ರಾಷ್ಟ್ರಪತಿ ಹುದ್ದೆಗೆ ಮೋಹನ್ ಭಾಗವತ್ ಹೆಸರು ಮುಂದಿಟ್ಟ ಶಿವಸೇನೆ
ಇನ್ನೇನು ಬರುವ ಜುಲೈನಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅವಧಿ ಪೂರ್ಣವಾಗಲಿದೆ. ರಾಷ್ಟ್ರಪತಿ ಸ್ಥಾನಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೆಸರನ್ನು ಶಿವಸೇನೆ ಪ್ರಸ್ತಾಪಿಸಿದೆ.
ಮುಂಬೈ, ಮಾರ್ಚ್ 27: ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಶಿವಸೇನೆಯ ಆಯ್ಕೆ ಯಾರು ಗೊತ್ತಾ? ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್. ಎಲ್ ಕೆ ಅಡ್ವಾಣಿ ಅವರ ಹೆಸರು ಕೂಡ ಓಡಾಡುತ್ತಿದೆ ಎಂಬುದು ಬೇರೆ ಮಾತು. ಆದರೆ ಎನ್ ಡಿಎ ಮೈತ್ರಿ ಕೂಟದ ಭಾಗವಾಗಿರುವ ಶಿವಸೇನೆಯು ತನ್ನ ಆಯ್ಕೆಯಾಗಿ ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಹೆಸರನ್ನು ಮುಂದಿಟ್ಟಿದೆ.
ಮುಂದಿನ ಜುಲೈನಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅವಧಿ ಮುಗಿಯಲಿದೆ. ಆದ್ದರಿಂದ ಆ ಸ್ಥಾನಕ್ಕೆ ಆಯ್ಕೆ ನಡೆಯಬೇಕಿದೆ. ತನ್ನ ಆಯ್ಕೆಯಂತೆ ರಾಷ್ಟ್ರಪತಿಗಳನ್ನು ಕೂರಿಸಲು ಬಿಜೆಪಿ ಮತ್ತು ಎನ್ ಡಿಎ ಮೈತ್ರಿ ಕೂಟಕ್ಕೆ ಎಐಎಡಿಎಂಕೆ ಹಾಗೂ ಬಿಜೆಡಿ ಬೆಂಬಲದ ಅಗತ್ಯವಿದೆ.[ಭಾರತದ ಮುಂದಿನ ರಾಷ್ಟ್ರಪತಿ ಲಾಲ್ ಕೃಷ್ಣ ಅಡ್ವಾಣಿ?]
ಅಭ್ಯರ್ಥಿಯ ಆಯ್ಕೆ ಬಿಜೆಪಿಯೇ ಮಾಡುತ್ತದೋ ಅಥವಾ ಒಮ್ಮತದ ಆಯ್ಕೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ ಕೆ ಅಡ್ವಾಣಿ ಹೆಸರು ಸೂಚಿಸಿದ್ದರು. ಇನ್ನು ಈ ಹುದ್ದೆ ರೇಸಿನಲ್ಲಿ ಮುರಳಿ ಮನೋಹರ್ ಜೋಶಿ, ನಜ್ಮಾ ಹೆಪ್ತುಲ್ಲಾ ಕೂಡ ಇದ್ದಾರೆ. ಅಮಿತಾಬ್ ಬಚ್ಚನ್ ಹೆಸರು ಕೂಡ ಒಮ್ಮದ ಅಭ್ಯರ್ಥಿಯಾಗಿ ಪ್ರಸ್ತಾವ ಆಗಿದೆ.
ಹಿಂದೂ ರಾಷ್ಟ್ರದ ಕನಸು ನನಸಾಗಬೇಕು ಅಂದರೆ ಮೋಹನ್ ಭಾಗವತ್ ಅವರು ರಾಷ್ಟ್ರಪತಿ ಆಗಬೇಕು ಎಂದು ಶಿವಸೇನೆ ಹೇಳಿದೆ. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಆಯ್ಕೆ ಮಾಡಿರುವುದನ್ನು ಪ್ರಸ್ತಾಪಿಸಿರುವ ಶಿವಸೇನೆ, ಆದಿತ್ಯನಾಥ್ ಹಿಂದೂ ಮುಖಂಡ. ಆದ್ದರಿಂದ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಮಾಡಿದರೆ ಭಾರತದ ಹಿಂದೂ ರಾಷ್ಟ್ರದ ಕನಸು ನಿಜವಾಗಲು ಸಹಾಯವಾಗುತ್ತದೆ ಎಂದು ಶಿವಸೇನೆ ಹೇಳಿದೆ.