ಪ್ರಾಣಿಗಳ ಆಹಾರಕ್ಕೆಂದು ಬಂದ ದೇಣಿಗೆಯಲ್ಲಿ ಐಷಾರಾಮಿ ಕಾರು ಖರೀದಿಸಿದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ
ಮೈಸೂರು, ಸೆಪ್ಟೆಂಬರ್ 3: ಮಹಾಮಾರಿ ಕೊರೊನಾ ಸೋಂಕಿನಿಂದ ರಾಜ್ಯದೆಲ್ಲೆಡೆ ಲಾಕ್ಡೌನ್ ಮಾಡಲಾಗಿತ್ತು. ಹಾಗಾಗಿ ಪ್ರಾಣಿ ಸಂಗ್ರಹಾಲಯಕ್ಕೆ ಜನ ಬಾರದ ಕಾರಣ ಪ್ರಾಣಿಗಳನ್ನು ಸಾಕುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಮೃಗಾಲಯಗಳಿಗೆ ಜನರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿತ್ತು.
ಆದರೆ ಈ ಹಣ ಈಗ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಇಂತಹ ಕೋವಿಡ್ ಕಷ್ಟದಲ್ಲೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ ಮಾತ್ರ ಐಷಾರಾಮಿ ಇನ್ನೋವಾ ಕ್ರಿಸ್ಟಾ ಕಾರು ಖರೀದಿಸಿ ಓಡಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೃಗಾಲಯಗಳ ಪ್ರಾಣಿಗಳಿಗಾಗಿ ರಾಜ್ಯದೆಲ್ಲೆಡೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ದೇಣಿಗೆ ಸಂಗ್ರಹಿಸಿದ್ದರು. ಆ ದೇಣಿಗೆಯಲ್ಲಿ ಪ್ರಾಣಿಗಳ ಆಹಾರಕ್ಕೆ ಎಷ್ಟು ದುಡ್ಡು ಉಪಯೋಗವಾಗಿದೆ ಎಂಬುದು ಜನರ ಅನುಮಾನಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕಿನಿಂದ ಇಡೀ ರಾಜ್ಯವೇ ನಲುಗಿ ಹೋಗಿತ್ತು. ಲಾಕ್ಡೌನ್ನಿಂದ ಮನುಷ್ಯರು ಮಾತ್ರವಲ್ಲದೆ, ಪ್ರಾಣಿಗಳೂ ಸಂಕಷ್ಟಕ್ಕೆ ಸಿಲುಕಿದ್ದವು. ಪ್ರವಾಸಿಗರು ಇಲ್ಲದೆ ಮೃಗಾಲಯಗಳಿಗೆ ಆರ್ಥಿಕ ಸಂಕಷ್ಟ ಎದುರಾದ ಕಾರಣ ಪ್ರಾಣಿಗಳು ಹಸಿವಿನಿಂದ ಒದ್ದಾಡುವಂತೆ ಆಗಿತ್ತು.
ಆದ್ದರಿಂದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ರಾಜ್ಯದೆಲ್ಲೆಡೆ ದೇಣಿಗೆ ಸಂಗ್ರಹಿಸಿದ್ದರು. ಮೃಗಾಲಯ ಪ್ರಾಣಿಗಳ ಆಹಾರಕ್ಕೆಂದು ನಟ- ನಟಿಯರು, ಸಾಮಾನ್ಯ ಜನರೆಲ್ಲ ಸಹಾಯ ಹಸ್ತ ಚಾಚಿದ್ದರು. ಪ್ರಾಣಿಗಳ ಹಸಿವು ನೀಗಿಸಲೆಂದು ಕೋಟ್ಯಂತರ ರೂ. ದೇಣಿಗೆ ಹರಿದು ಬಂದಿತ್ತು.
ಮೃಗಾಲಯ ಪ್ರಾಣಿಗಳ ಆಹಾರಕ್ಕೆ ಎಷ್ಟು ಹಣ ಖರ್ಚಾಗಿದೆಯೋ ಗೊತ್ತಿಲ್ಲ. ಆದರೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಅಧಿಕೃತ ಓಡಾಟಕ್ಕೆಂದು 21.13 ಲಕ್ಷ ರೂ. ಕೊಟ್ಟು ಹೊಸ ಇನ್ನೋವಾ ಕ್ರಿಸ್ಟಾ ಕಾರು ಖರೀದಿಸಿದ್ದಾರೆ. ಹೊಸ ಕಾರು ಖರೀದಿಗೆ 147ನೇ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂಬುವುದು ತಿಳಿದು ಬಂದಿದೆ.
ಪ್ರಾಧಿಕಾರದ ಅಧ್ಯಕ್ಷರಿಗೆಂದು ನೀಡಿದ 7 ವರ್ಷದ ಹಳೆಯ ಕಾರನ್ನು ಮೃಗಾಲಯ ನಿರ್ದೇಶಕರಿಗೆ ಕೊಟ್ಟಿದ್ದಾರೆ. ಮೃಗಾಲಯದ ಪ್ರಾಣಿಗಳ ಹೆಸರು ಹೇಳಿಕೊಂಡು ಅಧ್ಯಕ್ಷ ಮಹದೇವಸ್ವಾಮಿ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಹೊಸ ಕಾರು ಬೇಕಿತ್ತಾ ಎಂದು ಸಾರ್ವಜನಿಕರ ಆಕ್ರೋಶ ಹೊರ ಹಾಕಿದ್ದಾರೆ.

ಮಹದೇವಸ್ವಾಮಿ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, "ನಾನು ಜನರ ದೇಣಿಗೆ ದುಡ್ಡಿನಿಂದ ಕಾರು ಖರೀದಿಸಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.
"ನಾನು ಯಾವುದೇ ಕಾರಿಗಾಗಿ ಬೇಡಿಕೆ ಇಟ್ಟಿರಲಿಲ್ಲ. ಹಿಂದಿನ ಅಧ್ಯಕ್ಷರು ಇಟ್ಟಿದ್ದ ಬೇಡಿಕೆಯ ಕಾರು ಈಗ ಬಂದಿದೆ. ಬಂದಿರುವ ಹೊಸ ಕಾರಿಗೆ ಜನರ ದೇಣಿಗೆ ಹಣ ಬಳಕೆ ಆಗಿಲ್ಲ. ಈಗಾಗಲೇ ಮೃಗಾಲಯ ನಿರ್ದೇಶಕರಿಗೆ ಇಟ್ಟಿದ್ದ ಹಳೆ ಕಾರು ಬಳಕೆ ಮಾಡಲಾಗುತ್ತಿತ್ತು. ಅದು 7 ವರ್ಷಗಳ ಹಳೆಯ ಕಾರು. ಅದನ್ನೇ ನಾನು ಬಳಕೆ ಮಾಡುತ್ತಿದ್ದೆ. ಅದೂ ಕೂಡ ಮಾಧ್ಯಮದಲ್ಲಿ ಸುದ್ದಿ ಆಗಿತ್ತು," ಎಂದರು.
"ನನಗೆ ಮೃಗಾಲಯ ಅಭಿವೃದ್ಧಿ ಮಾಡಬೇಕು ಎಂಬ ಆಸೆ ಇದ್ದು, ಐಷಾರಾಮಿ ಕಾರಿನಲ್ಲಿ ತಿರುಗಾಡಬೇಕು ಎಂಬ ಆಸೆ ಇಲ್ಲ. ಧಾರವಾಡ, ಬಳ್ಳಾರಿ, ಶಿವಮೊಗ್ಗ ಹೋಗುವಾಗ ಮಾತ್ರ ಸರ್ಕಾರಿ ಕಾರು ಬಳಸುತ್ತೇನೆ. ಉಳಿದ ಸಮಯದಲ್ಲಿ ನನ್ನ ಖಾಸಗಿ ಕಾರಿನಲ್ಲೇ ತಿರುಗಾಡುತ್ತಿರುವೆ," ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.












Click it and Unblock the Notifications