ಮೈಸೂರು ದಸರಾ ಟೈಮಲ್ಲಿ ಜೇಬಿಗೆ ಕತ್ತರಿ ಹಾಕಿದವರು ಎಷ್ಟು ಗೊತ್ತಾ?
ಮೈಸೂರು, ಅಕ್ಟೋಬರ್ 10: ವಿಶ್ವವಿಖ್ಯಾತ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಸೇರಿದ್ದರೆ, ಇದೇ ಸಂದರ್ಭ ಬಳಸಿಕೊಂಡು ಕಳ್ಳರೂ ಸಾಕಷ್ಟು ಕಮಾಯಿ ಮಾಡಿಕೊಂಡಿದ್ದಾರೆ. ದಸರಾ ವೇಳೆ ನಗರದಲ್ಲಿ ಒಟ್ಟು 56 ಕಳ್ಳತನದ ಪ್ರಕರಣಗಳು ವರದಿ ಆಗಿದ್ದು, ಯಾವೊಂದು ಪ್ರಕರಣದಲ್ಲೂ ಕಳ್ಳರು ಸ್ಥಳದಲ್ಲೇ ಸಿಕ್ಕಿಹಾಕಿಕೊಂಡಿಲ್ಲ.
ಜನಜಂಗುಳಿಯಲ್ಲಿ ಮೊಬೈಲ್ ಕಳವು ಹಾಗೂ ಪಿಕ್ ಪಾಕೆಟ್ ನಂತಹ ಪ್ರಕರಣಗಳು ನಡೆದಿದ್ದು, ಠಾಣೆಗಳಿಗೆ ಹೋಗಿ ಖುದ್ದು ದೂರು ನೀಡಲು ಸಾಧ್ಯವಾಗದ ಹೊರಗಿನವರು ಮಂಗಳವಾರ ರಾತ್ರಿ ಹಾಗೂ ಬುಧವಾರ ಆನ್ ಲೈನ್ ಮೂಲಕ ದೂರು ದಾಖಲಿಸಿದ್ದಾರೆ. ದೇವರಾಜ ಠಾಣೆಯಲ್ಲಿ 25, ಲಷ್ಕರ್ ಠಾಣೆ ವ್ಯಾಪ್ತಿಯಲ್ಲಿ 15, ಮಂಡಿ ಹಾಗೂ ಕೆ.ಆರ್ ಠಾಣೆಗಳಲ್ಲಿ ತಲಾ 8 ಪ್ರಕರಣಗಳು ದಾಖಲಾಗಿವೆ.
ನೂಕು ನುಗ್ಗಲಿನಲ್ಲಿ ಕೆಲವರ ಮೊಬೈಲ್ ಫೋನುಗಳು ನಾಪತ್ತೆಯಾಗಿವೆ. ಇನ್ನೂ ಕೆಲವು ಖದೀಮರು ಜೇಬಿಗೆ ಕತ್ತರಿ ಹಾಕಿ ಹಣ ಎಗರಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಆನ್ ಲೈನ್ ನಲ್ಲಿ ನೀಡಿರುವ ದೂರುಗಳನ್ನು ವರ್ಗೀಕರಿಸಿ, ಆಯಾ ವ್ಯಾಪ್ತಿಯ ಪೊಲೀಸ್ ಠಾಣೆ ಗಳಿಗೆ ವಹಿಸಿದ್ದಾರೆ. ಠಾಣಾ ವ್ಯಾಪ್ತಿಯ ಪೊಲೀಸರು ತನಿಖೆ ನಡೆಸುತ್ತಿದ್ದು, ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಿ ಸುಳಿವಿನ ಜಾಡು ಹಿಡಿದು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ವಿಜಯದಶಮಿ ಮೆರವಣಿಗೆ ವೀಕ್ಷಿಸುವ ವೇಳೆ ಸಮಯ ಸಾಧಿಸಿದ ಕಳ್ಳರು ಹಲವರ ಮೊಬೈಲ್, ಪರ್ಸ್ ಎಗರಿಸಿದ್ದರೆ, ಇನ್ನು ಕೆಲವರು ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ಆಹಾರ ಮೇಳಗಳಂತಹ ಜನಜಂಗುಳಿ ಇರುವ ಸ್ಥಳಗಳಲ್ಲಿ ಖದೀಮರು ಹೊಂಚು ಹಾಕಿ ಕಳ್ಳತನ ಮಾಡಿದ್ದಾರೆ. ಜನರು ತಮ್ಮ ಮೊಬೈಲ್, ಪರ್ಸ್, ಆಭರಣಗಳ ಮೇಲೆ ನಿಗಾ ಇಟ್ಟುಕೊಳ್ಳುವಂತೆ ಪೊಲೀಸರೂ ಸಲಹೆ ನೀಡುತ್ತಿದ್ದರು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ, ಸಿಸಿ ಟಿವಿ ಕ್ಯಾಮರಾಗಳು ಇದ್ದಾಗ್ಯೂ, ಖದೀಮರು ಹೊಂಚು ಹಾಕಿ ಕೈ ಚಳಕ ತೋರಿದ್ದಾರೆ.












Click it and Unblock the Notifications