ಮೈಸೂರು ವಿವಿ ಕುಲಪತಿ ಭೇಟಿಯಾದ ಅಫ್ಘಾನ್ ವಿದ್ಯಾರ್ಥಿಗಳು
ಮೈಸೂರು, ಆಗಸ್ಟ್ 17; ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ದೇಶದಲ್ಲಿನ ಪರಿಸ್ಥಿತಿ ಬಗ್ಗೆ ಆತಂಕ ಉಂಟಾಗಿದೆ. ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘಾನ್ ವಿದ್ಯಾರ್ಥಿಗಳು ಸಹ ಭೀತಿಗೊಂಡಿದ್ದಾರೆ.
Recommended Video

ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘಾನ್ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅಭಯ ನೀಡಿದ್ದಾರೆ.
ಮಂಗಳವಾರ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ, ಕುಲಸಚಿವರನ್ನು ಭೇಟಿ ಮಾಡಿದ ಅಫ್ಘಾನ್ ವಿಧ್ಯಾರ್ಥಿಗಳು, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲಾಯಿತು.

ಕುಲಪತಿ ಪ್ರೊ. ಹೇಮಂತ್ ಕುಮಾರ್, "ಅಫ್ಘಾನಿಸ್ತಾನದಲ್ಲಿ ಏನಾಗಿದೆಯೋ ಅದಾಗಿದೆ. ಅದನ್ನು ನಿಯಂತ್ರಿಸಲು ನಾವ್ಯಾರು ಅಲ್ಲ. ಆದರೆ ನಮ್ಮ ವಿದ್ಯಾರ್ಥಿಗಳ ರಕ್ಷಣೆಗೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ" ಎಂದರು.
"ವಿಶ್ವವಿದ್ಯಾನಿಲಯದಲ್ಲಿ ನೀವು ಇರುವವರೆಗೂ ನಾವು ನಿಮ್ಮ ಪೋಷಕರಂತೆ. ನಿಮ್ಮ ಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ. ವೀಸಾ ಅವಧಿ ಮುಗಿಯುವವರೆಗೂ ವಿದ್ಯಾಭ್ಯಾಸದ ಮೇಲೆ ಗಮನಕೊಡಿ. ವೀಸಾ ವಿಸ್ತರಣೆ ಅಗತ್ಯವಿದ್ದರೆ ಸಂಬಂಧಪಟ್ಟವರೊಂದಿಗೆ ನಾವೇ ಚರ್ಚೆ ಮಾಡಿ ತಿಳಿಸುತ್ತೇವೆ" ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳಿಂದ ಧನ್ಯವಾದ; ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ಅಫ್ಘಾನ್ ವಿದ್ಯಾರ್ಥಿಗಳು, "ನಾವು ಭಾರತದಲ್ಲಿ ಕ್ಷೇಮವಾಗಿದ್ದರೂ ನಮ್ಮ ಚಿತ್ತ ಮಾತ್ರ ಆಫ್ಘಾನಿಸ್ತಾನದ ಭೀತಿ ಮೇಲಿದೆ. ನಾವು ಕುಟುಂಬಸ್ಥರೊಂದಿಗೆ ಮಾತನಾಡಿದ್ದೇವೆ. ಅವರು ಹೇಳುತ್ತಿರುವುದು ಒಂದೇ ಓದನ್ನು ಬಿಡಬೇಡಿ ನಮ್ಮ ಬಗ್ಗೆ ಹೆಚ್ಚು ಚಿಂತಿಸಬೇಡಿ. ಸದ್ಯಕ್ಕೆ ನಾವು ಕ್ಷೇಮವಾಗಿದ್ದೇವೆ ಎನ್ನುತ್ತಿದ್ದಾರೆ" ಎಂದರು.
ಅಲ್ಲಿ ನಮ್ಮ ಕುಟುಂಬಸ್ಥರು ಮನೆಯಿಂದ ಹೊರ ಬಾರದ ಸ್ಥಿತಿ ಉಂಟಾಗಿದೆ. ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಶೀಘ್ರದಲ್ಲೇ ಅಶಾಂತಿಯ ವಾತಾವರಣ ಸರಿಯಾಗುವ ಭರವಸೆ ಇದೆ. ಜಾಗತಿಕ ಸಮುದಾಯ ಅಫ್ಘಾನ್ ಪರವಾಗಿ ಮಾತನಾಡಬೇಕು. ಭಾರತದಲ್ಲಿ ವಿದ್ಯಾರ್ಥಿಗಳಿಗೆ ಕೆಲವೇ ತಿಂಗಳಲ್ಲಿ ವೀಸಾ ಅವಧಿ ಮುಗಿಯಲಿದ್ದು, ಭಾರತ ನಮ್ಮ ನೆರವಿಗೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ನಮ್ಮ ಕುಟುಂಬದಂತೆ ಇರಲಿದೆ ಎಂಬ ಭರವಸೆ ನೀಡಿದೆ. ಮೈಸೂರು ವಿವಿಯಿಂದ ನಮಗೆ ನೈತಿಕ ಬೆಂಬಲ ದೊರೆತಿದೆ. ಹೀಗಾಗಿ ಭಾರತ ಹಾಗೂ ಮೈಸೂರು ವಿವಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಅಫ್ಘಾನ್ ವಿದ್ಯಾರ್ಥಿಗಳು ತಿಳಿಸಿದರು.












Click it and Unblock the Notifications