'ಪ್ರಸಾದಕ್ಕೆ ವಿಷ ಹಾಕಿದ್ದು ನಾನೇ': ತಪ್ಪೊಪ್ಪಿಕೊಂಡ ಅರ್ಚಕ ದೊಡ್ಡಯ್ಯ?
ಮೈಸೂರು, ಡಿಸೆಂಬರ್ 19 : ಸುಳ್ವಾಡಿ ಮಾರಮ್ಮನ ದೇವಸ್ಥಾನ ಹಾಗೂ ವಿಷಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ವಿಧದಲ್ಲೂ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಈವರೆಗೂ 11 ಆರೋಪಿಗಳ ಇಂಚಿಂಚು ಮಾಹಿತಿಯನ್ನು ಕಲೆಹಾಕಿದ್ದಾರೆ.
ದೊಡ್ಡಯ್ಯ ಎಂಬಾತ ಕಳೆದ ಮೂರು ದಿನಗಳಿಂದಲೂ ಆಸ್ಪತ್ರೆಯಲ್ಲಿ ಪ್ರಸಾದ ಸೇವಿಸಿದ್ದಾಗಿರುವುದಾಗಿ ದಾಖಲಾಗಿದ್ದ. ಮೂಲತಃ ತಮಿಳುನಾಡಿನ ಬರಗೂರು ಮೂಲದವನಾದ ಈತ ನಾಲ್ಕೈದು ವರ್ಷಗಳಿಂದ ಈಚೆಗೆ ಕಿಚ್ಚುಗುತ್ತು ಮಾರಮ್ಮನ ದೇಗುಲದ ಎಡಪಾಶ್ವ ದಲ್ಲಿರುವ ನಾಗದೇವತೆಯ ಅರ್ಚಕನಾಗಿದ್ದ.
ನಾಲ್ಕೈದು ತಿಂಗಳ ಹಿಂದೆ ಗಾಂಜಾ ಪ್ರಕರಣದಲ್ಲೂ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅಲ್ಲದೇ ಈತನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಸಮಯಕ್ಕಾಗಿ ಕಾದು, ವೈದ್ಯರ ಸಹಕಾರದಿಂದ ಆರೋಪಿ ನಿಜ ಬಣ್ಣ ಬಯಲಾದ ಕೂಡಲೇ ದೊಡ್ಡಯ್ಯನನ್ನು ವಶಕ್ಕೆ ಪಡೆಯಲಾಗಿದೆ.

ತನಿಖೆಯ ಪ್ರಾರಂಭದ ವೇಳೆ ದೊಡ್ಡಯ್ಯನ ಮೇಲೆ ಯಾರಿಗೂ ಅನುಮಾನ ಮೂಡಿರಲಿಲ್ಲ. ಆದರೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ದಿನ ಕಳೆದಂತೆ ಈತನ ವರ್ತನೆ ಅನುಮಾನ ಮೂಡಿಸಿತು. ಕೂಡಲೇ ವೈದ್ಯರು ಪ್ರಯೋಗಾಲಯಕ್ಕೆ ಕಳುಹಿಸಿದ್ದ ದೊಡ್ಡಯ್ಯನ ರಕ್ತದ ಮಾದರಿ ವರದಿ ಪರಿಶೀಲಿಸಿದರು.
ಪರೀಕ್ಷೆ ವರದಿಯಲ್ಲಿ ದೊಡ್ಡಯ್ಯನ ಆರೋಗ್ಯ ಸರಿಯಾಗಿಯೇ ಇತ್ತು. ಆತನಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಸೋಮವಾರ ಮಧ್ಯಾಹ್ನವೇ ಆರೋಪಿ ದೊಡ್ಡಯ್ಯನನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂಗತಿ ಆಸ್ಪತ್ರೆಯ ಆ ವೈದ್ಯರು ಮತ್ತು ತನಿಖಾಧಿಕಾರಿ ಬಿಟ್ಟು ಬೇರೆ ಯಾರಿಗೂ ತಿಳಿದಿರಲಿಲ್ಲ.
ಮೊದಲು ಮಫ್ತಿಯಲ್ಲಿ ದೊಡ್ಡಯ್ಯನನ್ನು ವಶಪಡಿಸಿಕೊಂಡ ನಂತರ ಅವನು ಬಾಯ್ಬಿಟ್ಟ ಸತ್ಯದ ವಿಚಾರವಾಗಿಯೇ ಇಮ್ಮಡಿ ಮಹಾದೇವಸ್ವಾಮಿ, ಮಾದೇಶ್, ಅಂಬಿಕಾ ಮಾದೇಶ್ ರನ್ನು ವಿಷಾರಣೆಗೆ ಒಳಪಡಿಸಿದ್ದು ಎನ್ನಲಾಗಿದೆ.












Click it and Unblock the Notifications