ಕಾಂಗ್ರೆಸ್-ಜೆಡಿಎಸ್ ರಾಜಕೀಯ ವೈರಿಗಳೆಂಬುದು ಸಾಬೀತಾಯ್ತು!
Recommended Video
ಮೈಸೂರು, ಮೇ 31: ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಳಮಟ್ಟದಲ್ಲಿ ಪಕ್ಕಾ ಎದುರಾಳಿಗಳು ಎಂಬುದನ್ನು ಇದೀಗ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಸಾಬೀತು ಮಾಡಿವೆ. ಬಹಳಷ್ಟು ಕಡೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಎದುರಾಳಿಗಳಾಗಿದ್ದು, ಅವುಗಳು ಯಾವತ್ತಿಗೂ ತಳಮಟ್ಟದಲ್ಲಿ ಒಂದಾಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.
ವಿಧಾನಸೌಧದಲ್ಲಿ ಕುಳಿತು ರಾಜಕೀಯ ನಡೆಸುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮ ಅನುಕೂಲಕ್ಕಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರೂ, ಕಳೆದ ಒಂದು ವರ್ಷದಿಂದ ಸುಗಮವಾಗಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಆಡಳಿತ ನಡೆಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಇದೇ ನಿದರ್ಶನವಾಗಿದೆ. ಅಷ್ಟೇ ಅಲ್ಲ ಇತ್ತೀಚೆಗಷ್ಟೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೆಲಕಚ್ಚಲು ಕೂಡ ಸಾಂಪ್ರದಾಯಿಕ ವೈರತ್ವವೇ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.

ಹಲವು ಕಡೆ ತೀವ್ರ ಪೈಪೋಟಿ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೆ ಕೈ ಮತ್ತು ತೆನೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇದೆರಡು ಪಕ್ಷಗಳ ನಡುವೆ ಹಲವು ಕಡೆಗಳಲ್ಲಿ ತೀವ್ರ ಪೈಪೋಟಿ ನಡೆದಿರುವುದನ್ನು ನಾವು ಕಾಣಬಹುದಾಗಿದೆ. ಇದ್ಯಾವುದನ್ನು ಅರಿಯದ ರಾಜ್ಯ ನಾಯಕರು ತಾವು ಒಂದಾಗಿ ಹೋದರೆ ಬಿಜೆಪಿಯನ್ನು ಡಬಲ್ ಡಿಜಿಟಲ್ ಬರದಂತೆ ನೋಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಇದರ ಪರಿಣಾಮ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಎದುರಾಳಿಗಳಾಗಿದ್ದ ಎರಡು ಪಕ್ಷಗಳು ಸಿಂಗಲ್ ಆಗಿದ್ದನ್ನು ಯಾರು ಮರೆಯುವಂತಿಲ್ಲ.
ಮೈತ್ರಿ ನಡುವಿನ ಶೀತಲ ಸಮರದಿಂದ ರಾಜ್ಯದಲ್ಲಿ ಆಡಳಿತ ಸುಗಮವಾಗಿಲ್ಲ. ಸದಾ ಅತೃಪ್ತರನ್ನು ತೃಪ್ತಿಗೊಳಿಸುವುದರಲ್ಲೇ ಸಿಎಂ, ಡಿಸಿಎಂ ಮಗ್ನರಾಗಿರುತ್ತಾರೆ. ದೇವರು, ಪೂಜೆ, ಹೋಮ ಹವನ ಎಂದು ಮುಖ್ಯಮಂತ್ರಿಗಳು ನಿರತರಾಗಿದ್ದು, ಜನರ ಗೋಳು ಕೇಳುವವರಿಲ್ಲದಂತಾಗಿದೆ ಎಂಬ ಆಕ್ರೋಶಗಳು ಇದೀಗ ಅಲ್ಲಲ್ಲಿ ಕೇಳಬರತೊಡಗಿದೆ. ಚುನಾವಣೆಗೆ ಮುನ್ನ ಮಂಡ್ಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮುಖ್ಯಮಂತ್ರಿಗಳು ಚುನಾವಣೆ ಬಳಿಕ ಮೌನಕ್ಕೆ ಶರಣಾಗಿದ್ದು, ಈಗಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ತಮ್ಮ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು? ಅತೃಪ್ತ ಕಾಂಗ್ರೆಸ್ ಶಾಸಕರನ್ನು ಯಾವ ರೀತಿಯಲ್ಲಿ ತಣ್ಣಗಾಗಿಸಬೇಕು ಎಂಬ ಚಿಂತೆಯಲ್ಲಿದ್ದಾರೆ.

ಕುಗ್ಗುತ್ತಿದೆಯೇ ಸಿದ್ದರಾಮಯ್ಯ ವರ್ಚಸ್ಸು
ಸದ್ಯದ ಪರಿಸ್ಥಿತಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮಾತು ಕೂಡ ನಡೆಯದಂತಾಗಿದೆ. ಹೈಕಮಾಂಡ್ ಗೂ ಅವರ ಮೇಲೆ ವಿಶ್ವಾಸ ಹೋಗಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಹೊತ್ತುಕೊಂಡಿದ್ದ ಸಿದ್ದರಾಮಯ್ಯ ಎರಡನೇ ಬಾರಿಗೂ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು. ತಾನೇ ಕಾಂಗ್ರೆಸ್ನ ಐಕಾನ್ ಎಂಬಂತೆ ವರ್ತಿಸಿದ್ದರು. ಪರಿಣಾಮ ಫಲಿತಾಂಶ ಬಂದಾಗ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಸಿದ್ದರಾಮಯ್ಯ ಅವರು ಹೆಚ್ಚಿನ ಸ್ಥಾನವನ್ನು ಗೆಲ್ಲಿಸಿಕೊಡುತ್ತಾರೆ ಎಂದು ಕೇಂದ್ರದ ನಾಯಕರು ನಂಬಿದ್ದರು. ಆದರೆ ಒಂದೇ ಒಂದು ಸ್ಥಾನ ದೊರೆತಿದೆ. ಹೀಗಾಗಿ ಸಿದ್ದರಾಮಯ್ಯ ಅವರ ವರ್ಚಸ್ಸು ರಾಜ್ಯದಲ್ಲಿ ಕುಸಿದಂತೆ ಕಾಣುತ್ತಿದೆ. ತಾವೇ ಹಠ ಮಾಡಿ ತಮ್ಮ ಆಪ್ತ ವಿಜಯಶಂಕರ್ಗೆ ಟಿಕೆಟ್ ಕೊಡಿಸಿದ್ದರು. ಆದರೆ ಅಲ್ಲಿಯೂ ಗೆಲುವು ಕಂಡಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಅವರ ಬಗ್ಗೆ ಹೈಕಮಾಂಡ್ ನ ನಾಯಕರು ಹೆಚ್ಚಿನ ಭರವಸೆಯನ್ನು ಮುಂದಿನ ದಿನಗಳಲ್ಲಿ ಇಟ್ಟುಕೊಳ್ಳುವುದು ಅಸಾಧ್ಯ ಎನ್ನಬಹುದು.

ಕುಸಿಯುತ್ತಿದೆ ಜೆಡಿಎಸ್ ಭದ್ರಕೊಟೆ
ಇನ್ನೊಂದೆಡೆ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ನ ಪ್ರಭಾವಿ ನಾಯಕ ಸದ್ಯ ಪ್ರವಾಸೋದ್ಯಮ ಸಚಿವರೂ ಆಗಿರುವ ಸಾ.ರಾ.ಮಹೇಶ್ ಅವರ ಭದ್ರಕೋಟೆ ಸದ್ದಿಲ್ಲದೆ ಕುಸಿಯುವ ಲಕ್ಷಣಗಳು ಕಾಣುತ್ತಿವೆ. ಎರಡು ಬಾರಿ ಶಾಸಕರಾಗಿದ್ದ ಅವರು, ಕಳೆದ ಬಾರಿ ಪ್ರಯಾಸದಿಂದ ಗೆಲುವು ಕಂಡಿದ್ದರು. ಸಾ.ರಾ. ಮಹೇಶ್ ಅವರ ಪ್ರಾಬಲ್ಯದ ನಡುವೆಯೂ ಕೆ.ಆರ್.ನಗರದಲ್ಲಿ ಕಾಂಗ್ರೆಸ್ ಸಂಘಟನೆಯಾಗುತ್ತಿದ್ದು. ನಿಧಾನವಾಗಿ ಗಟ್ಟಿಗೊಳ್ಳುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು ಸಾಕ್ಷಿಯಾಗಿವೆ. ಹೆಚ್ಚಿನವರು ಸಾ.ರಾ.ಮಹೇಶ್ ಅವರ ಮಾತನ್ನು ಧಿಕ್ಕರಿಸಿ ಸುಮಲತಾ ಅವರನ್ನು ಬೆಂಬಲಿಸಿದ್ದರು.
ಇದೀಗ ನಡೆದ ಕೆ.ಆರ್.ನಗರ ಪುರಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ತನ್ನ ಪ್ರಾಬಲ್ಯ ಸಾಧಿಸುವ ಮೂಲಕ ಸಚಿವ ಸಾ.ರಾ.ಮಹೇಶ್ಗೆ ಮುಖಭಂಗವಾಗುವಂತೆ ಮಾಡಿದೆ. ಅಷ್ಟೇ ಅಲ್ಲ ತಾವೇನಿದ್ದರೂ ಎದುರಾಳಿಗಳೇ, ಒಂದಾಗಲು ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದೆ.

ಪುರಸಭೆಯಲ್ಲಿ ಕಾಂಗ್ರೆಸ್ಗೆ 14 ಸ್ಥಾನ
ಇಲ್ಲಿನ ಪುರಸಭೆಯ ಒಟ್ಟು 23 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್- 14 ಜೆಡಿಎಸ್-8 ಬಿಜೆಪಿ- 1 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಸಾ.ರಾ.ಮಹೇಶ್ ವಿರುದ್ಧ ಕಾಂಗ್ರೆಸ್ ಮುಖಂಡ ರವಿಶಂಕರ್ ನಾಯಕತ್ವ ವಹಿಸಿ ಪುರಸಭೆಯ ಅಧಿಕಾರವನ್ನು ಜೆಡಿಎಸ್ ಕಬಳಿಸದಂತೆ ನೋಡಿಕೊಂಡಿದ್ದಾರೆ. ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗುತ್ತಿರುವುದು ಜೆಡಿಎಸ್ ಗೆ ನುಂಗಲಾರದ ತುತ್ತಾಗಿದೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಸಾ.ರಾ.ಮಹೇಶ್ ಅವರಿಗೂ ಕಷ್ಟವಾಗುವ ಸಾಧ್ಯತೆಯಿದೆ.












Click it and Unblock the Notifications