ಈ ಬಾರಿಯ ದಸರೆಗೆ ಬೆಂಗಳೂರು-ಮೈಸೂರು ದಶಪಥ ರಸ್ತೆ ಸಿದ್ಧ: ಪ್ರತಾಪ್ ಸಿಂಹ
ಮೈಸೂರು, ಏಪ್ರಿಲ್ 21: "ಈ ಬಾರಿಯ ದಸರಾ ಹಬ್ಬದ ವೇಳೆಗೆ ಬೆಂಗಳೂರು- ಮೈಸೂರು ದಶಪಥ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ," ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರು ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ, "ಎರಡು ಮಾರ್ಗಗಳಲ್ಲಿ ಒಟ್ಟು ನಾಲ್ಕು ಕಡೆ ವಿಶ್ರಾಂತಿ ಏರಿಯಾಗಳನ್ನು ನಿರ್ಮಿಸಲಾಗುತ್ತದೆ. 16 ಕಡೆ ಪ್ರವೇಶ ಮತ್ತು ನಿರ್ಗಮನ ರಸ್ತೆ, 96 ಕಡೆ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ," ಎಂದು ವಿವರಿಸಿದರು.
"ಬೆಂಗಳೂರು- ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಒಟ್ಟಾರೆಯಾಗಿ 9,551 ಕೋಟಿ ರೂ. ವ್ಯಯಿಸವಾಗಲಿದೆ. ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತದೆ. ಜೂನ್ ಅಂತ್ಯದ ವೇಳೆಗೆ ಬೆಂಗಳೂರು-ನಿಡಘಟ್ಟ ಹೆದ್ದಾರಿ ಸಂಚಾರ ಮುಕ್ತವಾಗಲಿದೆ. ದಸರಾ ವೇಳೆಗೆ ಸಂಪೂರ್ಣವಾಗಿ ಬೆಂಗಳೂರು- ಮೈಸೂರು ಹೆದ್ದಾರಿ ಓಪನ್ ಮಾಡಲಾಗುತ್ತದೆ," ಎಂದು ಮಾಹಿತಿ ನೀಡಿದರು.

ಗ್ಯಾಸ್ ಪೈಪ್ ಲೈನ್ ಅಳವಡಿಕೆ
ಗ್ಯಾಸ್ಪೈಪ್ ಲೈನ್ ಬಗ್ಗೆ ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಎಸ್.ಎ, ರಾಮದಾಸ್ ಸೇರಿದಂತೆ ಎಲ್ಲರಿಗೂ ಮನವರಿಕೆ ಮಾಡಿಕೊಡಲಾಗಿದೆ. ರಿಂಗ್ ರಸ್ತೆಯಲ್ಲಿ ಸುಮಾರು 27 ಕಿ.ಮೀ ವ್ಯಾಪ್ತಿಯಲ್ಲಿ ಇದನ್ನು ಅಳವಡಿಸಲಾಗುವುದು. ಕಾಮಗಾರಿಯನ್ನು ಸಿಂಗಪುರದ ಎಜಿ ಅಂಡ್ ಪಿ ಕಂಪನಿಗೆ ವಹಿಸಲಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಗ್ಯಾಸ್ ಪೈಪ್ಲೈನ್ ಚಾಮರಾಜ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಕೆಯಾಗಲಿದೆ ಎಂದರು.

ಗ್ರೇಟರ್ ಮೈಸೂರು ಯೋಜನೆಯ ಅಗತ್ಯ
ಮೆಟ್ರೋ ಸೇರಿದಂತೆ ದೊಡ್ಡ ಯೋಜನೆಗಳು ಬರಬೇಕಾದರೆ ಗ್ರೇಟರ್ ಮೈಸೂರು ಯೋಜನೆಯ ಅಗತ್ಯವಿದೆ. ಕಳೆದ 2020ರಲ್ಲಿ ಈ ಬಗ್ಗೆ ಪ್ರಕ್ರಿಯೆಗಳನ್ನು ಆರಂಭಿಸಲಾಯಿತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಇದು ನನೆಗುದಿಗೆ ಬಿದ್ದಿತ್ತು. ಹೀಗಾಗಿ ನಾವು ಮುಂದಿನ 100- 200 ವರ್ಷ ಯೋಚನೆ ಮಾಡಿದ್ದೇವೆ. ಬೆಂಗಳೂರಿನ ರೀತಿ ಮೈಸೂರು ಆಗಬಾರದು, ಮೈಸೂರಿಗೂ ಮೆಟ್ರೋ ಬೇಕು ಎಂದರು.
ದೇವರಾಜ ಮಾರುಕಟ್ಟೆ ಶಿಥಿಲಾವಸ್ಥೆ ತಲುಪಿದೆ. ಮಾರುಕಟ್ಟೆ ಉಳಿಸುವಂತೆ ಮೈಸೂರು ರಾಜವಂಶಸ್ಥರಿಂದ ಅಭಿಯಾನ ಆರಂಭವಾಗಿದೆ. ಈ ವಿಚಾರದಲ್ಲಿ ಅಭಿಪ್ರಾಯವನ್ನು ಪಡೆದುಕೊಳ್ಳುತ್ತೇವೆ. ನಾವು ಮೈಸೂರು ಮಹಾರಾಜ ಋಣದಲ್ಲಿ ಇದ್ದೇವೆ. ಮೈಸೂರು ರಾಜಮನೆತನ ಶ್ರೀರಕ್ಷೆ ನಮಗೆ ಬೇಕು ಎಂದು ಹೇಳಿದರು.
ಮುಸ್ಲಿಮರ ಮೆರವಣಿಗೆ ಮೇಲೆ ಹಿಂದೂಗಳು ಎಂದು ಕೂಡ ಕಲ್ಲು ತೂರಾಟ ನಡೆಸಿಲ್ಲ. ಆದರೆ ಹಿಂದೂಗಳ ಮೆರವಣಿಗೆ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ ನಡೆಸಲಾಗಿದೆ. ಈ ವಿಚಾರದಲ್ಲಿ ಮುಸ್ಲಿಮರ ಮನಸ್ಥಿತಿ ಬದಲಾಗಬೇಕು. ಕಲ್ಲು ಹೊಡೆಯುವುದು ಮುಸ್ಲಿಮರ ಸಂಸ್ಕೃತಿಯಾಗಿದೆ. ಕ್ರಿಶ್ಚಿಯನ್, ಪಾರ್ಸಿಗಳು ಸೇರಿದಂತೆ ಯಾವುದೇ ಧರ್ಮೀಯರು ಕಲ್ಲು ತೂರುವುದಿಲ್ಲ. ಮುಸ್ಲಿಮರು ಮಾತ್ರ ಅನ್ಯ ಧರ್ಮೀಯರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮೈಸೂರು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಸ್ಥಳೀಯ ಮುಖಂಡರಾದ ವಾಣೀಶ್, ಗಿರಿರ್, ಸೋಮಸುಂದರ್ ಇದ್ದರು.












Click it and Unblock the Notifications