ಕೃಷ್ಣ ಶಿಲೆಯಲ್ಲಿ ತಯಾರಾದ ರೆಬೆಲ್ ಸ್ಟಾರ್ ಅಂಬರೀಶ್ ಪುತ್ಥಳಿ
ಮೈಸೂರು, ಫೆಬ್ರವರಿ 28:ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ಥಳಿಯೊಂದು ಮಲ್ಲಿಗೆ ನಗರಿ ಮೈಸೂರಿನಲ್ಲಿ ಸದ್ದಿಲ್ಲದೇ ನಿರ್ಮಾಣವಾಗಿದೆ. ಖ್ಯಾತ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಈ ಪುತ್ಥಳಿ ನಿರ್ಮಿಸಿದ್ದಾರೆ. ಏಕಶಿಲೆಯಲ್ಲಿ ಮೂಡಿ ಬಂದಿರುವ ಈ ಪುತ್ಥಳಿಯು ಅಂಬರೀಶ್ ಅವರ ಹುಟ್ಟೂರು ಮಂಡ್ಯ ಜಿಲ್ಲೆ ದೊಡ್ಡರಸಿನಕೆರೆಯಲ್ಲಿ ಸ್ಥಾಪನೆಯಾಗಲಿದೆ.
ಈ ಹಿಂದೆ ರಾಮಕೃಷ್ಣ ಪರಮಹಂಸರ ಪ್ರತಿಮೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿ, ಹಾಗೆಯೇ ಜಯಚಾಮರಾಜೇಂದ್ರ ಒಡೆಯರ್, ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ಹೀಗೆ ಹಲವು ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆಯನ್ನು ನಿರ್ಮಿಸಿ ಹೆಸರು ಮಾಡಿರುವ ಅರುಣ್ ಯೋಗಿರಾಜ್ ಅವರು ಅಂಬರೀಶ್ ಅವರ ಪ್ರತಿಮೆಯನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ.

ಅಂಬರೀಶ್ ಅವರ ಪುತ್ಥಳಿಯೂ ಗಿರಿಜಾ ಮೀಸೆ ಹಾಗೂ ಬಣ್ಣದ ಅಂಗಿಯನ್ನು ಧರಿಸಿದ ಜೀವಂತಿಕೆಯೊಂದಿಗೆ ಎದ್ದು ಕಾಣುವಂತಿದೆ. ಸುಮಾರು ಎರಡೂವರೆ ಅಡಿ ಎತ್ತರದ ಈ ಶಿಲ್ಪ ಎರಡು ಅಡಿ ಅಗಲವಿದೆ. 1.5 ಲಕ್ಷ ರೂ. ವೆಚ್ಚದಲ್ಲಿ ಪುತ್ಥಳಿಯನ್ನು ನಿರ್ಮಿಸಲಾಗಿದೆ.

ಕಳೆದ ಒಂದೂವರೆ ತಿಂಗಳ ಹಿಂದೆ ದೊಡ್ಡರಸಿನಕೆರೆ ಗ್ರಾಮಸ್ಥರು ಅರುಣ್ ಅವರನ್ನು ಭೇಟಿಯಾಗಿ ಪುತ್ಥಳಿ ನಿರ್ಮಿಸಲು ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಅರುಣ್ ಪುತ್ಥಳಿಯನ್ನು ನಿಗದಿತ ಅವಧಿಯಲ್ಲಿ ನಿರ್ಮಿಸಿಕೊಟ್ಟಿದ್ದಾರೆ ಯೋಗಿರಾಜ್.
ಅಂಬರೀಶ್ ಅವರ ಪುತ್ಥಳಿಯನ್ನು ಎಚ್. ಡಿ ಕೋಟೆಯಿಂದ ತರಲಾದ ಕೃಷ್ಣ ಶಿಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರೊಟ್ಟಿಗೆ ನಾಳೆ ಮೈಸೂರಿನ ಮೆಗಾ ಡೈರಿಯಲ್ಲಿ ಅರುಣ್ ಅವರು ನಿರ್ಮಿಸಿದ ಕ್ಷೀರ ಕ್ರಾಂತಿ ಪಿತಾಮಹ ವರ್ಗೀಸ್ ಕುರಿಯನ್ ಅವರ ಪುತ್ಥಳಿಯನ್ನು ಮುಖ್ಯಮಮಂತ್ರಿ ಕುಮಾರಸ್ವಾಮಿಯವರು ಅನಾವರಣಗೊಳಿಸಲಿದ್ದಾರೆ.












Click it and Unblock the Notifications