ರಾಹುಲ್ ಗಾಂಧಿ ಸೂಚನೆ: ಮೇ 28ಕ್ಕೆ ರಾಜೀನಾಮೆ ನೀಡಲು ಮುಂದಾದ ಸಿದ್ದರಾಮಯ್ಯ? ಡಿಕೆಶಿಗೆ ಸಿಎಂ ಪಟ್ಟ!
ಬೆಂಗಳೂರು: ತೀವ್ರ ಕುತೂಹಲ ಕೆರಳಸಿದ್ದ ಕರ್ನಾಟಕ ನಾಯಕತ್ವ ಬದಲಾವಣೆ ಗೊಂದಲಕ್ಕೆ ಇದೇ ಮೇ 28ಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಸಿಎಂ ಕುರ್ಚಿ ಹಗ್ಗ ಜಗ್ಗಾಟಕ್ಕೆ ಮುಕ್ತಿ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಸಿಎಂ ಬದಲಾವಣೆಗೆ ಒಲವು ಹೊಂದಿದೆ ಎನ್ನಲಾಗಿದೆ. ಹಾಗಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಯಾರು ಕೂರುತ್ತಾರೆ ಎಂಬುದು ಒಂದೆಡೆಯಾದರೆ, ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು? ಹೈಕಮಾಂಡ್ ಆಫರ್ ಗೆ ಸಹಮತ ನೀಡುತ್ತಾರಾ? ಎಂಬುದಕ್ಕೆ ಉತ್ತರ ಸಿಗಬೇಕಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಂದು ನಡೆಸಿದ ಸರಣಿ ಸಭೆಯಗಳ ಬಳಿಕ ರಾಜ್ಯದ 'ಮುಂದಿನ ಸಿಎಂ ಯಾರು?' ಎಂಬ ಪ್ರಶ್ನೆಗೆ ಉತ್ತರ ದೊರೆತಂತಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ವರಿಷ್ಠರ ಸ್ಥಾನ ತೊರೆಯುವಂತೆ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಇದೇ ಮೇ 28ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಸಿಎಂ ರೇಸಿನಲ್ಲಿ ಇನ್ನೊಬ್ಬರ ಹೆಸರು ಕೇಳಿ ಬರುತ್ತಿದೆ.

ಬುಧವಾರ ಬೆಂಗಳೂರಿಗೆ ಪ್ರಮುಖರ ಆಗಮನ, ಮತ್ತೆ ಸಭೆ?
ದೆಹಲಿ ಹೈವೋಲ್ಟೇಜ್ ಸಭೆ ಬಳಿಕ ಇಂದು ರಾತ್ರಿಯೇ ಆಪ್ತ ಸಚಿವರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರು ನಾಳೆ ಬುಧವಾರ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಮಾತ್ರವಲ್ಲದೇ ಬೆಂಗಳೂರಿಗೆ ನಾಳೆ ಕಾಂಗ್ರೆಸ್ ವರಿಷ್ಠರಾದ ರಣದೀಪ್ ಸುರ್ಜೇವಾಲ, ಕೆ.ಸಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸಲಿದ್ದು ಪ್ರಮುಖ ನಾಯಕರೊಂದಿಗೆ ಮತ್ತೆ ಮಹತ್ವದ ಸಭೆ ನಡೆಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಮುಂದಾಗಿದೆ. ಯಾವುದೇ ಗೊಂದಲ ಇಲ್ಲದಂತೆ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸಿ ಸುಗಮ ಆಡಳಿತ ನಡೆಸಲು ನಿರ್ಧರಿಸಿದ್ದು, ಸಿಎಂ ಪಟ್ಟವನ್ನು ಡಿಕೆ ಶಿವಕುಮಾರ್ ಅವರಿಗೆ ಕಟ್ಟಲು ಹೈಕಮಾಂಡ್ ಮುಂದಾಗಿದೆ ಎಂದು ತಿಳಿದು ಬಂದಿದೆ.
ಮೂರು ವರ್ಷಗಳ ಸರ್ಕಾರ ರಚನೆ ಆಗುವ ವೇಳೆ ನೀಡಿದ ಒಪ್ಪಂದಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅವರು ಇದೇ ಮೇ 28ರಂದು ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಹಾಗಾದರೆ ಸಿದ್ದರಾಮಯ್ಯ ಅವರು ಮುಂದಿನ ನಡೆ ಏನು? ಎಂಬುದರ ಮೇಲೆ ಕುತೂಹಲ ಮೂಡಿಸಿದೆ.
ದೆಹಲಿಯಲ್ಲಿ ಆಪ್ತರೊಂದಿಗೆ ಕೆಜೆ ಜಾರ್ಜ್ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚರ್ಚಿಸಿದ್ದಾರೆ. ಬಳಿಕ ಅಧಿಕಾರ ಬಿಟ್ಟುಕೊಡುವ ಒಲವು ಇಲ್ಲದಿದ್ದರೂ ಅವರು ಹೈಕಮಾಂಡ್ ನಿರ್ದೇಶನ ಪಾಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಬೆನ್ನಲ್ಲೆ ಅವರು ರಾಜ್ಯಸಭಾ ಆಫರ್ಗೆ ಸಹಮತ ನೀಡುತ್ತಾರೆಯೇ? ಎಂಬುದರ ಕುರಿತು ಇನ್ನಷ್ಟು ಮಾಹಿತಿಗಳು ಸಿಗಬೇಕಿದೆ.
ಡಿಕೆ ಶಿವಕುಮಾರ್ ಗೆ ಸಿಎಂ ಪಟ್ಟ: ಹೈಕಮಾಂಡ್ ಒಲವು
ಮೂಲಗಳ ಪ್ರಕಾರ ಅಧಿಕಾರ ಹಂಚಿಕೆ ಒಪ್ಪಂದದಂತೆ ಸಿದ್ದರಾಮಯ್ಯ ಅವರು ಅಧಿಕಾರದಿಂದ ಇಳಿದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕದ ಸಿಎಂ ಪಟ್ಟ ಕಟ್ಟಲು ಹೈಕಮಾಂಡ್ ಒಲವು ಹೊಂದಿದೆ. ಡಿಕೆಶಿ ಅವರ ಮೂರು ವರ್ಷಗಳ ಅವಿರತ ಕಸರತ್ತು, ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಂತಾಗಲಿದೆ. ದೆಹಲಿ ಸಭೆಯಲ್ಲಿ ವರಿಷ್ಠರ ಮುಂದೆ ಡಿಕೆ ಶಿವಕುಮಾರ್ ಅಧಿಕಾರ ಹಂಚಿಕೆ ಪಟ್ಟು ಸಡಿಲಿಸದೇ ಸರ್ಕಾರ ರಚನೆ ಮುನ್ನ ಕೊಟ್ಟ ಮಾತನ್ನು ನೆರವೇರಿಸುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಕರ್ನಾಟಕದ ಸಿಎಂ ರೇಸಿನಲ್ಲಿ ಡಿಕೆ ಶಿವಕುಮಾರ್ ಅವರೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಸರು ಸಹ ಓಡಾಡುತ್ತಿವೆ. ಪರಮೇಶ್ವರ್ ಅವರಿಗೂ ಮುಖ್ಯಮಂತ್ರಿ ಪಟ್ಟ ಸಿಗುವ ನಿರೀಕ್ಷೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಸಿಎಂ ಗಾದಿಗೆ ಆಸೆಪಟ್ಟಿದ್ದಾರೆಂದು ಅವರ ಹೆಸರು ಕೇಳಿ ಬಂದಿತ್ತು. ಮುಂದಿನ ಒಂದೆರಡು ದಿನಗಳಲ್ಲಿ ನಾಯಕತ್ವ ಬದಲಾವಣೆ ಕುರಿತು ಅಧಿಕೃತ ಮಾಹಿತಿ ಹೊರ ಬೀಳಲಿದ್ದು, ನಾಯಕತ್ವ ಗೊಂದಲ ಶಾಶ್ವತವಾಗಿ ನಿವಾರಣೆಯಾಗುವ ಸಂಭವವಿದೆ.













Click it and Unblock the Notifications