ಆರ್ಸಿಬಿ ಕೇವಲ ವಿರಾಟ್ ಕೊಹ್ಲಿ ಮೇಲೆ ಅವಲಂಬಿತವಾಗಿಲ್ಲ: ಭಾರತದ ಮಾಜಿ ಕ್ರಿಕೆಟರ್
IPL 2026 RCB: ಐಪಿಎಲ್ 2026ರ ಸೀಸನ್ ಮುಕ್ತಾಯದ ಹಂತದಲ್ಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಗಿವೆ. ಈ ವೇಳೆಯೇ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಆರ್ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಕುರಿತು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಮಂಗಳವಾರ (ಮೇ 26) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಹೈ-ವೋಲ್ಟೇಜ್ ಕ್ವಾಲಿಫೈಯರ್ 1 ಪಂದ್ಯವು ಧರ್ಮಶಾಲಾದ ಹೆಚ್ಪಿಸಿಎ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಮಂಜ್ರೇಕರ್ ಹೇಳಿದ್ದೇನು?
ಸ್ಪೋರ್ಟ್ಸ್ಸ್ಟಾರ್ ಜೊತೆ ಮಾತನಾಡಿದ ಅವರು, 'ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಪ್ರಮುಖ ಆಟಗಾರ ಆಗಿರಬಹುದು. ಆದರೆ ತಂಡದ ಸಂಪೂರ್ಣ ಜವಾಬ್ದಾರಿ ಅವರೊಬ್ಬರ ಮೇಲೆಯೇ ಅವಲಂಬಿತವಾಗಿಲ್ಲ. ಇಡೀ ತಂಡವಾಗಿ ಪ್ರದರ್ಶನ ನೀಡುತ್ತಿರುವುದೇ ಈ ಬಾರಿ ಆರ್ಸಿಬಿಯನ್ನು ಒಂದು ಅತ್ಯುತ್ತಮ ತಂಡವನ್ನಾಗಿ ಮಾಡಿದೆ. ಒಂದು ವೇಳೆ ಕೊಹ್ಲಿ ಎಲ್ಲ ಜವಾಬ್ದಾರಿಯನ್ನು ತಮ್ಮ ಮೇಲೆ ಹೇರಿಕೊಂಡರೆ ಅದು ತಂಡಕ್ಕೆ ಸಮಸ್ಯೆಯಾಗಬಹುದು,' ಎಂದು ಮಂಜ್ರೇಕರ್ ಅವರು ಹೇಳಿದ್ದಾರೆ.
ಉತ್ತಮ ಫಾರ್ಮ್ನಲ್ಲಿರುವ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಈ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಆಡಿರುವ 14 ಲೀಗ್ ಪಂದ್ಯಗಳಲ್ಲಿ 50.63ರ ಸರಾಸರಿಯಲ್ಲಿ 557 ರನ್ ಸಿಡಿಸಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ವಿರುದ್ಧವೂ ಕೊಹ್ಲಿ ಅಮೋಘ ದಾಖಲೆಯನ್ನು ಹೊಂದಿದ್ದು, ಕೇವಲ 8 ಪಂದ್ಯಗಳಲ್ಲಿ 76.66ರ ಸರಾಸರಿಯಲ್ಲಿ 460 ರನ್ ಕಲೆಹಾಕಿದ್ದಾರೆ.
'ಆರ್ಸಿಬಿ ಯಶಸ್ಸು ಕೇವಲ ಕೊಹ್ಲಿ ಕೈಯಲಿಲ್ಲ'
'ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟದ ಶೈಲಿ ಮತ್ತು ಮನೋಭಾವ ಬದಲಾಗಬಾರದು. ವಿರಾಟ್ ಕೊಹ್ಲಿ ತಂಡದ ಅತ್ಯಂತ ಪ್ರಮುಖ ಆಟಗಾರ ಎಂಬುದು ನಿಜ. ಆದರೆ ಇಡೀ ತಂಡದ ಯಶಸ್ಸು ಕೇವಲ ಅವರೊಬ್ಬರ ಮೇಲೆಯೇ ಅವಲಂಬಿತವಾಗಿಲ್ಲ. ಈ ಬದಲಾವಣೆಯೇ ಆರ್ಸಿಬಿಯನ್ನು ಇಷ್ಟೊಂದು ಬಲಿಷ್ಠ ತಂಡವನ್ನಾಗಿ ರೂಪಿಸಿದೆ,' ಎಂದು ಹೇಳಿದ್ದಾರೆ.
'ವಿರಾಟ್ ಇದೇ ಶೈಲಿಯಲ್ಲಿ ತಮ್ಮ ಆಟವನ್ನು ಮುಂದುವರಿಸಬೇಕಿದೆ. ಏಕೆಂದರೆ ಪಂದ್ಯಾವಳಿಯ ಅಂತಿಮ ಹಂತಗಳಲ್ಲಿ ಅವರು ಎಲ್ಲ ಜವಾಬ್ದಾರಿಯನ್ನು ತಮ್ಮ ಮೇಲೇ ಹೇರಿಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಒಂದು ವೇಳೆ ಅವರು ಹಾಗೆ ಮಾಡಿದರೆ, ಅದು ಆರ್ಸಿಬಿ ತಂಡಕ್ಕೆ ಅಪಾಯಕಾರಿಯಾದ ಸನ್ನಿವೇಶವಾಗಬಹುದು,' ಎಂದು ಮಂಜ್ರೇಕರ್ ಹೇಳಿದ್ದಾರೆ.
ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದರೂ ಪ್ಲೇ-ಆಫ್ ಪಂದ್ಯಗಳಲ್ಲಿ ತಮ್ಮ ಎಂದಿನ ಅಬ್ಬರವನ್ನು ಮರುಸೃಷ್ಟಿಸಲು ಕೊಹ್ಲಿ ಈವರೆಗೆ ಸ್ವಲ್ಪ ಪರದಾಡಿದ್ದಾರೆ. ಪ್ಲೇ-ಆಫ್ಗಳಲ್ಲಿ ಆಡಿರುವ 17 ಇನ್ನಿಂಗ್ಸ್ಗಳಲ್ಲಿ ಅವರು 26.4ರ ಸರಾಸರಿ ಮತ್ತು 121.1ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 396 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ ಎರಡು ಅರ್ಧಶತಕಗಳಿದ್ದು, ಅಜೇಯ 70 ರನ್ ಅವರ ಗರಿಷ್ಠ ಮೊತ್ತವಾಗಿದೆ.
ಉಪಯುಕ್ತ ಕೊಡುಗೆ ನೀಡಿದ ಕೊಹ್ಲಿ
ಹಾಲಿ ಚಾಂಪಿಯನ್ ಆರ್ಸಿಬಿ ಈ ಸೀಸನ್ನಲ್ಲಿ ಹಲವು ಬಾರಿ 200 ರನ್ಗಳ ಗಡಿಯನ್ನು ದಾಟಿದೆ. ಇದಕ್ಕೆ ಅನುಭವಿ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ಅವರ ಉಪಯುಕ್ತ ಕೊಡುಗೆ. ಜೊತೆಗೆ ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಜೋಶ್ ಹೇಜಲ್ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರ ಅಮೋಘ ನಾಯಕತ್ವದ ಪ್ರದರ್ಶನವೂ ಕಾರಣವಾಗಿದೆ.
ಧರ್ಮಶಾಲಾದ ಮೈದಾನದಲ್ಲಿ ಹೆಚ್ಚಿನ ಬೌನ್ಸ್ ಇರುವುದರಿಂದ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ವೇಗದ ಅಸ್ತ್ರ ಕಗಿಸೊ ರಬಾಡ ನಡುವಿನ ಕಾದಾಟವು ರೋಚಕ ಕ್ಷಣವಾಗಿತ್ತು. ಗುಜರಾತ್ ಟೈಟಾನ್ಸ್ ವೇಗಿಗಳ ಆರಂಭಿಕ ದಾಳಿಯನ್ನು ಆರ್ಸಿಬಿ ನಾಯಕ ಉತ್ತಮವಾಗಿ ಎದುರಿಸಿದ್ದು, ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಪವರ್ಪ್ಲೇನಲ್ಲಿ ಉತ್ತಮ ರನ್ಗಳು ಬಂದಿದ್ದವು. ಬಳಿಕ ಬಂದ ರಜತ್ ಆಕ್ರಮಣಕಾರಿ ಆಟ ಆಡಿ ಅಜೇಯ 93 ರನ್ ಕಲೆಹಾಕಿ ತಂಡದ ಮೊತ್ತವನ್ನು 254ಕ್ಕೆ ಮುಟ್ಟಿಸಿದರು.












Click it and Unblock the Notifications