ಹೈಕಮಾಂಡ್ ಆಫರ್ಗೆ ನೋ ಎಂದ್ರಾ ಸಿದ್ದರಾಮಯ್ಯ? ಡಿಕೆಶಿಗೆ ಮತ್ತೆ ನಿರಾಸೆ, ದೆಹಲಿಯಲ್ಲಿ ಚರ್ಚೆ ಆಗಿದ್ದೇನು?
ನವದೆಹಲಿ/ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಉಂಟಾಗಿದ್ದ ಸಿಎಂ ನಾಯಕತ್ವ ಬದಲಾವಣೆಯ ಗೊಂದಲಕ್ಕೆ ತೆರೆ ಎಳೆಯಲು ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ನಿಂದ ನಡೆದ ಮಹತ್ವದ ಸಭೆ ಅಂತ್ಯಗೊಂಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಕಾಂಗ್ರೆಸ್ ವರಿಷ್ಠರು ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ. ಇದೇ ವೇಳೆ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಫರ್ವೊಂದನ್ನು ನೀಡಿದ್ದಾರೆ ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಅವರ ಅದನ್ನು ಒಪ್ಪಲು ಮನಸ್ಸು ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿವೆ.
ನಿಗದಿಯಂತೆ ಮಂಗಳವಾರ ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಸಭೆ ಜರುಗಿತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಜೊತೆಗೂಡಿಸಿ ಸರಣಿ ಸಭೆ ಹಾಗೂ ಒನ್ ಟು ಒನ್ ಸಭೆಗಳು ನಡೆದಿವೆ. ಈ ವೇಳೆ ಸಿದ್ದರಾಮಯ್ಯ ಅವರ ಮನವೊಲಿಸರು ವರಿಷ್ಠರು ಮುಂದಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಒಪ್ಪದೇ ನಿರಾಕರಿಸಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಕಾಂಗ್ರೆಸ್ ಹೈಕಮಾಂಡ್ ಪ್ಲ್ಯಾನ್ ವಿಫಲವಾಗಿದೆ.

ಸಿಎಂಗೆ ಹೈಕಮಾಂಡ್ ನೀಡಿದ ಆಫರ್ ಏನು?
ರಾಜ್ಯದಲ್ಲಿ ಮುಂದೆ ರಾಜ್ಯಸಭಾ ಚುನಾವಣೆ ಮತ್ತು ವಿಧಾನಪರಿಷತ್ಗೆ ಚುನಾವಣೆ ನಡೆಯಲಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಲು ಯೋಚಿಸಿ ದಾಳ ಉರುಳಿಸಿತ್ತು. ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿ ಆಫರ್ ನೀಡಿ ರಾಹುಲ್ ಗಾಂಧಿ ಸೇರಿದಂತೆ ಎಲ್ಲ ವರಿಷ್ಠರು ಮನವೊಲಿಕೆಗೆ ಮುಂದಾದರು. ಈ ಮೂಲಕ ಸಿದ್ದರಾಮಯ್ಯ ಅವರನ್ನು ರಾಜ್ಯಸಭಾ ಸದಸ್ಯರಾಗಿ ಮಾಡಿದರೆ, ಕರ್ನಾಟಕದ ನಾಯಕತ್ವ ಬದಲಾವಣೆ ಗೊಂದಲ ಅರ್ಧ ನಿವಾರಣೆ ಆದಂತಾಗುತ್ತದೆ. ಈ ಹಿಂದೆ ಮಾತುಕೊಟ್ಟಂತೆ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಕುರ್ಚಿ ನೀಡಿದರೆ ಎರಡು ಕಡೆ ಗೆದ್ದಂತಾಗುತ್ತದೆ ಎಂದು ಹೈಕಮಾಂಡ್ ಆಲೋಚಿಸಿತ್ತು.
ಆದರೆ ಸಿದ್ದರಾಮಯ್ಯ ಅವರು ರಾಜ್ಯಸಭಾ ಸ್ಥಾನದ ಆಫರ್ ಅನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ತಾವು ಈ ಹಿಂದೆ ನೀಡಿದ್ದ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಬದ್ಧತೆ ಪ್ರದರ್ಶಿಸಿದ್ದಾರೆ. ಇದರಿಂದ ಮುಂದಿನ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯುವುದು ಪಕ್ಕಾ ಆಗಿದೆ.
ಡಿಕೆ ಶಿವಕುಮಾರ್ ಗೆ ಮುಂದುವರಿದ ಸಸ್ಪೆನ್ಸ್!
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಗೊಂದಲ ವರ್ಷದಿಂದ ಕೇಳಿ ಬರುತ್ತಿತ್ತು. ಇಂದಿನ ಸಭೆಯಲ್ಲಿ ಅದಕ್ಕೆ ಪೂರ್ಣ ವಿರಾಮ ಬೀಳಲಿದೆ. ಸರ್ಕಾರ ರಚನೆ ವೇಳೆ ನಡೆದ ಒಪ್ಪಂದಂತೆ ಹೈಕಮಾಂಡ್ ಸಿದ್ದರಾಮಯ್ಯರನ್ನು ಮನವೊಲಿಸಿ ತಮಗೆ ಸಿಎಂ ಸ್ಥಾನ ನೀಡುತ್ತಾರೆ ಎಂದೆಲ್ಲ ಭಾವಿಸಿದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾಗಿದೆ. ನಾಯಕತ್ವ ಬದಲಾವಣೆಯ ಕುತೂಹಲ ಮುಂದೂಡಿದ್ದು, ಆಸೆಕಂಗಳಲ್ಲಿದ್ದ ಡಿಕೆಶಿ ಮತ್ತೆ ಹಿನ್ನಡೆ ಉಂಟಾಗಿದೆ.
ವರಿಷ್ಠರ ಮುಂದೆ ಪಟ್ಟು ಬಿಡದ ಉಭಯ ನಾಯಕರು
ದೆಹಲಿಯಲ್ಲಿ ಇಂದು ಸರಣಿ ಸಭೆಗಳು ನಡೆದಿದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಾಯಿತು. ವರಿಷ್ಠರ ಯಾವ ಮಾತಿಗೂ ಉಭಯ ನಾಯಕರು ಜಗ್ಗಿಲ್ಲ. ಇತ್ತ ಸಿದ್ದರಾಮಯ್ಯ ಅವರು ಸಂಪುಟ ಪುನರ್ ರಚನೆಗೆ ಅವಕಾಶ ನೀಡುವಂತೆ ಒತ್ತಡ ಹೇರಲು ಮುಂದಾದರೆ, ನಾಯಕತ್ವ ಬದಲಾವಣೆಗಿಂತ ಹೆಚ್ಚು ಅವರು ಕ್ಯಾಬಿನೆಟ್ ವಿಚಾರವನ್ನು ಹೆಚ್ಚಾಗಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಕೊಟ್ಟ ಮಾತಿನಂತೆ ಅಧಿಕಾರ ಹಂಚಿಕೆ ಮಾಡಿ, ಮಾತು ಉಳಿಸಿಕೊಳ್ಳಿ ಎಂದು ಡಿಕೆ ಶಿವಕುಮಾರ ಅವರು ಪಟ್ಟು ಹಿಡಿದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಹೈಕಮಾಂಡ್ಗೆ ಇರುವ ಭಯವೇನು?
ಕರ್ನಾಟಕದಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾರೆ. ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿದರೆ ಮುಂದೆ ಬರಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ವಿಧಾನಸಭಾ ಮತ್ತು ಇನ್ನಿತರ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಾರದೇ ಮುಂದಿನ ಎರಡು ವರ್ಷ ಸುಮ್ಮನಿದ್ದು, 2028ರ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಇದರಿಂದ ಕೈತಪ್ಪಲಿರುವ ಸಂಭಾವ್ಯ ಒಕ್ಕಲಿಗರ ಮತಗಳು, ಅಹಿಂದ ಮತಗಳು ತಮಗೆ ಬರುತ್ತವೆ ಎಂಬ ಆಯೋಚನೆಯಲ್ಲಿ ಹೈಕಮಾಂಡ್ಗೆ ಸೂಕ್ಷ್ಮ ಹೆಜ್ಜೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಗುಟ್ಟು ಬಿಟ್ಟು ಕೊಡದ ಕೆಸಿ ವೇಣುಗೋಪಾಲ್
ಸರಣಿ ಸಭೆಗಳಲ್ಲಿ ಹೆಚ್ಚಾಗಿ ನಾಯಕತ್ವ ಬದಲಾವಣೆ, ಅದಕ್ಕಾಗಿ ಸಿದ್ದರಾಮಯ್ಯರ ಮನವೊಲಿಕೆ, ರಾಷ್ಟ್ರ ರಾಜಕಾರಣದ ಆಫರ್ ಕುರಿತು ಹೆಚ್ಚಿನ ಚರ್ಚೆಗಳು ಆಗಿವೆ. ಆದರೆ ನಾಯಕತ್ವ ಬದಲಾವಣೆ ಬಗ್ಗೆ ಏನು ಚರ್ಚೆ ಆಗಿಲ್ಲ. ಕೇಲವ ರಾಜ್ಯಸಭಾ ಸದಸ್ಯರ ಆಯ್ಕೆ ಕುರಿತು ಚರ್ಚೆಗಳು ನಡೆದಿವೆ ಎಂದಷ್ಟೇ ಹೇಳಿದ್ದಾರೆ. ಜೊತೆಗೆ ಅಧಿಕಾರ ಹಂಚಿಕೆ ಕುರಿತು ಪ್ರಸಾರವಾಗುತ್ತಿರುವ ಮಾಧ್ಯಮ ವರದಿಗಳು ಕೇವಲ ವದಂತಿ ಎಂದು ಮಾತನಾಡಿದ್ದಾರೆ. ಈ ಮೂಲಕ ಹೈಕಮಾಂಡ್ ಗೊಂದಲಕ್ಕೆ ತೆರೆ ಎಳೆಯುವಲ್ಲಿ ವಿಫಲವಾಗಿದೆ. ನಾಯಕತ್ವ ಬದಲಾವಣೆ ಸಸ್ಪೆನ್ಸ್ ಮುಂದುವರಿಯಲಿದೆ.














Click it and Unblock the Notifications