ಮೈಸೂರು ದಸರಾ: ಏರ್ ಶೋ ಪೂರ್ವ ತಾಲೀಮು ನೋಡಿ ಬೆಕ್ಕಸ ಬೆರಗಾದ ಜನ
ಮೈಸೂರು, ಅಕ್ಟೋಬರ್. 14 : ಶರವೇಗದಲ್ಲಿ ಬಂದ ವಾಯುಪಡೆ ಹೆಲಿಕಾಪ್ಟರ್, ಅದರಿಂದ ಇಳಿದ ಕಮಾಂಡೋಗಳು, ತುರ್ತು ಕಾರ್ಯಾಚರಣೆಗೆ ಸನ್ನದ್ಧರಾದ ಯೋಧರು, ಕಮಾಂಡೋಗಳನ್ನು ಇಳಿಸಿ ಮತ್ತೆ ಮರೆಯಾದ ಹೆಲಿಕಾಪ್ಟರ್.
ಇದೇನೆಂದು ಹುಬ್ಬೇರಿಸಬೇಡಿ! ತುರ್ತು ಸಂದರ್ಭದಲ್ಲಿ ನಮ್ಮ ಯೋಧರು ಕಾರ್ಯನಿರ್ವಹಿಸುವ ಪರಿಯನ್ನು ಪರಿಚಯಿಸಿದ ರೀತಿ ಇದು.
ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಏರ್ ಶೋ ಪೂರ್ವ ತಾಲೀಮು ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ನಡೆಯಿತು. ವಿಂಗ್ ಕಮಾಂಡರ್ ನೀರಜ್ ಆಸ್ತಾನಾ, ಮುಖ್ಯ ಸಂಯೋಜಕ ಗಜೇಂದ್ರ ಸಿಂಗ್ ನೇತೃತ್ವದಲ್ಲಿ ಇದರ ಪೂರ್ವಾಭ್ಯಾಸ ನಡೆಯಿತು.
ವಿಂಗ್ ಕಮಾಂಡರ್ ಗಜಾನಂದ ಯಾದವ್ ಸ್ಕೈ ಡೈವಿಂಗ್ ನೇತೃತ್ವ ವಹಿಸಿದ್ದರೆ, ಸಾರ್ಜೆಂಟ್ ಗೌರವ್ ಅವರು ಹೆಲಿಕಾಪ್ಟರ್ ಚಮತ್ಕಾರ ತೋರುವ ಗಾರ್ಡ್ ಕಮಾಂಡೋ ಪಡೆಯ ನೇತೃತ್ವ ವಹಿಸಿದ್ದರು.
ಐಎಎಫ್ ಎಂಐ 17 ಹೆಲಿಕಾಪ್ಟರ್ ಹಾಗೂ ಎಎನ್-32 ಆಕಾಶಗಂಗಾ ಬೆಂಗಳೂರು ವಾಯು ನೆಲೆಯಿಂದ ಕಾರ್ಯಾಚರಣೆ ನಡೆಸಿತು. ಮುಂದೆ ಓದಿ...

ಅದ್ಭುತ ಪುಷ್ಪವೃಷ್ಟಿ
ಐಎಎಫ್ ಎಂಐ 17 ಹೆಲಿಕಾಪ್ಟರ್ ಮೊದಲು ಆಗಮಿಸಿ ಪುಷ್ಪವೃಷ್ಟಿ ನಡೆಯಿತು. ಇದರ ನಂತರ ಬಂದ ಎಎನ್-32 ಆಕಾಶಗಂಗಾ ಹೆಲಿಕಾಪ್ಟರ್ ನಿಂದ 8 ಮಂದಿ ಪ್ಯಾರಾ ಚೂಟ್ ಗಳ ಮೂಲಕ ಸುಮಾರು 4 ಸಾವಿರ ಅಡಿ ಎತ್ತರದಿಂದ ಧುಮುಕಿದರು.

ಯುದ್ಧಕ್ಕೆ ಸಜ್ಜಾಗುವ ಮಾದರಿ
ಒಂದು ಪ್ಯಾರಾಚೂಟ್ ಕನ್ನಡ ಧ್ವಜದ ಕೆಂಪು ಹಳದಿ ಬಣ್ಣವನ್ನು ಒಳಗೊಂಡಿದ್ದರೆ ಮೂರು ಪ್ಯಾರಾಚೂಟ್ ಗಳು ರಾಷ್ಟ್ರಧ್ವಜದ ವರ್ಣದಿಂದ ಕಂಗೊಳಿಸುತ್ತಿತ್ತು.
ಇದರ ಹಿಂದೆಯೇ ಸೇನಾ ಹೆಲಿಕಾಪ್ಟರ್ ನಿಂದ 11 ಮಂದಿ ಕಮಾಂಡೋಗಳು ಹಗ್ಗದ ಸಹಾಯದಿಂದ ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ಇಳಿಯುವಂತೆ ಮೈದಾನದಲ್ಲಿ ಇಳಿದು ಅವರ ಎಂದಿನ ಶೈಲಿಯಲ್ಲಿ ಶತ್ರು ಪಾಳಯದ ವಿರುದ್ಧ ಯುದ್ಧಕ್ಕೆ ಸಜ್ಜಾಗುವ ಮಾದರಿಯನ್ನು ಪ್ರದರ್ಶಿಸಿದರು.

ಮೈದಾನದಲ್ಲಿ ಧೂಳು
ಬನ್ನಿಮಂಟಪ ಮೈದಾನದ ಮಧ್ಯದಲ್ಲಿ ಗುರುತು ಮಾಡಿದ ಜಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡುವ ಬದಲು ಸ್ವಲ್ಪ ದೂರದಲ್ಲಿ ಪ್ರೇಕ್ಷಕರ ಗ್ಯಾಲರಿ ಬಳಿ ಲ್ಯಾಂಡಿಂಗ್ ಮಾಡಲು ಮುಂದಾದ ಕಾರಣ ಮೈದಾನದಲ್ಲಿ ಧೂಳೆದ್ದು, ಪ್ರೇಕ್ಷಕರಿಗೆ ಏನೂ ಕಾಣದಂತಾಯಿತು.

ಹಗ್ಗದ ಮೂಲಕ ಇಳಿದರು
ಈ ಮಧ್ಯೆ ಕಮಾಂಡೋಗಳು ಧೂಳಿನ ನಡುವೆಯೇ ಹಗ್ಗದ ಮೂಲಕ ಮೈದಾನದಲ್ಲಿ ಇಳಿದರು. ಮೈದಾನದಲ್ಲಿ ಬೆಳಗ್ಗೆ ನೀರು ಸಿಂಪಡಿಸಿದ್ದರೂ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ನೆಲ ಒಣಗಿ ಹೋಗಿ ಧೂಳು ಎದ್ದಿತು ಎಂದು ಅಧಿಕಾರಿಗಳು ಹೇಳಿದರು.












Click it and Unblock the Notifications