'ಮಂದಿರ ಅಲ್ಲೇ ಮಾಡ್ತೀವಿ ಅಂತ ಇನ್ನೆಷ್ಟು ಕಾಲ ಜನರನ್ನು ಮೂರ್ಖರನ್ನಾಗಿ ಮಾಡ್ತೀರಿ?'
ಮುಂಬೈ, ನವೆಂಬರ್ 22: ರಾಮಮಂದಿರ ವಿವಾದ ಪ್ರತಿ ಚುನಾವಣೆಗೆ ಮುನ್ನ ಕಾವು ಪಡೆದುಕೊಳ್ಳುತ್ತದೆ ಮತ್ತು ಅಚ್ಚರಿ ಏನೆಂದರೆ, ಎಷ್ಟು ಸಮಯ 'ಮಂದಿರ ಅಲ್ಲೇ ಮಾಡ್ತೀವಿ' ಎಂದು ಘೋಷಿಸಿ ಜನರನ್ನು 'ಮೂರ್ಖರನ್ನಾಗಿ' ಮಾಡ್ತೀರಿ ಎಂದು ಶಿವಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಶ್ನೆ ಮಾಡಿದ್ದಾರೆ.
ನವೆಂಬರ್ 25ನೇ ತಾರೀಕು ಅಯೋಧ್ಯೆಗೆ ಭೇಟಿ ನೀಡುವ ವೇಳೆ "ಉತ್ತರವನ್ನು ಕೇಳ್ತೀನಿ": ಇನ್ನೂ ಎಷ್ಟು ಚುನಾವಣೆಗಳಲ್ಲಿ ಹೀಗೆ ಈ ಘೋಷಣೆಯೊಂದಿಗೆ ಜನರನ್ನು ಮೂರ್ಖರನ್ನಾಗಿ ಮಾಡ್ತೀರಿ? ಎಂದಿದ್ದಾರೆ ಉದ್ಧವ್ ಠಾಕ್ರೆ. ಪುಣೆ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಹುಟ್ಟಿದ ಶಿವನೇರಿ ಕೋಟೆಯಿಂದ ಮಣ್ಣು ಸಂಗ್ರಹಿಸಿದ ಅವರು, ನವೆಂಬರ್ 25ರಂದು ಅಯೋಧ್ಯೆಗೆ ಈ ಮಣ್ಣು ತೆಗೆದುಕೊಂಡು ಹೋಗುತ್ತೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಮುಂಬೈನಲ್ಲಿ ನಡೆದಿದ್ದ ಶಿವಸೇನಾ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಠಾಕ್ರೆ, ನವೆಂಬರ್ 25ನೇ ತಾರೀಕು ಅಯೋಧ್ಯೆಗೆ ಭೇಟಿ ನೀಡುತ್ತೇನೆ. ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಪ್ರಶ್ನೆ' ಮಾಡುತ್ತೇನೆ ಎಂದು ಅವರು ಹೇಳಿದ್ದರು.

ಎಷ್ಟು ಸಮಯ ಜನರನ್ನು ಮೂರ್ಖರನ್ನಾಗಿ ಮಾಡ್ತೀರಿ?
"ಹಿಂದೂಗಳ ಭಾವನೆ ಜತೆಗೆ ಛತ್ರಪತಿ ಶಿವಾಜಿ ಮಹಾರಾಜ್ ಜನಿಸಿದ ಮಣ್ಣು ಹಾಗೂ ಈ ಭಾವನೆಗಳೆಲ್ಲ ಒಟ್ಟು ಸೇರಿ ರಾಮ ಮಂದಿರ ನಿರ್ಮಾಣದ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಕಾವು ಪಡೆದುಕೊಳ್ಳುತ್ತದೆ. ಇನ್ನೂ ಎಷ್ಟು ಚುನಾವಣೆಗಳಲ್ಲಿ 'ಅಲ್ಲೇ ಮಂದಿರ ಕಟ್ಟುತ್ತೇವೆ' ಎಂದು ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಿ" ಎಂದು ಅವರು ಹೇಳಿದ್ದರು.

ರಾಮನ ಆಶೀರ್ವಾದ ಪಡೆಯಲು ಹೋಗ್ತಿದೀನಿ
ಅಯೋಧ್ಯಾದಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಸ್ಥಳದಲ್ಲಿ ರಾಮ ಮಂದಿರ ಕಟ್ಟುವ ಗುರಿ ಇಟ್ಟುಕೊಂಡಿರುವ ಹಿಂದೂ ಗುಂಪುಗಳು ಈಗಲೂ ಅದೇ ಘೋಷವಾಕ್ಯಗಳನ್ನು ಹೇಳುತ್ತಿವೆ ಎಂದಿದ್ದಾರೆ. ಅಯೋಧ್ಯೆಯಲ್ಲಿ ಸಭೆಗೆ ಅನುಮತಿ ಪಡೆಯಲಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಠಾಕ್ರೆ, ಮುಖ್ಯವಾಗಿ ಅಯೋಧ್ಯಾದಲ್ಲಿ ರಾಮನ ಆಶೀರ್ವಾದ ಪಡೆಯುವುದು ಸೇರಿ ಕೆಲ ಕಾರ್ಯಕ್ರಮಗಳಿವೆ ಎಂದಿದ್ದಾರೆ ಠಾಕ್ರೆ.

ಮಂದಿರ ನಿರ್ಮಾಣ ಅಭಿಯಾನಕ್ಕೆ ವೇಗ ಪಡೆಯಬೇಕು
ಆ ಸ್ಥಳವನ್ನು ಭೇಟಿ ಆಗಬೇಕು ಎಂದು ಸಾಧು-ಸನ್ಯಾಸಿಗಳು ತಮ್ಮ ಆಸೆ ಹೇಳಿಕೊಂಡಿದ್ದಾರೆ. ಆದ್ದರಿಂದ ಅವರ ಆಶೀರ್ವಾದ ಪಡೆಯುತ್ತೇನೆ ಮತ್ತು ಸಂಜೆ ವೇಳೆ ಸರಯೂ ನದಿ ದಡದಲ್ಲಿ ನಡೆಯುವ ಆರತಿಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಠಾಕ್ರೆ ಹೇಳಿದ್ದಾರೆ. ಇನ್ನು ರಾಮಮಂದಿರ ನಿರ್ಮಾಣ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕು ಎಂಬ ಕಾರಣಕ್ಕೆ 'ಮೊದಲ ಮಂದಿರ, ನಂತರ ಸರಕಾರ' ಎಂಬ ಹೊಸ ಘೋಷ ವಾಕ್ಯವನ್ನು ಠಾಕ್ರೆ ಶುರು ಮಾಡಿದ್ದಾರೆ.

ಕಾರ್ಯಕರ್ತರಿಗಾಗಿ ಅಯೋಧ್ಯೆಗೆ ರೈಲು ಟಿಕೆಟ್ ಬುಕ್
ಶಿವಸೇನಾದ ಪದಾಧಿಕಾರಿಗಳು ಮಾತನಾಡಿ, ಉದ್ಧವ್ ಠಾಕ್ರೆ ಅಯೋಧ್ಯಾ ಭೇಟಿ ವೇಳೆ ಪಕ್ಷದ ಕಾರ್ಯಕರ್ತರಿಗಾಗಿ ರೈಲು ಬುಕ್ ಮಾಡಲಾಗಿದೆ. ಪಕ್ಷದ ಕಾರ್ಯಕರ್ತೆಯರು, ಯುವಸೇನಾ ಕಾರ್ಯಕರ್ತರಿಗೆ ಅಯೋಧ್ಯಾಗೆ ಬಾರದಿರುವಂತೆ ಸೂಚಿಸಲಾಗಿದೆ. ಅವರಿಗೆ ಅಯೋಧ್ಯೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಈ ನಿರ್ಧಾರಕ್ಕೆ ಬರಲಾಗಿದೆ.












Click it and Unblock the Notifications