Yes Bank ಸ್ಥಾಪಕ ರಾಣಾ ಕಪೂರ್ ವಶಕ್ಕೆ ಪಡೆದ ಇಡಿ
ಮುಂಬೈ, ಮಾರ್ಚ್ 7: ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಂಬಂಧಿಸಿದಂತೆ ಯೆಸ್ ಬ್ಯಾಂಕ್ನ ಸ್ಥಾಪಕ ರಾಣಾ ಕಪೂರ್ ಅವರ ಮುಂಬೈ ನಿವಾಸವನ್ನು ಮುಂಬೈ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಶುಕ್ರವಾರ ಸಂಜೆಯಷ್ಟೇ ತಪಾಸಣೆ ನಡೆಸಿದ್ದರು. ಶನಿವಾರ ಬೆಳಿಗ್ಗೆ ರಾಣಾ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಯೆಸ್ ಬ್ಯಾಂಕ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಬೇಕು ಎಂದು ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಇಡಿ ಅಧಿಕಾರಿಗಳು ರಾಣಾ ಕಪೂರ್ ವಿಚಾರಣೆ ನಡೆಸುತ್ತಿದ್ದು, ಅವರ ವಿರುದ್ಧ ದೇಶ ಬಿಟ್ಟು ಪರಾರಿಯಾಗದಂತೆ ಲುಕ್ ಔಟ್ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ.
ಶುಕ್ರವಾರ ಸಂಜೆ ನವಿ ಮುಂಬೈನ ರಾಣಾ ಅವರ ಐಷಾರಾಮಿ ಮನೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ತಡರಾತ್ರಿವರೆಗೂ ತಪಾಸಣೆ ಮುಂದುವರೆದಿತ್ತು.
ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟ; ತಿರುಪತಿ ತಿಮ್ಮಪ್ಪನಿಗೆ ಮೊದಲೇ ಗೊತ್ತಿತ್ತಾ?
ದೇಶದ ಬ್ಯಾಂಕಿಂಗ್ ವಲಯದಲ್ಲಿ ಯೆಸ್ ಬ್ಯಾಂಕ್ ಬಿರುಗಾಳಿ ಎಬ್ಬಿಸಿದೆ. ಯೆಸ್ ಬ್ಯಾಂಕ್ ದಿವಾಳಿಯಿಂದ ಬ್ಯಾಂಕ್ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬ್ಯಾಂಕ್ ಠೇವಣಿದಾರರು ತಮ್ಮ ಹಣ ವಾಪಸ್ ಸಿಗುತ್ತೋ ಇಲ್ಲವೋ ಎಂದು ಚಿಂತಾಕ್ರಾಂತರಾಗಿದ್ದಾರೆ.
ಎಲ್ಲಾ ಖಾತೆಗಳನ್ನೂ ಒಳಗೊಂಡಂತೆ ಬ್ಯಾಂಕ್ ಗ್ರಾಹಕರು ಮಾರ್ಚ್ 31 ರ ವರಗೆ ಕೇವಲ 50 ಸಾವಿರ ರುಪಾಯಿಗಳನ್ನು ಮಾತ್ರ ಹಿಂತೆಗೆಯಬೇಕು ಎಂದು ಆರ್ಬಿಐ ಹೇಳಿದೆ. ಸದ್ಯ ನಡೆದಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಶ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್ಬಿಐ ವಜಾಗೊಳಿಸಿದೆ. ಎಸ್ಬಿಐನ ಮಾಜಿ ಸಿಎಫ್ ಓ ಪ್ರಶಾಂತ್ ಕುಮಾರ್ ಅವರನ್ನು ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಯಶ್ ಬ್ಯಾಂಕ್ನ್ನು ಎಸ್ಬಿಐನೊಂದಿಗೆ ವಿಲೀನ ಮಾಡಲಾಗುತ್ತಿದೆ ಎನ್ನಲಾಗಿದೆ.