ಮೈಸೂರಿನ ಕೊಳಚೆ ನೀರಿನ ಘಟಕದಲ್ಲಿ 10 ಮೊಸಳೆಗಳು: ಹೆಚ್ಚಿದ ಆತಂಕ
ಮೈಸೂರು, ಡಿಸೆಂಬರ್2: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಅದರಲ್ಲೂ ವಿಶೇಷವಾಗಿ ಮೈಸೂರು ದಕ್ಷಿಣದ ಕೊಳಚೆ ನೀರು ಸಂಸ್ಕರಣಾ ಘಟಕದ ಜಮೀನಿನ ಸುತ್ತಮುತ್ತ ಮೊಸಳೆಗಳು ಕಾಣಿಸಿಕೊಳ್ಳುತ್ತಿದೆ. ಇದರಿಂದ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಆತಂಕ ಉಂಟು ಮಾಡಿದೆ.
ಮೈಸೂರು ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ನೀರು ಸಂಸ್ಕರಣಾ ಘಟಕವನ್ನು ಹೊಂದಿರುವ ಒಳಚರಂಡಿ ಘಟಕದ ಆವರಣದಲ್ಲಿ 10 ದಿನಗಳ ಅವಧಿಯಲ್ಲಿ ಕನಿಷ್ಟ ಎರಡು ಮೊಸಳೆಗಳು ಕಾಣಿಸಿಕೊಂಡಿವೆ. ಈ ಪೈಕಿ ಘಟಕದಲ್ಲಿಸಿಲುಕಿ ಗಾಯಗೊಂಡಿದ್ದ ಮೊಸಳೆಯನ್ನು ರಕ್ಷಿಸಲಾಗಿದೆ.
ಮೈಸೂರಿನಲ್ಲಿ ಚಿರತೆ ದಾಳಿಗೆ ವಿದ್ಯಾರ್ಥಿನಿ ಬಲಿ
ಈ ಬಗ್ಗೆ ಮೈಸೂರು ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿದ್ದು " ಕೊಳಚೆ ನೀರಿನ ಘಟಕದಲ್ಲಿ ಕನಿಷ್ಟ 10 ಮೊಸಳೆಗಳು ಇರುವ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ. ಅವು ಕೊಳಚೆ ನೀರಿನಲ್ಲಿ ಬದುಕಲು ಹೊಂದಿಕೊಂಡಿವೆ. ಮೊಸಳೆಗಳನ್ನು ಸೆರೆಹಿಡಿಯಲು ಮೈಸೂರು ಪಾಲಿಕೆ ಅರಣ್ಯ ಇಲಾಖೆಯ ನೆರವು ಪಡೆದಿದ್ದರೂ, ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ನೀರು ಸಂಸ್ಕರಣಾ ಘಟಕದಲ್ಲಿರುವ 6.5 ಲಕ್ಷ ಟನ್ಗೂ ಹೆಚ್ಚು ತ್ಯಾಜ್ಯದ ರಾಶಿಯಲ್ಲಿ ಅವುಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಆದರೆ ಮೊಸಳೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಇತರೆ ಕ್ರಮಗಳತ್ತ ಯೋಚಿಸುತ್ತಿದ್ದಾರೆ" ಎಂದರು.
ಈ ಬಗ್ಗೆ ನಿವೃತ್ತ ಅರಣ್ಯ ಅಧಿಕಾರಿಯೊಬ್ಬರು ಮಾತನಾಡಿ, "ಮೈಸೂರಿನ ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ನೀರು ಸಂಸ್ಕರಣಾ ಘಟಕದಲ್ಲಿ 2015ರಲ್ಲಿ ಮೊಸಳೆಯೊಂದರ ಶವ ಪತ್ತೆಯಾಗಿದ್ದು, ಅದು ಸಮೀಪದ ಗೋಪುರ ಪಾರ್ಕ್ನಿಂದ ಅಥವಾ ಸಮೀಪದ ಕೆರೆಗಳಿಂದ ಬಂದಿರಬಹುದು ಎಂದು ನಂಬಲಾಗಿತ್ತು. ಕೆಲವು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಮೀನು ಸಾಕಣೆ ನಡೆಯುತ್ತಿದ್ದ ಕಾರಣ, ಅಂದಿನಿಂದ ಇಲ್ಲಿ ಮೊಸಳೆಗಳು ವಾಸವಾಗಿರಬಹುದು" ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ನೀರು ಸಂಸ್ಕರಣಾ ಘಟಕದ ಬಗ್ಗೆ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, "ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆಗೆ ರಾಜ್ಯ ಸಚಿವ ಸಂಪುಟದಿಂದ ಒಪ್ಪಿಗೆ ಸಿಕ್ಕಿರುವುದರಿಂದ ಕೊಳಚೆ ಜಮೀನಿನಲ್ಲಿ ದಶಕಗಳಿಂದ ರಾಶಿ ಬಿದ್ದಿರುವ 6.5 ಲಕ್ಷ ಟನ್ ತ್ಯಾಜ್ಯವನ್ನು ತೆರವುಗೊಳಿಸಲು ಪಾಲಿಕೆ ಸಜ್ಜಾಗಿದೆ. ಒಂದು ತಿಂಗಳ ಅವಧಿಯಲ್ಲಿ ವರ್ಕ್ ಆರ್ಡರ್ ನೀಡುವ ಸಾಧ್ಯತೆ ಇದೆ. ವರ್ಕ್ ಆರ್ಡರ್ ಬಿಡುಗಡೆಯಾದ ನಂತರ ಪರಿಷ್ಕೃತ ಯೋಜನಾ ವರದಿಯಂತೆ 57 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 18 ತಿಂಗಳೊಳಗೆ ಕಾರ್ಯವನ್ನು ಪೂರ್ಣಗೊಳಿಸಲಾಗುವುದು" ಎಂದು ತಿಳಿಸಿದರು.