ಈ ಪ್ರಕರಣ ಸುಖಾಂತ್ಯವಾಗುವ ವಿಶ್ವಾಸ ಇದೆ: ಕೋಟಿ ಶ್ರೀನಿವಾಸ ಪೂಜಾರಿ!
ಬೆಂಗಳೂರು, ಡಿ. 16: ವಿಧಾನಪರಿಷತ್ನಲ್ಲಿ ನಿನ್ನೆ (ಡಿ.15ರಂದು) ನಡೆದ ಘಟನೆ ಕುರಿತು ಮುಜರಾಯಿ ಸಚಿವ ಹಾಗೂ ವಿಧಾನಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪ್ರಸಾದ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಪರಿಷತ್ನಲ್ಲಿ ಉಪಸಭಾಪತಿಗಳನ್ನು ಎಳೆದಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರಜಾಪ್ರಭುತ್ವದ ದೇಗುಲದಲ್ಲಿ ಈ ರೀತಿ ಘಟನೆ ಆಗಬಾರದಿತ್ತು. ಘಟನೆ ಆಗಿದೆ. ಇನ್ನು ಮುಂದೆ ಆಗದ ರೀತಿಯಲ್ಲಿ ಎಲ್ಲ ಪಕ್ಷಗಳು ಎಚ್ಚರ ವಹಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವ ಮುನ್ನ ಅವರು ಮಾತನಾಡಿದ್ದಾರೆ. ಸಭಾಪತಿ ಹುದ್ದೆಯನ್ನು ಯಾವುದೇ ಪಕ್ಷದ ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಆದರೆ ಕಾಂಗ್ರೆಸ್ ಅಂತಹ ಪ್ರಯತ್ನಕ್ಕೆ ಕೈ ಹಾಕುತ್ತಿದೆ. ಈ ಪ್ರಕರಣ ಸುಖಾಂತ್ಯವಾಗುವ ವಿಶ್ವಾಸ ಇದೆ. ಸದನದ ಬಗ್ಗೆ ಹೆಚ್ಚು ಮಾತನಾಡಿದರೆ ಅದಕ್ಕೆ ಅಗೌರವ ಮಾಡಿದಂತಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಸಭಾಪತಿಗಳು ಸದನಕ್ಕೆ ಬರದಂತೆ ತಡೆದ ಗೂಂಡಾಗಳು ಯಾರು?: ಡಿ.ಕೆ. ಶಿವಕುಮಾರ್
ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಲ್ಲಿಸಿದ್ದ ಬಿಜೆಪಿ ಸದಸ್ಯರು ಪರಿಷತ್ ಕಲಾಪದಲ್ಲಿ ಉಪ ಸಭಾಪತಿಗಳನ್ನು ಕೂಡಿಸಿದ್ದರು. ಆದರೆ ಉಪ ಸಭಾಪತಿಗಳನ್ನು ಸಭಾಪತಿಗಳ ಪೀಠದಿಂದ ಕಾಂಗ್ರೆಸ್ ಸದಸ್ಯರು ಎಳೆದು ಹಾಕಿದ್ದರು. ಇದೇ ಸಂದರ್ಭದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸದನ ಪ್ರವೇಶಿಸದಂತೆ ಬಿಜೆಪಿ ಸದಸ್ಯರು ಸದನದ ಬಾಗಿಲನ್ನು ಮುಚ್ಚಿದ್ದರು. ಹೀಗಾಗಿ ಇಡೀ ಸದನ ರಣಾಂಗಣದಂತಾಗಿತ್ತು. ಕೊನೆಗೆ ಮಾರ್ಷಲ್ಗಳ ಸಹಾಯದಿಂದ ಸದನಕ್ಕೆ ಬಂದಿದ್ದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ