ಮೈಸೂರಿನ ಶಾಲೆಯಲ್ಲಿ ನಾಗರಹಾವು: ಬೆಚ್ಚಿಬಿದ್ದ ಮಕ್ಕಳು!
ಮೈಸೂರು, ಜನವರಿ 21: ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯ ಕೊಠಡಿಯಲ್ಲಿ ನಾಗರಹಾವೊಂದು ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.
ಶುಕ್ರವಾರ ಮಧ್ಯಾಹ್ನ 3.30ರ ಸಮಯದಲ್ಲಿ ಒಂದನೇ ತರಗತಿಯ ಶಿಕ್ಷಕಿ ಮೇರಿ ಅವರು ಕೊಠಡಿಯಲ್ಲಿ ಪಾಠ ಪ್ರವಚನದಲ್ಲಿ ತೊಡಗಿದ್ದ ವೇಳೆ ಅವರಿಗೆ ಕಾಣಿಸಿಕೊಂಡ ನಾಗರಹಾವನ್ನು ನೋಡಿ ಗಾಬರಿಗೊಂಡು ಕೊಠಡಿಯಿಂದ ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿ ನಂತರ ಸ್ನೇಕ್ ಚಂದ್ರುರವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ವಿಷಯ ತಿಳಿದ ಕೂಡಲೇ ಚಂದ್ರುರವರು ಆಗಮಿಸಿ ಕೊಠಡಿಯ ಡಬ್ಬವೊಂದರಲ್ಲಿ ಅಡಗಿಕೊಂಡಿದ್ದ ನಾಗರಹಾವನ್ನು ಹಿಡಿದು ಭಯಭೀತರಾಗಿದ್ದ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರಿಗೆ ಧೈರ್ಯ ತುಂಬಿದರು.[ಭುಸ್ಸೆಂದ ನಾಗಪ್ಪ, ಮನೆಯೊಡತಿ ಲೀಲಾವತಿ ಉಸ್ಸಪ್ಪ!]
ನಾಗರಹಾವನ್ನು ವಿದ್ಯಾರ್ಥಿಗಳು ನೋಯಿಸಿದ್ದರೆ ಭಾರೀ ಅನಾಹುತವೇ ನಡೆದುಹೋಗುತ್ತಿತ್ತು, ಆದರೆ ಅದೃಷ್ಟವಶಾತ್ ಶಿಕ್ಷಕಿರವರು ಮೊದಲು ಹಾವನ್ನು ಗಮನಿಸಿದ್ದರಿಂದ ಯಾವುದೇ ಅನಾಹುತವಾಗದೆ ಪುಟ್ಟಪುಟ್ಟ ಮಕ್ಕಳು ಪ್ರಾಣಾಪಾಯದಿಂದ ಪಾರಾದರು.
ಶಾಲೆಯ ಕೊಠಡಿ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿರುವುದರಿಂದ ಈ ರೀತಿ ಹಾವುಗಳು ಬಂದು ಸೇರಿಕೊಳ್ಳುತ್ತವೆ ಎಂದು ಪ್ರತ್ಯಕ್ಷದರ್ಶಿಗಳು, ಗ್ರಾಮಸ್ಥರು ಆರೋಪಿಸಿದ್ದಾರೆ. ಗಿಡಗಂಟಿಗಳನ್ನು ತೆಗೆದು ವಿದ್ಯಾರ್ಥಿಗಳು ನಿರ್ಭಯವಾಗಿ ಶಾಲಾ ತರಗತಿಯಲ್ಲಿ ಕುಳಿತು ಪಾಠ ಕೇಳುವ ವಾತಾವರಣವನ್ನು ಸಂಬಂಧಿಸಿದವರು ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ.