ಎಟಿಎಂ ಚಮತ್ಕಾರ: 4 ಸಾವಿರ ಡ್ರಾ ಮಾಡಿದವರಿಗೆ ಸಿಕ್ಕಿದ್ದು 80 ಸಾವಿರ
ಎಟಿಎಂಗೆ ಹಣ ತುಂಬುವವರು ಎಡವಟ್ಟು ಮಾಡಿದರೆ ಎಂಥ ಅನಾಹುತವಾಗುತ್ತದೆ ಅನ್ನೋದಕ್ಕೆ ಮೈಸೂರಿನ ಕೆನರಾ ಬ್ಯಾಂಕ್ ಉದಾಹರಣೆ ಸಿಕ್ಕಿದೆ. ನಾಲ್ಕು ಸಾವಿರ ಡ್ರಾ ಮಾಡಿದವರಿಗೆಲ್ಲ ಎಂಬತ್ತು ಸಾವಿರ ರುಪಾಯಿ ಸಿಕ್ಕಿದೆ.
ಮೈಸೂರು, ಜನವರಿ 7 : ಹೊಸವರುಷದ ದಿನದಿಂದ ಕೇಂದ್ರ ಸರಕಾರ ಎಟಿಂಗಳಲ್ಲಿ 4,500 ಹಣ ಡ್ರಾ ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ಬೆನ್ನಲ್ಲೇ ಶುಕ್ರವಾರ ಎಟಿಎಂನಲ್ಲಿ ನಾಲ್ಕು ಸಾವಿರ ಹಣ ಡ್ರಾ ಮಾಡಲು ಹೋದ ವ್ಯಕ್ತಿಗೆ ಬರೋಬ್ಬರಿ 80 ಸಾವಿರ ಸಿಕ್ಕಿದೆ.
ಹೌದು, ಮೈಸೂರಿನ ಕುಂಬಾರಕೊಪ್ಪಲಿನ ಕೊನೆಯ ಬಸ್ ನಿಲ್ದಾಣ ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂ ಕೌಂಟರ್ನಲ್ಲಿ ಸುಂದರೇಶ್ ಎಂಬುವರು ತಮ್ಮ ಎಟಿಎಂ ಕಾರ್ಡ್ ಬಳಸಿ 4000 ರುಪಾಯಿ ಡ್ರಾ ಮಾಡಲು ಮುಂದಾಗಿದ್ದಾರೆ. ಈ ವೇಳೆ ಎಟಿಎಂ ಮಷಿನ್ನಿಂದ 4000 ಬದಲಾಗಿ 2 ಸಾವಿರ ಮುಖಬೆಲೆಯ ಬರೋಬ್ಬರಿ 80 ಸಾವಿರ ರುಪಾಯಿ ಹೊರ ಬಂದಿದೆ.[ಜ.1ರಿಂದ ಎಟಿಎಂನಲ್ಲಿ ದಿನಕ್ಕೆ 4,500 ರು. ಸಿಗುತ್ತೆ!]

ಇದರಿಂದ ಆಶ್ಚರ್ಯಕ್ಕೆ ಒಳಗಾದ ಅವರು, ತನ್ನ ಐದು ಜನ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದಾರೆ. ಆಗ ಅವರು ಕೂಡ ಅಲ್ಲಿಗೆ ಬಂದು ಹಣ ಡ್ರಾ ಮಾಡಿದಾಗ ಅವರಿಗೂ ಅದೇ ರೀತಿಯಾಗಿದೆ. ಒಟ್ಟಾರೆ ಹಣ ಡ್ರಾ ಮಾಡಿದವರಿಗೆ 4 ಲಕ್ಷ ರುಪಾಯಿ ಎಟಿಎಂನಿಂದ ಬಂದಿದೆ. ಸುಂದರೇಶ್ ಗಾಬರಿಯಾಗಿ ಕೂಡಲೇ ಬ್ಯಾಂಕ್ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಆ ನಂತರ ಅಧಿಕಾರಿಗಳು ಎಟಿಎಂ ಕೌಂಟರ್ ಬಂದ್ ಮಾಡಿ, ಹಣ ಡ್ರಾ ಮಾಡಿದ ಗ್ರಾಹಕರಿಗೆ ಕರೆ ಮಾಡಿ ಹಣ ವಾಪಸ್ ಪಡೆದುಕೊಂಡಿದ್ದಾರೆ. ಇಂಥ ಚಮತ್ಕಾರಕ್ಕೆ ಏನು ಕಾರಣ ಅಂದರೆ, ಕೆನರಾ ಬ್ಯಾಂಕ್ ಎಟಿಎಂ ಕೌಂಟರ್ಗಳಿಗೆ ಹಣ ತುಂಬಲು ಹೊರಗುತ್ತಿಗೆ ಪಡೆದಿದ್ದ ಸೆಕ್ಯೂರ್ ವ್ಯಾಲ್ಯೂ ಸಂಸ್ಥೆಯು ನೂರು ರೂಪಾಯಿ ನೋಟುಗಳನ್ನ ತುಂಬುವ ಜಾಗಕ್ಕೆ 2 ಸಾವಿರ ಹೊಸ ಕರೆನ್ಸಿ ನೋಟುಗಳನ್ನ ತುಂಬಿದ್ದಾರೆ.[ನೋಟು ನಿಷೇಧ 50 ದಿನ, ಸಮಸ್ಯೆ ಸರಿಹೋಗಿಲ್ಲ, ಸ್ಥಿತಿ ಸಹಜವಾಗಿಲ್ಲ]
ಆ ಕಾರಣಕ್ಕೆ ಈ ಅವಾಂತರ ಆಗಿದೆ ಎಂದು ಎಟಿಎಂ ಪರಿಶೀಲನೆ ಮಾಡಿದ ಬಳಿಕ ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಾಗಿದೆ. ಕೂಡಲೇ ಬ್ಯಾಂಕ್ ಅಧಿಕಾರಿಗಳು ಎಟಿಎಂ ಕಾರ್ಡ್ ಆಧರಿಸಿ ಖಾತೆದಾರರ ಮೊಬೈಲ್ ನಂಬರ್ ಪಡೆದು, ಅವರಿಗೆ ಕರೆ ಮಾಡಿ ಬ್ಯಾಂಕ್ ಗೆ ಬಂದು ಹಣ ನೀಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಸುಂದರೇಶ್ ನಗರದ ಬೃಂದಾವನ ಬಡಾವಣೆಯ ಕೆನರಾ ಬ್ಯಾಂಕ್ಗೆ ಬಂದು ಹಣ ವಾಪಸ್ ಮಾಡಿದ್ದಾರೆ.












Click it and Unblock the Notifications