ವೇಣುಗೋಪಾಲ್ ಅವರಿಗೆ ವಿಶ್ವನಾಥ್ ಬರೆದ ಪತ್ರದಲ್ಲೇನಿದೆ?
ಕಾಂಗ್ರೆಸ್ ಮಾಜಿ ಸಂಸದ ಎಚ್.ವಿಶ್ವನಾಥ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗೆ ಬರೆದ ಪತ್ರದ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಆ ಪತ್ರದಲ್ಲೇನಿದೆ ಎಂಬ ಬಗ್ಗೆ 'ಒನ್ ಇಂಡಿಯಾ' ನಿಮಗಾಗಿ ಸಂಪೂರ್ಣ ಮಾಹಿತಿ ನೀಡಿದೆ.
ಮೈಸೂರು, ಮೇ 9 : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಎಚ್. ವಿಶ್ವನಾಥ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, 'ನಾನು ಕಾಂಗ್ರೆಸ್ ಗೆ ವಿದಾಯ ಹೇಳಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ.
ಮೂರು ಪುಟಗಳ ಪತ್ರದಲ್ಲಿ ವಿಶ್ವನಾಥ್ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ, 'ನಾನು ವಿದ್ಯಾರ್ಥಿಯಾಗಿದ್ದ ದಿನಗಳಿಂದ ಕಾಂಗ್ರೆಸ್ನಲ್ಲಿದ್ದೇನೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ. ಸಿಎಂ ಸಿದ್ದರಾಮಯ್ಯ ವರ್ತನೆ ಸರಿಯಿಲ್ಲ. ಸಿಎಂ ವರ್ತನೆಯಿಂದ ಅನೇಕ ಹಿರಿಯ ಕಾಂಗ್ರೆಸಿಗರು ಪಕ್ಷ ಬಿಟ್ಟಿದ್ದಾರೆ. ಇನ್ನೂ ಅನೇಕ ಮುಖಂಡರು, ಶಾಸಕರು ಪಕ್ಷ ಬಿಡಲಿದ್ದಾರೆ. ಸಿಎಂ ನನ್ನನ್ನ ಕಡೆಗಣಿಸಿದ್ದಾರೆ, ಅವಮಾನಿಸಿದ್ದಾರೆ. ಇವೆಲ್ಲ ವಿದ್ಯಮಾನಗಳಿಂದ ಮನನೊಂದಿದ್ದೇನೆ. ಈ ಎಲ್ಲ ವಿಚಾರದಿಂದಾಗಿ ನಾನು ಕೂಡಾ ಕಾಂಗ್ರೆಸ್ ತೊರೆಯಬೇಕು ಎಂದು ನಿರ್ಧರಿಸಿದ್ದೇನೆ' ಎಂದು ವಿಶ್ವನಾಥ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.[ವಿಶ್ವನಾಥ್ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ]
ಸಿದ್ದರಾಮಯ್ಯನವರ ದುರಹಂಕಾರದಿಂದಾಗಿ ಇಂದು ಹಲವು ಪ್ರಮುಖ ನಾಯಕರು ಕಾಂಗ್ರೆಸ್ ತೊರೆದಿದ್ದಾರೆ ಎಂದು ಅವರು ಸಿದ್ದರಾಮಯ್ಯನವರನ್ನು ನೇರವಾಗಿ ದೂರಿದ್ದಾರೆ.[ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದ ಎಚ್.ವಿಶ್ವನಾಥ್]
ನನಗೆ ಕಣ್ಣು, ಬಾಯಿ ಮುಚ್ಚಿಕೊಳ್ಳೋಕೆ ಸಾಧ್ಯವಿಲ್ಲ!
ನಾನು ಎಐಸಿಸಿ ಮತ್ತು ಕೆಪಿಸಿಸಿ ಸದಸ್ಯನಾಗಿದ್ದರೂ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನವಿಲ್ಲ. ಸಕಾರಣವಿಲ್ಲದೆ ನನ್ನ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯಿತು. ಸಿದ್ದರಾಮಯ್ಯ ಅವರ ದುರಹಂಕಾರದ ಸ್ವಭಾವದಿಂದ ಹಲವು ನಾಯಕರು ಕಾಂಗ್ರೆಸ್ ತೊರೆದಿದ್ದಾರೆ. ಹಾಲಿ ಶಾಸಕರು ಸೇರಿದಂತೆ ಕೆಲವರು ಪಕ್ಷ ತೊರೆಯಲು ಸಿದ್ದರಾಗಿದ್ದಾರೆ. ನನ್ನ ಬಗ್ಗೆ ಮುಖ್ಯಮಂತ್ರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ನಾನೂ ಕಾಂಗ್ರೆಸ್ ತೊರೆಯಬಹುದು. ನಾನು ಕಣ್ಣು ಮತ್ತು ಕಿವಿ ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.[ಮೇ 10 ರಂದು ಎಚ್.ವಿಶ್ವನಾಥ್ ಜೆಡಿಎಸ್ ಗೆ?!]
ಕೆಲವರು ಮನೋರಂಜನೆಗಾಗಿ ಅಧಿಕಾರ ಹಿಡಿದಿದ್ದಾರೆ!
ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇಲ್ಲ. ಸಚಿವರು ಸಿಎಂ ಜೊತೆ ಹೊಂದಾಣಿಕೆ ಇಲ್ಲ. ಹಿರಿಯ ಕಾಂಗ್ರೆಸ್ ನಾಯಕರ ಸಲಹೆಗಳನ್ನು ಪ್ರಮುಖ ವಿಚಾರಗಳಲ್ಲಿ ತೆಗೆದುಕೊಂಡಿಲ್ಲ. ಕೇವಲ ಎಂಜಾಯ್ ಮಾಡೋಕೆ ಅಧಿಕಾರ ಹಿಡಿದಿದ್ದಾರೆ ಎಂದು ಹಲವು ಕಾಂಗ್ರೆಸ್ ಮುಖಂಡರಿಗೆ ಪತ್ರದಲ್ಲಿ ವಿಶ್ವನಾಥ್ ಪರೋಕ್ಷ ಟಾಂಗ್ ನೀಡಿದ್ದಾರೆ. [ಮಾಜಿ ಸಂಸದ ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ?]
ಸರ್ಕಾರದ ಮೌನ ಅಸಹನೀಯ
ಅನೇಕ ಸಚಿವರ ಮೇಲೆ ಕ್ರಿಮಿನಲ್ ಅಪರಾಧಗಳಿದ್ರೂ ಸರ್ಕಾರ ಮೌನವಾಗಿ ಕುಳಿತಿದೆ. ಇಂತಹ ಸಚಿವರಿಂದ ಪಕ್ಷದ, ಸರ್ಕಾರದ ಹೆಸರು ಕೆಟ್ಟಿದೆ. 4 ವರ್ಷಗಳಿಂದ ಪಕ್ಷಕ್ಕೆ ಸಾಕಷ್ಟು ಮುಜುಗರವಾಗಿದೆ ಎಂದು ಸಿಎಂ ಆಡಳಿತ ವೈಖರಿ ವಿರುದ್ಧ ವಿಶ್ವನಾಥ್ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ಕೆ.ಸಿ. ವೇಣುಗೋಪಾಲ್ ಮಾತುಕತೆ
ಸೋಮವಾರದಂದೇ ಕೆ.ಸಿ. ವೇಣುಗೋಪಾಲ್ ಅವರಿಗೆ ವಿಶ್ವನಾಥ್ ಪತ್ರ ಬರೆದಿದ್ದಾರೆ. ನಿನ್ನೆ ಪಕ್ಷದ ಪದಾಧಿಕಾರಿಗಳ ಜೊತೆಗೆ ವೇಣುಗೋಪಾಲ್ ಮಾತುಕತೆ ನಡೆಸಿದ್ದರು. ಇಂದು ಶಾಸಕರು, ಸಚಿವರು ಹಾಗೂ ಮಾಜಿ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದು, ಮುಂದಿನ ನಡೆಯ ಬಗ್ಗೆ ಪಕ್ಷದ ಕಾರ್ಯಕರ್ತಲ್ಲಿ ಕುತೂಹಲ ಮೂಡಿಸಿದೆ. ಇದಲ್ಲದೆ ಪಕ್ಷದ ಪ್ರಮುಖರಾದ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್ ಮುಂತಾದವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಎಚ್. ವಿಶ್ವನಾಥ್ ಜೆಡಿಎಸ್ ಗೆ?
ಅಕಸ್ಮಾತ್ ಎಚ್. ವಿಶ್ವನಾಥ್ ನಿರ್ಧರಿಸಿದಂತೆ ಕಾಂಗ್ರೆಸ್ ತೊರೆದದ್ದೇ ಆದರೆ ಅವರ ಮುಂದೆ ನಡೆ ಏನು? ಈಗಾಗಲೇ ಅವರು ಜೆಡಿಎಸ್ ಸೇರುವ ಬಗ್ಗೆ ವದಂತಿ ಹರಡಿದ್ದು, ಜೆಡಿಎಸ್ ನಾಯಕರು ಸಹ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.ಉನ್ನತ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಮೇ 11 ರಂದು ವಿಶ್ವನಾಥ್ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಜೆಡಿಎಸ್ ಸೇರಲಿದ್ದಾರೆ ಎಂದು ಈ ಮೊದಲು ಒನ್ ಇಂಡಿಯಾ ವರದಿ ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು.