ಕಚೇರಿಗಳಿಗೆ ನುಗ್ಗಿದ ನೀರು, ಮುಂಬೈ ಮಳೆಯ 10 ಚಿತ್ರಗಳು
ಮುಂಬೈ, ಆಗಸ್ಟ್ 30 : ವಾಣಿಜ್ಯ ನಗರಿ ಮುಂಬೈ ಧಾರಾಕಾರ ಮಳೆಯಿಂದಾಗಿ ತತ್ತರಿಸಿ ಹೋಗಿದೆ. ನಗರದ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಬುಧವಾರ ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
'ತುರ್ತು ಕೆಲಸಗಳಿದ್ದರೆ ಮಾತ್ರ ಬನ್ನಿ, ಇಲ್ಲವಾದಲ್ಲಿ ಜನರು ಮನೆಯಲ್ಲಿಯೇ ಇರಿ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜನರಿಗೆ ಮನವಿ ಮಾಡಿದ್ದಾರೆ. ಮಹಾಮಳೆಗೆ ಇದುವರೆಗೂ ಐವರು ಬಲಿಯಾಗಿದ್ದಾರೆ.
Recommended Video
ಮುಂಬೈ ಮಹಾನಗರದಲ್ಲಿ ಮಳೆ, ಸಹಾಯವಾಣಿ ಸಂಖ್ಯೆಗಳು
ಮುಂಬೈನಲ್ಲಿನ ಪ್ರವಾಹ ಪರಿಸ್ಥಿತಿಯ ಹಿನ್ನಲೆಯಲ್ಲಿ ರಾಜ್ಯಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜನರ ಸಹಾಯಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲಾ ಅಧಿಕಾರಿಗಳು ಜನರ ಸಂಪರ್ಕಕ್ಕೆ ಸಿಗುವಂತೆ ಇರಬೇಕು ಎಂದು ದೇವೇಂದ್ರ ಫಡ್ನವೀಸ್ ಸೂಚನೆ ನೀಡಿದ್ದಾರೆ.
ಇನ್ನೂ ಭಾರೀ ಮಳೆ ಸುರಿಯಲಿದೆಯಂತೆ, ಮುಂಬೈ ಎಚ್ಚರ!
ನಗರದಲ್ಲಿ ವಾಹನ, ರೈಲು, ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನ ಜೊತೆ ಸಮುದ್ರದಲ್ಲಿ ಉಬ್ಬರ ಸೃಷ್ಟಿಯಾಗಿದೆ. ಆದ್ದರಿಂದ ನೀರು ಹರಿದು ಹೋಗದೇ ನಿಂತಿದೆ. ಉಬ್ಬರದ ಪರಿಣಾಮ ಸಮುದ್ರದ ನೀರು ನಗರಕ್ಕೆ ನುಗ್ಗುತ್ತಿದೆ.
ಮುಂಬೈ ಮಳೆಗೆ ಐದು ಸಾವು
ಮಂಗಳವಾರದಿಂದ ಸುರಿಯುತ್ತಿರುವ ಮಳೆಗೆ 5 ಜನರು ಬಲಿಯಾಗಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ಮೂವರು ಮುಂಬೈ ನಗರದಲ್ಲಿ ಮನೆ ಕುಸಿತದಿಂದ ಸಾವನ್ನಪ್ಪಿದ್ದಾರೆ. ಧಾಣೆಯಲ್ಲಿ 32 ವರ್ಷದ ಮಹಿಳೆ, ಯುವತಿ ಸಾವನ್ನಪ್ಪಿದ್ದಾರೆ.
ವಿಮಾನ, ರೈಲು ಸಂಚಾರಕ್ಕೆ ಅಡಚಣೆ
ಲೋಕಲ್ ರೈಲು ಸಂಚಾರ ಮತ್ತು ವಿಮಾನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರೈಲ್ವೆ ಹಳಿಯಲ್ಲಿ ನೀರು ತುಂಬಿಕೊಂಡಿದೆ. ಪ್ರಯಾಣಿಕರನ್ನು ಸ್ಥಳಾಂತರ ಮಾಡಲು ನೀರು ಕಡಿಮೆಯಾದರೂ ರಾತ್ರಿಯೂ ರೈಲು ಓಡಿಸುತ್ತೇವೆ ಎಂದು ರೈಲ್ವೆ ಹೇಳಿದೆ. 10 ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಕಾರು, ಬೈಕ್ ಮುಳುಗಡೆ
ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಕಾರು, ಬೈಕ್ ಮುಳುಗಿ ಹೋಗಿವೆ. ಜನರು ರಸ್ತೆಯಲ್ಲಿಯೇ ಕಾರನ್ನು ಬಿಟ್ಟು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಮುಂಬೈ ಪೊಲೀಸರು ಸಮುದ್ರ ತೀರಕ್ಕೆ ಹೋಗದಂತೆ ಜನರಗೆ ಎಚ್ಚರಿಕೆ ನೀಡಿದ್ದಾರೆ.
ವಾಹನ ಸಂಚಾರ ಅಸ್ತವ್ಯಸ್ತ
ಮುಂಬೈ ಮಹಾನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರ ವ್ಯವಸ್ಥೆ ಬಗ್ಗೆ ಪೊಲೀಸರು ಟ್ವಿಟರ್ ಮೂಲಕ ಮಾಹಿತಿ ನೀಡುತ್ತಿದ್ದರು.
ಕಚೇರಿಗಳಿಗೆ ನುಗ್ಗಿದ ನೀರು
ಧಾರಾಕಾರ ಮಳೆ ಸುರಿದಿದ್ದರಿಂದ ಎಲ್ಲಾ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಚೇರಿಗಳಿಗೆ ಮಳೆ ನೀರು ನುಗ್ಗಿದೆ. ಕಿಂಗ್ ಎಡ್ವರ್ಡ್ ಆಸ್ಪತ್ರೆಗೂ ನೀರು ನುಗ್ಗಿತ್ತು.
ಷೇರು ಮಾರುಕಟ್ಟೆ ಕಥೆ ಏನು?
ಷೇರು ಮಾರುಕಟ್ಟೆ ಬಿಎಸ್ಇ, ಎನ್ಎಸ್ಇ ತೆರೆದಿರಲಿದೆ. ಕೆಲವು ಸರ್ಕಾರಿ ಕಚೇರಿಗಳಲ್ಲಿ ಬೇಗನೇ ಹೊರಡುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿದೆ. 'ಮಳೆ ಹೆಚ್ಚಾದರೆ ಕೆಲವು ಇಲಾಖೆಗಳ ನೌಕರರಿಗೆ ಮನೆಯಲ್ಲಿಯೇ ಇರುವಂತೆ' ಮುಖ್ಯಕಾರ್ಯದರ್ಶಿ ಸುಮಿತ್ ಮಲ್ಲಿಕ್ ಸೂಚನೆ ಕೊಟ್ಟಿದ್ದಾರೆ.
ಎನ್ಡಿಆರ್ಎಫ್ ತಂಡ ಸಿದ್ಧ
ರಾಷ್ಟ್ರೀಯ ವಿಪತ್ತು ನಿರ್ಹವಣಾ ಪಡೆ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ. ವಾಯುಪಡೆ ಹೆಲಿಕಾಪ್ಟರ್ಗಳನ್ನು ಸಿದ್ಧಪಡಸಿಕೊಂಡಿದ್ದು, ಜನರನ್ನು ಸ್ಥಳಾಂತರ ಮಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮೋದಿ ಜೊತೆ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
48ಗಂಟೆಗಳ ಮುನ್ನೆಚ್ಚರಿಕೆ
ಮುಂದಿನ 48 ಗಂಟೆಗಳ ಕಾಲ ಮುಂಬೈನಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಅಗತ್ಯ ವಸ್ತುಗಳು ಮತ್ತು ಆಹಾರ ದಾಸ್ತಾನು ಇಟ್ಟುಕೊಳ್ಳುವಂತೆ ಜನರಿಗೆ ಮನವಿ ಮಾಡಲಾಗಿದೆ.
ಶಾಲೆಗಳಿಗೆ ರಜೆ
ಬುಧವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ಮಹಾರಾಷ್ಟ್ರ ಸರ್ಕಾರ ರಜೆ ಘೋಷಣೆ ಮಾಡಿದೆ. ಮನೆಯಲ್ಲಿಯೇ ಇರುವಂತೆ ಮುಖ್ಯಮಂತ್ರಿಗಳು ಜನವರಿ ಮನವಿ ಮಾಡಿದ್ದಾರೆ.