ಮೈಸೂರಿನಲ್ಲೇ ಠಿಕಾಣಿ ಹೂಡಿದ್ದಾರೆ ಬಿ.ವೈ ವಿಜಯೇಂದ್ರ!
ಮೈಸೂರು, ಏಪ್ರಿಲ್ 9 : ವರುಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಮುಖಂಡರೊಡನೆ ಸಮಾಲೋಚನೆ ನಡೆಸಿದರು. ಚುನಾವಣೆಯಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬುದು ಮುಖ್ಯವಲ್ಲ. ವರುಣದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ಮುಖ್ಯವಾಗಬೇಕು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಅಲ್ಲದೆ, ವಿಜಯೇಂದ್ರ ಅವರು ವರುಣ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಕೆ.ಎನ್.ಪುಟ್ಟಬುದ್ಧಿ, ಕಾಪು ಸಿದ್ದಲಿಂಗಸ್ವಾಮಿ, ಸದಾನಂದ ಗುರುಸ್ವಾಮಿ, ಕಾ.ಪು.ಸಿದ್ದವೀರಪ್ಪ, ಎಸ್.ಡಿ.ಮಹೇಂದ್ರ, ಎಸ್.ಸಿ.ಅಶೋಕ್ ಮೊದಲಾದವರೊಡನೆ ಕೂಡ ಸಮಾಲೋಚನೆ ನಡೆಸಿದರು.

ಬಳಿಕ ವರುಣ ಕ್ಷೇತದ ಬಿಜೆಪಿ ಶಕ್ತಿ, ಸಾಮರ್ಥ್ಯ ಕುರಿತು ಚರ್ಚಿಸಲಾಯಿತು. ಪಕ್ಷ ದುರ್ಬಲವಾಗಿರುವ ಕಡೆ ಕಾರ್ಯಕರ್ತರು, ಮುಖಂಡರು ಹೆಚ್ಚು ಗಮನಹರಿಸುವಂತೆ ವಿಜಯೇಂದ್ರ ಸೂಚಿಸಿದರು.
ರೇವಣಸಿದ್ದಯ್ಯ ಭೇಟಿ ಮಾಡಿದ ವಿಜಯೇಂದ್ರ
ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಎಲ್. ರೇವಣಸಿದ್ದಯ್ಯ ಅವರನ್ನು ನಂಜನಗೂಡು ರಸ್ತೆಯಲ್ಲಿರುವ ಶ್ರೀಕಂಠೇಶ್ವರ ಫಾರಂನಲ್ಲಿರುವ ಅವರ ಸ್ವಗೃಹದಲ್ಲಿ ಭೇಟಿಯಾಗಿ ಪಕ್ಷಕ್ಕೆಬೆಂಬಲ ನೀಡುವಂತೆ ಕೋರಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸಲು ನನಗಿನ್ನೂ ವರಿಷ್ಠರು ಅನುಮತಿ ನೀಡಿಲ್ಲ ಎಂದರು.
ಬಿಜೆಪಿಯತ್ತ ರೇವಣ ಸಿದ್ದಯ್ಯ ಚಿತ್ತ:
ವಿಜಯೇಂದ್ರ ಅವರು ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಎಲ್.ರೇವಣಸಿದ್ದಯ್ಯ ಅವರನ್ನು ಭೇಟಿ ಮಾಡಿದ ನಂತರ ರಾಜಕೀಯ ಗರಿಗೆದರಿದೆ. ರೇವಣಸಿದ್ದಯ್ಯ ಅವರು, ಕಾಂಗ್ರೆಸ್ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿರು ವುದು ಹಾಗೂ ಅವರ ಮಾತುಗಳು ಅವರು ಬಿಜೆಪಿಯತ್ತ ಹೊರಳುವುದು ಖಚಿತ ಪಡಿಸುತ್ತವೆ ಎಂದು ಹೇಳಲಾಗಿದೆ.
ನಾನು ಸಕ್ರಿಯ ರಾಜಕಾರಣದಲ್ಲಿದ್ದೇನೆ. ಆದರೆ ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿಲ್ಲ. ಕಳೆದ 5 ವರ್ಷದಲ್ಲಿ ಪಕ್ಷ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ರೇವಣಸಿದ್ದಯ್ಯ ಅಸಮಾಧಾನ ವ್ಯಕ್ತ ಪಡಿಸಿದರು.
ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರು ಭೇಟಿ ಮಾಡಿದ ನಂತರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರು ದೂರವಾಣಿ ಕರೆ ಮಾಡಿದ್ದರು. ಮನೆಗೆ ಉಪಾಹಾರಕ್ಕೆ ಬನ್ನಿ ಎಂದಿದ್ದೆ. ಇದು ಔಪಚಾರಿಕ ಭೇಟಿ ಅಷ್ಟೇ ಎಂದು ಹೇಳಿದರಲ್ಲದೆ, ನನ್ನ ಮತ್ತು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ನಡುವೆ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಸೇರಿ ಮುಖ್ಯಮಂತಿ ಸಿದ್ದರಾಮಯ್ಯ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಆದರೆ ನನಗೆ 5 ವರ್ಷದಲ್ಲಿ ಗೌರವ, ಸೂಕ್ತ ಸ್ಥಾನಮಾನ ನೀಡಿಲ್ಲ. ಹೀಗಾಗಿ ನಾನು ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ ಚಿಂತನೆಮಾಡಬೇಕಿದೆ ಎಂದರು.












Click it and Unblock the Notifications