ಮೈಸೂರು; ಕೆಲಕಾಲ ಆತಂಕ ಸೃಷ್ಟಿಸಿದ ಸೂಟ್ ಕೇಸ್
ಮೈಸೂರು, ಜನವರಿ 26: ಗಣರಾಜ್ಯೋತ್ಸವಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಮೈಸೂರು ನಗರದಲ್ಲಿ ಆತಂಕ ಉಂಟಾಗಿತ್ತು. ನಗರದಲ್ಲಿ ಪತ್ತೆಯಾದ ವಾರಸುದಾರರು ಇಲ್ಲದ ಸೂಟ್ ಕೇಸ್ ನಗರದ ಜನರಲ್ಲಿ ಆತಂಕವನ್ನು ಉಂಟು ಮಾಡಿತ್ತು.
ಸೋಮವಾರ ರಾತ್ರಿ ಮೈಸೂರು ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸಿದ್ದಪ್ಪ ವೃತ್ತದ ಬಳಿ ಸೂಟ್ ಕೇಸ್ ಪತ್ತೆಯಾಗಿತ್ತು. ಬ್ಯಾಂಕ್ನ ಎಟಿಎಂ ಮುಂದೆ ಅನುಮಾನಾಸ್ಪದವಾಗಿ ಇಡಲಾಗಿದ್ದ ಸೂಟ್ ಕೇಸ್ ನೋಡಿ ಜನರು ಆತಂಕಗೊಂಡರು.
ಮೊದಲು ಸೂಟ್ ಕೇಸ್ ನೋಡಿದ ಜನರು ಆತಂಕದಿಂದಲೇ ಪೋಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಮಧ್ಯರಾತ್ರಿ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳ ಬಂದು ಸೂಟ್ ಕೇಸ್ ಪರಿಶೀಲನೆ ನಡೆಸಿತು.

ಸೂಟ್ ಕೇಸ್ನಲ್ಲಿ ವಿದ್ಯುತ್ ಬಲ್ಬ್ ಹೊರತು ಪಡಿಸಿ ಬೇರೆ ಯಾವುದೇ ವಸ್ತು ಸಹ ಪತ್ತೆಯಾಗಿಲ್ಲ ಎಂದು ಪೊಲೀಸರು ಆತಂಕವನ್ನು ದೂರ ಮಾಡಿದರು. ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಯಾರೋ ಕಿಡಿಗೇಡಿ ಇಂತಹ ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಈ ರೀತಿ ಸೂಟ್ ಕೇಸ್ ಇಟ್ಟಿರುವ ವ್ಯಕ್ತಿ ಯಾರು ಎಂದು ತಿಳಿಯಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ಹೇಳಿದ್ದಾರೆ.












Click it and Unblock the Notifications