಕ್ರಮಕೈಗೊಳ್ಳಲಾಗಿದೆಯೇ ಹೊರತು ಇದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹೀಗಿದ್ದರೂ ಸಹಜವಾಗಿಯೇ ಕೋಳಿ ಮಾರಾಟದ ಮೇಲೆ ಪರಿಣಾಮ ಬೀರಲಿದೆ.












Click it and Unblock the Notifications