ನಂಜನಗೂಡಲ್ಲಿ ಬೆಟ್ಟಿಂಗ್ ಜೋರು, ನಾವು ಗೆಲ್ಬೇಕು ಅಂತಾರೆ ಜನರು!
ಏಪ್ರಿಲ್ 13ಕ್ಕೆ ನಂಜನಗೂಡು ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ವರೆಗೆ ಕಂಡರಿಯದಂಥ ಚುನಾವಣೆಯ ಮೇಲೆ ಇಲ್ಲಿನ ಜನರು ಭಾರೀ ಬೆಟ್ಟಿಂಗ್ ಕಟ್ಟಿದ್ದಾರೆ. ಆ ಕಾರಣಕ್ಕೆ ತಮ್ಮ ಗೆಲುವೇ ಮುಖ್ಯ ಎಂಬ ಮಾತಾಡುತ್ತಿದ್ದಾರೆ
ಮೈಸೂರು, ಏಪ್ರಿಲ್ 11: ಏಪ್ರಿಲ್ 9ರಂದು ನಂಜನಗೂಡು ಉಪಚುನಾವಣೆ ನಡೆದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿ ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿದೆ. ಆದರೆ ಈಗ ಅದರ ಸುತ್ತಲೂ ಚರ್ಚೆಗಳು, ಬಾಜಿಗಳು, ಸಮೀಕ್ಷೆಗಳು ನಡೆಯುತ್ತಿವೆ.
ಫಲಿತಾಂಶ ಹೊರಬೀಳಲು ಇನ್ನೊಂದು ದಿನವಷ್ಟೆ (ಏ.13) ಬಾಕಿಯಿದೆ. ಆದರೆ ರಸ್ತೆ ಬದಿಯ ಟೀ ಅಂಗಡಿಯಿಂದ ಹಿಡಿದು ವಿಧಾನಸೌಧದ ಮೊಗಸಾಲೆಯ ತನಕವೂ ಉಪಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆಯೇ ಮಾತುಕತೆಗಳು ನಡೆಯುತ್ತಿವೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ: ಗುಪ್ತಚರ ವರದಿ]
ಇದುವರೆಗಿನ ಎಲ್ಲ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಇಲ್ಲಿ ಗೆಲುವು ಯಾರದೆಂದು ಹೇಳುವುದು ಅಷ್ಟೊಂದು ಸುಲಭವಲ್ಲ. ಇಬ್ಬರು ಅಭ್ಯರ್ಥಿಗಳ ನಡುವೆ ಅದಕ್ಕಿಂತ ಹೆಚ್ಚಾಗಿ ಎರಡು ಪಕ್ಷಗಳ ನಡುವೆ ತೀವ್ರ ಪೈಪೋಟಿ ಇರುವುದು ಎದ್ದು ಕಾಣುತ್ತಿದೆ. ಒಂದು ವೇಳೆ ಗೆಲ್ಲುವ ಅಭ್ಯರ್ಥಿ ಹೆಚ್ಚಿನ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಕೂಡ ಕಡಿಮೆಯೇ.
ಇಲ್ಲಿ ಹಿರಿಯ ನಾಯಕ ಶ್ರೀನಿವಾಸಪ್ರಸಾದ್ ಅವರಿಗೆ ಅಗ್ನಿ ಪರೀಕ್ಷೆ. ಹಾಗೆಯೇ ಇದುವರೆಗೆ ರಾಜಕೀಯದಲ್ಲಿದ್ದರೂ ತೆರೆಮರೆಯಲ್ಲೇ ಉಳಿದು ಹೋಗಿದ್ದ ಕಳಲೆ ಕೇಶವಮೂರ್ತಿಯವರಿಗೆ ಬ್ರೇಕ್ ಸಿಗುವ ಕಾಲವೂ ಹೌದು. ಅದಕ್ಕಿಂತ ಹೆಚ್ಚಾಗಿ ಹಾಲಿ ಮತ್ತು ಮಾಜಿ ಸಿಎಂಗಳ ಜಿದ್ದಾಜಿದ್ದಿ, ಪ್ರತಿಷ್ಠೆ... ಹೀಗಾಗಿ ಯಾವುದೇ ಕೋನಗಳಿಂದ ನೋಡಿದರೂ ಎಲ್ಲರಿಗೂ ಗೆಲುವು ಬಹುಮುಖ್ಯವಾಗಿ ಗೋಚರಿಸುತ್ತದೆ.[ನಂಜನಗೂಡು ಉಪಚುನಾವಣೆ: ದಾಖಲೆಯ ಶೇ.77 ಮತದಾನ]
ಎಂದೂ ಕಾಣದಷ್ಟು ಹಣ-ಭರವಸೆ
ಇದನ್ನೆಲ್ಲ ಬದಿಗಿಟ್ಟು ನೋಡಿದರೆ ನಂಜನಗೂಡು ಜನಕ್ಕೆ ಈ ಚುನಾವಣೆ ವಿಚಿತ್ರ, ವಿಶಿಷ್ಟವಾಗಿ ಕಂಡುಬಂದಿದೆ. ಇದುವರೆಗೆ ತಾವು ನೋಡದ ನಾಯಕರು, ಪಡೆಯದ ಹಣ ಮತ್ತು ಭರವಸೆಗಳು ಸಿಕ್ಕಿವೆ. ಹೀಗಾಗಿ ಯಾರು ಗೆದ್ದರೇನು ತಮಗೆ ಒಂದಷ್ಟು ಸಹಾಯವಾಯಿತಲ್ಲ ಎಂದು ಹೇಳುವವರೂ ಇದ್ದಾರೆ.
ಹಣ-ಆಸ್ತಿ ಪಣಕ್ಕೆ
ಇನ್ನು ಕಾರ್ಯಕರ್ತರಲ್ಲಿ ಎಲ್ಲಿಲ್ಲದ ಕುತೂಹಲ, ಭಯ ಎದುರಾಗಿದೆ. ಜತೆಜತೆಯಲ್ಲಿಯೇ ಗ್ರಾಮಗಳಲ್ಲಿ ದೊಡ್ಡಮಟ್ಟದಲ್ಲಿ ಬಾಜಿ ನಡೆಯುತ್ತಿವೆ. ಹಣ, ಆಸ್ತಿಗಳನ್ನು ಪಣಕ್ಕಿಟ್ಟು ಬಾಜಿ ಕಟ್ಟುತ್ತಿರುವ ಮಾತುಗಳು ಕೇಳಿ ಬರುತ್ತಿರುವುದು ಮಾತ್ರ ಆತಂಕಕಾರಿಯಾಗಿದೆ.
ಅನುಕಂಪದ ವರದಾನ
ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕಳಲೆ ಕೇಶವಮೂರ್ತಿ ಸ್ಪರ್ಧಿಸಿದ್ದು, ಅವರು ಕಳೆದ 2 ಬಾರಿ ಸೋತಿದ್ದರಿಂದ ಅನುಕಂಪ ಹಾಗೂ ಸರಳತೆ, ಸಜ್ಜನಿಕೆ ಗೆಲುವಿಗೆ ವರದಾನವಾಗಲಿದೆ.
ಕಾಂಗ್ರೆಸ್ಸಿಗರ ನಂಬಿಕೆ
ಜತೆಗೆ ಸಿಎಂ ಸೇರಿದಂತೆ ಘಟಾನುಘಟಿಗಳು ಬಂದು ಪ್ರಚಾರ ಮಾಡಿದ್ದರಿಂದ ಜನ ಅವರ ಮಾತು ಕೇಳಿ ಮತ ಚಲಾಯಿಸುತ್ತಾರೆ ಹೀಗಾಗಿ ಕಾಂಗ್ರೆಸ್ ನ ಕಳಲೆ ಕೇಶವಮೂರ್ತಿಗೆ ಗೆದ್ದೇ ಗೆಲ್ಲುತ್ತಾರೆ ಎಂಬ ನಂಬಿಕೆ ಕೈ ಕಾರ್ಯಕರ್ತರದ್ದಾಗಿದೆ.
ಕಪ್ಪು ಚುಕ್ಕೆಯಿಲ್ಲದ ರಾಜಕೀಯ ಹಿರಿತನ
ಇನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ವಿ.ಶ್ರೀನಿವಾಸಪ್ರಸಾದ್ 5 ಬಾರಿ ಸಂಸದ ಹಾಗೂ ಕೇಂದ್ರ ಸಚಿವರಾಗಿ, ರಾಜ್ಯ ರಾಜಕಾರಣಕ್ಕೆ ಹಿಂತಿರುಗಿ 2 ಅವಧಿಗೆ ನಂಜನಗೂಡಿನಿಂದ ಆಯ್ಕೆಯಾಗಿರುವುದರಿಂದ ಕಪ್ಪು ಚುಕ್ಕೆಯಿಲ್ಲದ ಅವರ ರಾಜಕೀಯ ಹಿರಿತನಕ್ಕೆ ಬೆಲೆ ಕೊಟ್ಟು ಅವರ ಸ್ವಾಭಿಮಾನಕ್ಕೆ ಜನ ಮತ ಹಾಕಿರುತ್ತಾರೆ. ಹೀಗಾಗಿ ಅವರೇ ಗೆಲ್ಲುತ್ತಾರೆ ಎನ್ನುವುದು ಕಮಲ ಪಾಳಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.
ಬೆಟ್ಟಿಂಗ್ ಬಲೇ ಜೋರು
ಇಲ್ಲಿ ಚುನಾವಣಾ ಆಯೋಗ ಕಾನೂನು ಬಿಗಿಗೊಳಿಸಿದ್ದರೂ ಎಲ್ಲರ ಕಣ್ಣಿಗೆ ಮಣ್ಣೆರಚಿ ಬೆಟ್ಟಿಂಗ್ ನಡೆಯುತ್ತಿರುವುದು ಮಾತ್ರ ದುರಂತ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಯಾರು ಗೆಲ್ಲುತ್ತಾರೋ ಬಿಡುತ್ತಾರೋ? ಆದರೆ ಬೆಟ್ಟಿಂಗ್ ಕಟ್ಟಿರುವವರಿಗೆ ಈಗ ತಮ್ಮ ಗೆಲುವಿನ ಚಿಂತೆ ಶುರುವಾಗಿದೆ. ಇವರಿಗೆ ಆ ನಂಜುಂಡೇಶ್ವರನೇ ಒಳ್ಳೆ ಬುದ್ಧಿ ಕೊಡಬೇಕಷ್ಟೆ.