"ಮಹಾರಾಷ್ಟ್ರ ಸರ್ಕಾರವೇಕೆ ಇಂಧನ ಮೇಲಿನ ವ್ಯಾಟ್ ಕಡಿತಗೊಳಿಸುವುದಿಲ್ಲ?"
ಮುಂಬೈ, ಏಪ್ರಿಲ್ 28: ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗಬೇಕಾದರೆ ರಾಜ್ಯ ಸರ್ಕಾರಗಳು ಅದರ ಮೇಲೆ ಹಾಕುವ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಸರ್ಕಾರವು 2018 ರಿಂದ 79,412 ಕೋಟಿ ರೂಪಾಯಿಗಳನ್ನು ಇಂಧನ ತೆರಿಗೆಯಾಗಿ ಸಂಗ್ರಹಿಸಿದೆ. ಈ ವರ್ಷ 33,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರವು ಜನರಿಗೆ ರಿಲೀಫ್ ನೀಡುವುದಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಏಕೆ ಕಡಿತಗೊಳಿಸಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ಆಮದು ಮಾಡಿಕೊಳ್ಳುವ ಮದ್ಯದ ಬದಲು ಇಂಧನದ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ಪೆಟ್ರೋಲ್ ಅಗ್ಗವಾಗಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಇಂಧನದ ಮೇಲಿನ ವ್ಯಾಟ್ ಎಷ್ಟು?:
ಮಹಾರಾಷ್ಟ್ರ ಸರ್ಕಾರವು ಒಂದು ಲೀಟರ್ ಪೆಟ್ರೋಲ್ ಮೇಲೆ 32.15 ರೂಪಾಯಿ ಮೌಲ್ಯವರ್ಧಿಕ ತೆರಿಗೆಯನ್ನು ವಿಧಿಸಲಾಗುತ್ತಿದೆ. ಅದೇ ರೀತಿ ಕಾಂಗ್ರೆಸ್ ಸರ್ಕಾರವಿರುವ ರಾಜಸ್ಥಾನದಲ್ಲಿ 29.10 ರೂಪಾಯಿ ತೆರಿಗೆಯನ್ನು ವಿಧಿಸಲಾಗುತ್ತಿದೆ. ಆದರೆ ಬಿಜೆಪಿ ಆಡಳಿತವಿರುವ ಉತ್ತರಾಖಂಡದಲ್ಲಿ ಕೇವಲ 14.51 ರೂಪಾಯಿ ಹಾಗೂ ಉತ್ತರ ಪ್ರದೇಶದಲ್ಲಿ 16.50 ರೂಪಾಯಿ ತೆರಿಗೆಯನ್ನು ಹಾಕಲಾಗುತ್ತದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
ಇಂಧನದ ಮೇಲಿನ ತೆರಿಗೆ ಕಡಿತಕ್ಕೆ ಪ್ರಧಾನಿ ಮನವಿ:
ಕೇಂದ್ರ ಸರ್ಕಾರವು ಈ ಹಿಂದೆಯೇ ಒಂದು ಬಾರಿ ಇಂಧನ ದರದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿತ್ತು. ಅಂದು ತೆರಿಗೆ ಕಡಿತಗೊಳಿಸದ ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಮತ್ತು ಜಾರ್ಖಂಡ್ ರಾಜ್ಯಗಳು ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ(ವ್ಯಾಟ್)ಯನ್ನು ತಗ್ಗಿಸಬೇಕು. ಆ ಮೂಲಕ ರಾಜ್ಯದ ಜನರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು.

ಕೇಂದ್ರ ಸರ್ಕಾರ ಕಡಿತಗೊಳಿಸಿದ ತೆರಿಗೆ ಎಷ್ಟು?:
2021ರ ನವೆಂಬರ್ ತಿಂಗಳಿನಲ್ಲೂ ಪೆಟ್ರೋಲ್-ಡೀಸೆಲ್ ದರ ಗಗನಮುಖಿಯಾಗಿ ಏರಿಕೆಯಾಗಿತ್ತು. ಈ ಹಂತದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ತೆರಿಗೆಯನ್ನು 5 ರೂಪಾಯಿ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 10 ರೂಪಾಯಿ ಕಡಿತಗೊಳಿಸಲಾಗಿತ್ತು. ಕೇಂದ್ರ ಸರ್ಕಾರದ ನಿರ್ಧಾರದ ಬೆನ್ನಲ್ಲೇ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಇಂಧನ ದರದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಿದ್ದವು.












Click it and Unblock the Notifications