ಮೈಸೂರು ಕಾಡಾನೆ ದಾಳಿಗೆ 9 ವರ್ಷ: ಇಂದಿಗೂ ಮೈಸೂರಿಗರು ಮರೆಯದ ಆ ಕಹಿ ಘಟನೆ!
ಮೈಸೂರು, ಜೂನ್ 8: ಆ ಘಟನೆ ನಡೆದು ಜೂನ್ 8 ಕ್ಕೆ ಬರೋಬ್ಬರಿ ಒಂಬತ್ತು ವರ್ಷಗಳಾಗುತ್ತಿದೆ. ಅಂದು ಇಡೀ ಮೈಸೂರು ನಗರ ಬೆಚ್ಚಿ ಬಿದ್ದಿತ್ತು. ಅಮಾಯಕ ಸೆಕ್ಯೂರಿಟಿ ಗಾರ್ಡ್ ಪ್ರಾಣ ಬಿಟ್ಟಿದ್ದ, ಹಸುವೂ ಅಸುನೀಗಿತ್ತು. ಕೆಲವರು ಪ್ರಾಣ ಉಳಿದರೆ ಸಾಕೆಂದು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದರು. ಬಂಬೂಬಜಾರ್ ನಿಂದ ಹೊರಟ ಪುಂಡಾನೆ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಐಎಂಎ ಕಟ್ಟಡದ ಆವರಣಕ್ಕೆ ನುಗ್ಗಿತ್ತು.
ಈ ಸಂದರ್ಭ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬನನ್ನು ಕಾಡಾನೆಯು ಸೊಂಡಿಲಿನಿಂದ ಎಳೆದು ಬಡಿಯಲು ಅದು ಮುಂದಾದಾಗ ಆತ ಪ್ರಾಣ ಭಯದಿಂದ ಕಟ್ಟಡವನ್ನು ಹತ್ತುವ ದೃಶ್ಯವನ್ನು ಪತ್ರಿಕೆ ಛಾಯಾಗ್ರಾಹಕ ಉದಯಶಂಕರ್ ಸೆರೆ ಹಿಡಿದಿದ್ದರು. ಇನ್ನು ಆಟೋವನ್ನು ಮಗುಚಿ ತನ್ನ ಸೇಡು ತೀರಿಸಿಕೊಳ್ಳುತ್ತಿರುವ ದೃಶ್ಯವನ್ನು ಹಂಪಾ ನಾಗರಾಜ್ ಸೆರೆ ಹಿಡಿದಿದ್ದರು. ಇಷ್ಟಕ್ಕೂ ಅವತ್ತು (ಜೂನ್ 8, 2011) ನಡೆದ ಆ ಘಟನೆಯಾದರೂ ಏನು? ಎಂಬ ಕುತೂಹಲವಿರುತ್ತದೆ. ಅಂದು ಏನು ನಡೆಯಿತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಡಿನಿಂದ ನಗರಕ್ಕೆ ನುಗ್ಗಿದ್ದ ಆನೆಗಳು
ಕಾಡಂಚಿನಲ್ಲಿ ಕೃಷಿ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿ ರೈತರ ಹಿಡಿಶಾಪಗಳಿಗೆ ಸೊಪ್ಪು ಹಾಕದೇ, ಪತ್ರಿಕೆಗಳಲ್ಲಿ ಸಿಂಗಲ್ ಕಾಲಂಗಷ್ಟೇ ಸೀಮಿತವಾಗಿದ್ದ ಕಾಡಾನೆ ಹಾವಳಿ ಸುದ್ದಿ ಅಂದು ಟಿವಿ ಮತ್ತು ಪತ್ರಿಕೆಗಳ ಮುಖಪುಟದ ಸುದ್ದಿಯಾಗುವುದರೊಂದಿಗೆ ಕಾಡಾನೆ ಹಾವಳಿ ಅಂದರೆ ಏನು ಎಂಬುವುದನ್ನು ಪಟ್ಟಣದ ಮಂದಿಗೂ ತೋರಿಸಿಕೊಟ್ಟಿತ್ತು.
ಬನ್ನೂರು ಕಡೆಯಿಂದ ಬಂದ ಎರಡು ಕಾಡಾನೆಗಳು ಮೈಸೂರು ನಗರವನ್ನು ಪ್ರವೇಶಿಸಿದ್ದವು. ಅದರಲ್ಲಿ ಒಂದು ಮರಿಯಾನೆ ನಗರದೊಳಕ್ಕೆ ಪ್ರವೇಶಿಸಿ, ಒಬ್ಬ ಸೆಕ್ಯೂರಿಟಿ ಗಾರ್ಡ್ ಹಾಗೂ ಹಸುವನ್ನು ಕೊಂದು ಹಾಕಿದ್ದಲ್ಲದೆ, ಹಲವಾರು ವಾಹನಗಳನ್ನು ಜಖಂಗೊಳಿಸಿ ಎಲ್ಲೆಂದರಲ್ಲಿ ದಾಂಧಲೆ ನಡೆಸಿತ್ತು.

ಕಾಡಾನೆ ಸಾಗಿದ ಹಾದಿ ಭಯಾನಕ
ಕಾಡಾನೆಯೊಂದು ನಗರ ಪ್ರವೇಶಿಸಿ ದಾಂಧಲೆ ನಡೆಸಿದ್ದು, ಪ್ರಥಮ ಬಾರಿಯಾಗಿದ್ದರಿಂದ ಅದೊಂದು ಮರೆಯಲಾಗದ ಐತಿಹಾಸಿಕ ಘಟನೆಯಾಗಿ ಉಳಿದಿತ್ತು. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜಾಣ್ಮೆಯಿಂದ ಚಿತ್ರಗಳನ್ನು ತೆಗೆದ ಛಾಯಾಗ್ರಾಹಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.
ಅಂದು ಬೆಳಿಗ್ಗೆ 5.30 ಕ್ಕೆ ಮೈಸೂರಿನ ಬಂಬೂಬಜಾರ್ ನಲ್ಲಿ ಕಾಣಿಸಿಕೊಂಡ ಕಾಡಾನೆ ಬಳಿಕ ಸಾಗಿದ ಹಾದಿ ಮಾತ್ರ ರೋಚಕ ಮಾತ್ರವಲ್ಲ ಭಯಾನಕವೂ ಆಗಿತ್ತು. ಹಾದಿಯುದ್ದಕ್ಕೂ ಅದು ನಡೆಸಿದ ದಾಂಧಲೆ ಮರೆಯುವಂತಿಲ್ಲ. ಈ ಸಂದರ್ಭದಲ್ಲಿ ಮೈಸೂರಿನ ಪತ್ರಿಕಾ ಛಾಯಾಗ್ರಾಹಕರು ಪ್ರಾಣವನ್ನೇ ಪಣಕ್ಕಿಟ್ಟು ತೆಗೆದ ಛಾಯಾಚಿತ್ರಗಳು ಅವರ ಸಾಹಸಕ್ಕೆ ಹಿಡಿದ ಕೈಗನ್ನಡಿ. ಅಷ್ಟೇ ಅಲ್ಲ, ವೃತ್ತಿ ಬದುಕಿನಲ್ಲಿ ಮರೆಯಲಾಗದ ಅನುಭವ. ಅವರ ಪಾಲಿಗೆ ಅದೊಂದು ಯುದ್ಧ ಗೆದ್ದ ಸಂಭ್ರಮ ಎಂದರೂ ತಪ್ಪಾಗಲಾರದು.

ವಿವಿಧ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ
ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸಾಗಿ ಮೋರ್ ಮಹಲ್ಗೆ ನುಗ್ಗಿದ ಸಂದರ್ಭದಲ್ಲಿದ್ದ ಮಂದಿ ಭಯಭೀತರಾಗಿ ಓಡುತ್ತಿರುವ ಚಿತ್ರವನ್ನು ನಂದನ್, ಸೆಕ್ಯೂರಿಟಿ ಗಾರ್ಡ್ನ್ನು ಕೋರೆಹಲ್ಲಿನಿಂದ ಚುಚ್ಚಿ ಸಾಯಿಸುತ್ತಿರುವ ಮನಕಲಕುವ ದೃಶ್ಯ ಹಾಗೂ ಮಹಾರಾಣಿ ಕಾಲೇಜಿನ ಆವರಣದಲ್ಲಿ ಓಡುತ್ತಿದ್ದ ಸಂದರ್ಭ ಅದರ ಚಿತ್ರವನ್ನು ತೆಗೆಯಲು ಪರದಾಡುವ ಛಾಯಾಗ್ರಾಹಕರ ಚಿತ್ರವನ್ನು ಮಧುಸೂಧನ್ ಸೆರೆ ಹಿಡಿದರೆ, ಮಹಾರಾಣಿ ಕಾಲೇಜು ರಸ್ತೆಯಲ್ಲಿ ಸಂಚಾರಿ ಪೊಲೀಸ್ ಅಧಿಕಾರಿ ಬೈಕ್ ನಲ್ಲಿ ತೆರಳುತ್ತಿದ್ದರೆ, ಅವರ ಹಿಂದೆ ಪರೇಡ್ ಮಾಡುವ ಕಾಡಾನೆಯನ್ನು ಕೃಷ್ಣೋಜಿರಾವ್, ಅರಿವಳಿಕೆ ಚುಚ್ಚು ಮದ್ದನ್ನು ನೀಡಲು ಹೋದ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಬರುತ್ತಿರುವ ದೃಶ್ಯ ಮಂಜುನಾಥ್ರವರ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ದಿಕ್ಕಾಪಾಲಾಗಿ ಜನ ಓಡಿ ತಪ್ಪಿಸಿಕೊಂಡಿದ್ದರು
ಅಗ್ನಿಶಾಮಕ ಠಾಣೆ ಬಳಿಯ ರಸ್ತೆಯಲ್ಲಿ ರಾಜಗಾಂಭೀರ್ಯವಾಗಿ ಆನೆ ನಡೆಯುತ್ತಿದ್ದರೆ, ಅದರ ಹಿಂದೆ ಕ್ಯಾಮರಾ ಹಿಡಿದು ಸಾಗುವ ಛಾಯಾಗ್ರಾಹಕರು, ಅರಣ್ಯ ಸಿಬ್ಬಂದಿಗಳ ಪೀಕಲಾಟದ ದೃಶ್ಯವನ್ನು ಅನುರಾಗ್ ಬಸವರಾಜ್ ಅವರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು. ಸುಸ್ತಾಗಿದ್ದಕ್ಕೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲೇನೋ ಎಂಬಂತೆ ಮೈದಾನದಲ್ಲಿ ನಿರಾಳ ನಡಿಗೆಯ ಚಿತ್ರವನ್ನು ಶ್ರೀರಾಂ, ಇನ್ನು ಕಾಲೇಜು ಆವರಣದಿಂದ ಹೊರಬರಲು ಕಾಂಪೌಂಡ್ ನ ಮೇಲೆ ಕಾಲಿಟ್ಟು ಜಂಪ್ ಮಾಡುತ್ತಿರುವ ಅಪರೂಪದ ದೃಶ್ಯವನ್ನು ನಾರಾಯಣ ಯಾದವ್, ಜೂನಿಯರ್ ಮಹಾರಾಣಿ ಕಾಲೇಜಿಗೆ ಹಾಕಿದ್ದ ಗೇಟನ್ನು ತಳ್ಳಲು ಯತ್ನಿಸಿದಾಗ ಅಲ್ಲಿದ್ದ ಕಾವಲುಗಾರ ಕಕ್ಕಾಬಿಕ್ಕಿಯಾಗಿರುವ ದೃಶ್ಯವನ್ನು ನಾಗೇಶ್ ಪಾಣತ್ತಲೆ ಸೆರೆ ಹಿಡಿದಿದ್ದರು.

ಇವತ್ತಿಗೂ ಮರೆಯದ ನೆನಪುಗಳು
ಸ್ವಿಮ್ಮಿಂಗ್ ಪೂಲ್ ರಸ್ತೆಯಲ್ಲಿ ಸಾಗುತ್ತಿರುವ ಚಿತ್ರವನ್ನು ಪ್ರಶಾಂತ್ ತೆಗೆದಿದ್ದರೆ, ಬಳಿಕ ದೋಬಿಘಾಟ್ ನ ಪೊದೆಯಲ್ಲಿ ಅಡಗಿ ಕುಳಿತ ದೃಶ್ಯ ಮತ್ತು ನಂತರದ ಬಂಧನದ ವಿವಿಧ ಹಂತಗಳನ್ನು ನೇತ್ರರಾಜು ಮತ್ತು ಸಾಕಾನೆಯ ಸಹಾಯದಿಂದ ಎಳೆದೊಯ್ಯುತ್ತಿರುವ ದೃಶ್ಯವನ್ನು ಚಂದ್ರು ಹೀಗೆ ನೂರಾರು ದೃಶ್ಯಗಳನ್ನು ಸೆರೆ ಹಿಡಿಯಲಾಗಿತ್ತು. ಬಂಬೂ ಬಜಾರ್ನಿಂದ ಆರಂಭಗೊಂಡು ಅದು ಸೆರೆಯಾಗುವ ತನಕ, ನಂತರ ಮಾರನೆಯ ದಿನ (ಜೂನ್ 9 ರಂದು) ಕೈಕಾಲು ಕಟ್ಟಿ ಲಾರಿಗೆ ಹತ್ತಿಸಿ ಬಂಡೀಪುರದ ಅರಣ್ಯಕ್ಕೆ ಬಿಡುವವರೆಗಿನ ಕ್ಷಣಗಳ ಚಿತ್ರಗಳು ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಈ ಚಿತ್ರಗಳು ಬಹಳಷ್ಟು ಕಡೆಗಳಲ್ಲಿ ನಡೆದ ಛಾಯಾಚಿತ್ರ ಪ್ರದರ್ಶನಗಳಲ್ಲಿಯೂ ಪ್ರದರ್ಶನಗೊಂಡಿವೆ. ಜತೆಗೆ ಪ್ರಶಸ್ತಿಯನ್ನು ತಂದುಕೊಟ್ಟಿವೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications